ಮೂಡಲಗಿ: ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ತಮ್ಮ ಇಲಾಖೆಯ ಕರ್ತವ್ಯ ನಿಯಮಗಳನ್ನು ಮೀರಿ ಕಾಣದ ಕೈಗಳ ಕೆಳಗೆ ಹಾಗೂ ಬಂಡವಾಳಶಾಹಿಗಳ ಕೈಗೊಂಬೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಯಾದವಾಡದ ಗ್ರಾಪಂ ಸದಸ್ಯ ಹಾಗೂ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಕಲ್ಮೇಶ ಗಾಣಿಗೇರ ಆರೋಪಿಸಿದ್ದಾರೆ.
ಬುಧವಾರದಂದು ಪಟ್ಟಣದ ಮೂಡಲಗಿ ತಾಲೂಕಾ ಪತ್ರಕರ್ತರ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಯಾದವಾಡ ಗ್ರಾಮದ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಿಂದ ಪರಿಸರ ಮಾಲಿನ್ಯ, ರೈತರ ಜಮೀನು ಕಬಳಿಕೆ, ಗಣಿಗಾರಿಕೆಯಿಂದ ಅಂತರ್ಜಲ ಕುಸಿತ ಹಾಗೂ ಗಣಿಗಾರಿಕೆಯಲ್ಲಿ ಹೆಚ್ಚಿನ ಪ್ರಮಾಣದ ಸ್ಪೋಟದಿಂದ ತೋಟದ ಮನೆಗಳಿಗೆ ಧಕ್ಕೆಯಾಗಿ ರೈತರಿಗೆ ತೊಂದರೆ ಉಂಟಾಗಿದೆ. ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಆ.27ರಂದು ಸಾರ್ವಜನಿಕರ ಸಭೆಯನ್ನು ಕರೆಯಲಾಗಿದ್ದು, ಅದನ್ನು ವಿರೋಧಿಸಿ ಸಂಬoಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿಕೊಳ್ಳಲಾಗಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಅರ್ಜಿದಾರರ ಹಾಗೂ ವಿರೋಧ ವ್ಯಕ್ತಪಡಿಸಿದವರ ಮೇಲೆ ಯಾವುದೇ ಆರೋಪಗಳಿಲ್ಲದೆ ಬಂಡವಾಳಶಾಹಿಗಳ ಮಾತು ಕೇಳಿ ಕಲಂ 107ರ ಅಡಿಯಲ್ಲಿ ಸುಮಾರು ಜನರ ಮೇಲೆ ಕೇಸ್ ದಾಖಲಿಸಿ, ಅನ್ನದಾತರ ವಿರುದ್ದ ಕುತಂತ್ರವನ್ನು ಹೆಣೆದು ಅನ್ನದಾತರ ಹಾಗೂ ಕಾರ್ಮಿಕರ ಹಿತಾಸಕ್ತಿಗಿಂತ ಬಂಡವಾಳಶಾಹಿಗಳ ಕೈಗೊಂಬೆಯಾಗಿ ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಕರ್ತವ್ಯ ನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅಷ್ಟೇ ಅಲ್ಲದೆ ವರ್ಗಾವಣೆಯಾಗದೆ ಒಂದೇ ಠಾಣೆಯಲ್ಲಿ 4 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಕೆಲವು ದಿನಗಳ ಹಿಂದೆ ದಾಲ್ಮಿಯಾ ಕಾರ್ಖಾನೆಯಲ್ಲಿ ಬ್ರಹತ್ ಸ್ಪೋಟ ಉಂಟಾಗಿ, ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮತ್ತೋರ್ವ ವ್ಯಕ್ತಿಗೆ ತುಂಬಾ ಗಾಯಗಳಾಗಿ ಅಂಗವಿಕಲನಾಗಿದ್ದಾನೆ. ಆತನ ಜೀವನೋಪಚಾರಕ್ಕಾಗಿ ಕಾಯಂ ಉದ್ಯೋಗ ನೀಡಬೇಕೆಂದು ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದನೆ ನೀಡದ ಹಿನ್ನೆಲೆ ಹೋರಾಟ ಮಾಡಲು ಸಿಪಿಐ ಮುರನಾಳ ಅನುಮತಿ ನೀಡದೆ ದಲಿತ ಮುಖಂಡರಿಗೆ ಬೆದರಿಕೆ ಹಾಕಿ, ಐದು ಜನರ ಮುಖಂಡರ ಮೇಲೆ ಕೇಸ್ ದಾಖಲಿಸಿದ್ದಾರೆ. ಆದರಿಂದ ಇಂಥ ಅಧಿಕಾರಿ ಹಾಗೂ ಕಾರ್ಖಾನೆಯ ವಿರುದ್ದ ಸೂಕ್ತ ಕಾನುನೂ ಕ್ರಮಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಆ.27ರಂದು ದಾಲ್ಮಿಯಾ ಕಾರ್ಖಾನೆಯ ಆವರಣದಲ್ಲಿ ನಡೆಯುವ ಸಾರ್ವಜನಿಕ ಸಭೆಯನ್ನು ಜಿಲ್ಲಾಧಿಕಾರಿಗಳು ರದ್ದುಗೊಳಿಸಿ, ಈ ಭಾಗದ ರೈತರ ಹಾಗೂ ಸಾರ್ವಜನಿಕರ ಹಿತ ಕಾಪಾಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಧರೆಪ್ಪ ಮುಧೋಳ, ಬಸವರಾಜ ಕೇರಿ, ರಮೇಶ ಉದಪುಡಿ ಹಾಗೂ ಮತ್ತಿತರರಿದ್ದರು.