ಮೂಡಲಗಿ – ಸಂವಿಧಾನದಿಂದ ಎಷ್ಟು ಉಪಯೋಗ ಇದೆ ಎಂಬುದಕ್ಕೆ ಬೇರೆ ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಹೆಣ್ಣು ಮಗಳ ಪುತ್ರನೊಬ್ಬ ದೇಶದ ಪ್ರಧಾನಿ ಆಗಿರುವುದೇ ಉದಾಹರಣೆ.ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನಮ್ಮ ಸಂವಿಧಾನ ಅವಕಾಶ ನೀಡುತ್ತದೆ ಸಂವಿಧಾನ ನಮಗೆ ನೀಡಿರುವ
ಹಕ್ಕುಗಳ ರಕ್ಷಣೆಗೆ ನಾವು ಬದ್ಧರಾಗಿರಬೇಕು ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಮೂಡಲಗಿಯ ಗಾಂಧಿ ಚೌಕದಲ್ಲಿ ೭೩ ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಹುಟ್ಟಿದ್ದರೂ ಅನೇಕ ರೀತಿಯ ಅವಿಷ್ಕಾರ ಹಾಗೂ ಸಾಧನೆ ಮಾಡಿದ ಮಹನೀಯರಿಗೆ ಪದ್ಮ ಪ್ರಶಸ್ತಿ ಗಳು ಸಿಕ್ಕಿವೆ ಎಂದು ಹೇಳಿದ ಅವರು, ಕರ್ನಾಟಕದ ಐವರು ಪದ್ಮ ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.
ತಹಶೀಲ್ದಾರ ಡಿ ಜೆ ಮಹಾತ್ ಅವರು ಮಾತನಾಡಿ, ಅಂಬೇಡ್ಕರ ಅವರ ಅಧ್ಯಕ್ಷತೆಯಲ್ಲಿ ನಮ್ಮ ಮುಂದಿನ ಭಾರತ ಹೇಗಿರಬೇಕು ಎಂಬ ಬಗ್ಗೆ ದೀರ್ಘವಾಗಿ ಆಲೋಚಿಸಿ ೨ ವರ್ಷ,೧೧ ತಿಂಗಳು, ೧೮ ದಿನಗಳವರೆಗೆ ಸಂವಿಧಾನವನ್ನು ಬರೆಯಲಾಗಿದೆ ಎಂದು ಹೇಳಿದರು.
ಧ್ವಜಾರೋಹಣ ಸಮಾರಂಭದಲ್ಲಿ ಎಸ್ ಆರ್ ಸೋನವಾಲಕರ, ರವಿ ಸಣ್ಣಕ್ಕಿ, ಪುರಸಭಾ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಮುಖ್ಯಾಧಿಕಾರಿ ದೀಪಕ ಹರ್ದಿ, ಅನ್ವರ ನದಾಫ, ಪ್ರಕಾಶ ಮಾದರ, ಡಾ.ಬಿ ಎಮ್ ಫಾಲಭಾಂವಿ ಹಾಗೂ ಅನೇಕರು ಪಾಲ್ಗೊಂಡಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮೆನ್ನಿಕೇರಿ ಕಾರ್ಯಕ್ರಮ ನಿರೂಪಿಸಿದರು.