ಸಿಂದಗಿ: ಉಪ ಚುನಾವಣೆ ನಿಮಿತ್ತ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಅವರು ತೆರೆದ ವಾಹನದಲ್ಲಿ ಅಭ್ಯರ್ಥಿ ರಮೇಶ ಭೂಸನೂರ ಪರ ಭರ್ಜರಿ ರೋಡ್ ಶೋ ಮೂಲಕ ಮತಯಾಚಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಅಭ್ಯರ್ಥಿ ರಮೇಶ ಭೂಸನೂರ ಪರ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಮಾತನಾಡಿ, ಈ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ಗಳಿಗೆ ಮತ ನೀಡಿದರೆ ಅಭಿವೃದ್ಧಿಗೆ ಮತ್ತೆ ನಮ್ಮ ಹತ್ತಿರ ಕೈ ಚಾಚಬೇಕಾಗುತ್ತದೆ ಆದರೆ ನಮ್ಮ ಅಭ್ಯರ್ಥಿ ರಮೇಶ ಭೂಸನೂರ ಅವರನ್ನು ಆಯ್ಕೆ ಮಾಡಿದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಯಾರಿಗೂ ಕೈಚಾಚುವ ಪ್ರಸಂಗ ಬರುವುದಿಲ್ಲ ಈ ಕ್ಷೇತ್ರವನ್ನು ಅಭಿವೃದ್ದಿ ಮಾಡಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಸಾಧ್ಯ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಾಯಕರುಗಳು ಸುಳ್ಳಿನ ಮನೆ ಕಟ್ಟುತ್ತಿದ್ದಾರೆ ಜನರು ಕೊಂಕು ಮಾತಿಗೆ ಬೆಲೆ ಕೊಡಬಾರದು. ಈ ಅಭೂತಪೂರ್ವ ಜನಸ್ತೋಮ ನೋಡಿದರೆ ಖಂಡಿತವಾಗಿ ನಮ್ಮ ಅಭ್ಯರ್ಥಿ ರಮೇಶ ಭೂಸನೂರ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಸತಿ ಸಚಿವ ವಿ.ಸೋಮಣ್ಣ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಅಭ್ಯರ್ಥಿ ರಮೇಶ ಭೂಸನೂರ, ಚಿತ್ರನಟಿ ಶೃತಿ, ಎಸ್.ಕೆ.ಬೆಳ್ಳುಬ್ಬಿ, ವಿಜೂಗೌಡ ಪಾಟೀಲ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಂಡಲ ಅದ್ಯಕ್ಷ ಈರಣ್ಣಾ ರಾವೂರ ಸೇರಿದಂತೆ ಅನೇಕರು ಇದ್ದರು.