ಬೀದರ : ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿರುವ ಸಚಿವ ಪ್ರಭು ಚವ್ಹಾಣ ಅವರ ಮಗ ಪ್ರತೀಕ ಚವ್ಹಾಣ ಅವರ ಜಾತಿ ಪ್ರಮಾಣ ಪತ್ರ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ವಕ್ತಾರರು ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಸಂಗ್ರಾಮ ಆಗ್ರಹಿಸಿದ್ದಾರೆ.
ರಾಜ್ಯದ ಮಂತ್ರಿಗಳು ಹಾಗೂ ಔರಾದ ಶಾಸಕರಾದ ಪ್ರಭು ಚವ್ಹಾಣ ಅವರ ಪುತ್ರ ಪ್ರತೀಕ ಚವ್ಹಾಣ ಅವರು ಮಹಾರಾಷ್ಟ್ರದಲ್ಲಿಯೇ ಹುಟ್ಟಿದ್ದು, ಮಹಾರಾಷ್ಟ್ರದಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣ ಪದವಿಪೂರ್ವ ಶಿಕ್ಷಣ ಮುಗಿಸಿದ್ದು,
ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಕಾನೂನು ಪದವಿ ಅಧ್ಯಯನ ಮಾಡುತ್ತಿರುವರು. ಪ್ರತೀಕ ಅವರು ಮಹಾರಾಷ್ಟ್ರದಲ್ಲಿ ಪಡಿತರ ಚೀಟಿ ಸಹ ಹೊಂದಿರುತ್ತಾರೆ.
ಔರಾದ ತಹಸಿಲ್ದಾರರು ಯಾವುದೇ ದಾಖಲೆಗಳನ್ನು ಪಡೆದುಕೊಳ್ಳದೆ ಪ್ರತೀಕ್ಗೆ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿರುತ್ತಾರೆ.
ಈ ನಕಲಿ ಜಾತಿ ಪ್ರಮಾಣ ಪತ್ರದ ಕುರಿತು ಕಮಲನಗರ ತಾಲೂಕಿನ ಮುಧೋಳ ಗ್ರಾಮದ ಧನರಾಜ ಬಾಪು ಹಾಗೂ ಅದೇ ತಾಲೂಕಿನ ಹಾಲಳ್ಳಿ ಗ್ರಾಮದ ನಾಮದೇವ ಜಯವಂತ ಈ ಇಬ್ಬರು ಮಾರ್ಚ್ 15, 2021 ರಂದು ಔರಾದ ತಹಸಿಲ್ದಾರರು ಹಾಗೂ ಪ್ರತೀಕ ಚವ್ಹಾಣ ಅವರ ವಿರುದ್ಧ ಕ್ರಮ ಜರುಗಿಸಲು ಬೀದರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಆದರೆ ಮಾನ್ಯ ಜಿಲ್ಲಾಧಿಕಾರಿಗಳು 29-03-2021ರ ವರೆಗೆ ಪ್ರತೀಕ ಚವ್ಹಾಣ ಹಾಗೂ ಔರಾದ ತಹಸಿಲ್ದಾರ್ ವಿರುದ್ಧ ರಾಜಕೀಯ ಒತ್ತಡದಿಂದಾಗಿ ಯಾವುದೇ ಕ್ರಮ ಜರುಗಿಸಲಿಲ್ಲ.
ಅದಕ್ಕಾಗಿ 6-4-2021 ರಂದು ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ಈ ವಿಚಾರವಾಗಿ ದೂರು ನೀಡಲಾಗಿತ್ತು. ಮರಳಿ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳ ಸ್ಪಷ್ಟೀಕರಣ ಕೇಳಿದಾಗಲೂ ಜಿಲ್ಲಾಧಿಕಾರಿಗಳು ಯಾವುದೇ ಉತ್ತರ ನೀಡಲಿಲ್ಲ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿ ಮೀನಾಕ್ಷಿ ಸಂಗ್ರಾಮ ಆರೋಪವನ್ನು ಮಾಡಿದ್ದಾರೆ.
15-04-2021 ರಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿತ್ತು. ಆದರೂ ಯಾವುದೇ ಪ್ರಯೋಜನ ಆಗಲಿಲ್ಲ. ಅದಕ್ಕಾಗಿ 24-07-2021 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಈ ವಿಚಾರವಾಗಿ ದೂರು ಸಲ್ಲಿಸಿದಾಗ ರಾಷ್ಟ್ರೀಯ ಎಸ್.ಸಿ. ಆಯೋಗವು ಬೀದರ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಈ ಕುರಿತು 28-07-2021 ತುರ್ತು ನಿರ್ದೇಶನ ನೀಡಿದೆ. ನಿರ್ದೇಶನ ನೀಡಿದ ಮರುದಿನವೇ ಬೀದರ ಡಿ.ಸಿ. ಅವರು ಸದರಿಯವರಿಗೆ ಆಗಸ್ಟ್ 6ನೇ ತಾರೀಕಿನಂದು ಪ್ರತೀಕ ತಂದೆ ಪ್ರಭು ಚವ್ಹಾಣ ಈತನ ಜಾತಿ ಪ್ರಮಾಣ ಪತ್ರದ ಕುರಿತು ವಿಚಾರಣೆಗೆ ಮುಂದಾಗಿದ್ದಾರೆ.
ಮಾರ್ಚ ತಿಂಗಳಿನಿಂದ ಇಲ್ಲಿಯವರೆಗೆ ಪ್ರಭು ಚವ್ಹಾಣ ಅವರ ರಾಜಕೀಯ ಒತ್ತಡಕ್ಕೆ ಮಣಿದು ಸದರಿ ಪ್ರಕರಣ ಇತ್ಯರ್ಥಪಡಿಸದೆ ಮೀನಾಮೇಷ ಎಣಿಸಿದ ಜಿಲ್ಲಾಧಿಕಾರಿಗಳು ಈಗ ರಾಷ್ಟ್ರೀಯ ಅನುಸೂಚಿತ ಜಾತಿ ಆಯೋಗದ ನಿರ್ದೇಶನ ಬಂದ ಬಳಿಕವೆ ಸದರಿ ವಿಚಾರಣೆಗೆ ಮುಂದಾಗಿರುವುದರಿಂದ ಆಗಸ್ಟ್ 6ರಂದು ನಡೆಯುವ ವಿಚಾರಣೆ ಬಗ್ಗೆ ನಮಗೆ ಜಿಲ್ಲಾಧಿಕಾರಿಗಳ ಮೇಲೆ ಅನುಮಾನ ಉಂಟಾಗಿದೆ ಎಂದರು.
ಈ ಪ್ರಕರಣದ ವಿಚಾರಣೆ ಸಮಯದಲ್ಲಿ ಕಡ್ಡಾಯವಾಗಿ ವಿಡಿಯೋ ಹಾಗೂ ಆಡಿಯೋ ರೆಕಾರ್ಡಿಂಗ್ ಮಾಡುವ ಮೂಲಕ ಈ ಪ್ರಕರಣದ ತನಿಖೆ ಕೈಗೊಳ್ಳಬೇಕು. ಅದು ಆಗದಿದ್ದರೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ,
ಟೈಮ್ಸ್ ಆಫ್ ಕರ್ನಾಟಕ, ಬೀದರ