ಫೋಟೋ : ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಡಾ. ಅಂಬೇಡ್ಕರ್ ರವರ 131ನೇ ಜಯಂತ್ಯುತ್ಸವವನ್ನು ಶಾಸಕ ರಮೇಶ ಭೂಸನೂರ ಉದ್ಘಾಟಿಸಿದರು.
ಸಿಂದಗಿ: ವ್ಯಕ್ತಿಯ ಹಿಂದೆ ಒಂದು ದೊಡ್ಡ ಶಕ್ತಿ ಇರುತ್ತದೆ ಶಕ್ತಿ ಇಲ್ಲದಿದ್ದರೆ ಏನೂ ಇಲ್ಲ ಇದುವೇ ಮಾನವೀಯತೆ. ಜಯಂತಿ ಎಂದರೆ ರಜೆ ಸಿಕ್ಕಿತು ಎಂದು ಉತ್ಸಾಹಗೊಳ್ಳದೇ ಆ ದಿನವನ್ನು ಶರಣರ, ಸಂತರ, ಮಹಾನಾಯಕರ ಜೀವನ ಚರಿತ್ರೆಯನ್ನು ಅನುಸರಿಸಿ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸುವ ದಿನವನ್ನಾಗಿ ಆಚರಿಸಬೇಕು ಅಂದಾಗ ಅದಕ್ಕೊಂದು ಅರ್ಥ ಬರುತ್ತದೆ ಎಂದು ಜಿ.ಪಿ.ಪೋರವಾಲ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಸುಮಾ ನಿರ್ಣಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ತಾಲೂಕು ಅಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಡಾ. ಅಂಬೇಡ್ಕರ್ರವರ 131ನೇ ಜಯಂತ್ಯುತ್ಸವ ಹಾಗೂ ಭಗವಾನ ಮಹಾವೀರರ ಜಯಂತ್ಯುತ್ಸವದಲ್ಲಿ ಡಾ. ಅಂಬೇಡ್ಕರ್ರವರ ಕುರಿತು ಉಪನ್ಯಾಸ ನೀಡಿ, ಮಾನವೀಯತೆಯನ್ನು ಮನುಷ್ಯನಲ್ಲಿ ಕಾಣಬೇಕು ಅದು ಡಾ. ಅಂಬೇಡ್ಕರ ಅವರ ಸಂವಿಧಾನದದಿಂದ ಬದಲಾವಣೆ ಕಂಡಿದ್ದೇವೆ. ಸಮಾನತೆಗೂ, ಶೋಷಣೆಗೂ ಇನ್ನೂವರೆಗೂ ಅರ್ಥ ಸಿಕ್ಕಿಲ್ಲ. ಅದನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಸಮಾಜದ ಪರಿವರ್ತನೆಯತ್ತ ದಿಟ್ಟ ಹೆಜ್ಜೆ ಇಡಬೇಕಾದರೆ ಹೆಣ್ಣು ಮಕ್ಕಳು ಶಿಕ್ಷಣ ಪಡೆದಾಗ ಮಾತ್ರ ಅದು ಸಾಧ್ಯ ಎಂದು ಧ್ವನಿ ಎತ್ತಿದ ಮಹಾನ ನಾಯಕ ಡಾ. ಅಂಬೇಡ್ಕರರು. ಸಮಾಜದ ಆರ್ಥಿಕ ಸಬಲತೆಗಾಗಿ ಕೈಗಾರಿಕೆ ಮತ್ತು ಕೃಷಿ ರಾಷ್ಟ್ರೀಕರಣವಾಗಬೇಕು ಎಂದು ಕನಸು ಕಂಡವರಲ್ಲಿ ಮೊದಲಿಗರು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿ, ಇಡೀ ಜಗತ್ತಿಗೆ ಮಾದರಿ ಮತ್ತು ಬೃಹತ್ ಸಂವಿಧಾನ ರಚಿಸಿದ ಕೀರ್ತಿ ಡಾ. ಅಂಬೇಡ್ಕರ ಅವರಿಗೆ ಸಲ್ಲುತ್ತದೆ. ಅಂತಹ ಸಂವಿಧಾನದ ನಿಯಮಗಳನ್ನು ಪಾಲನೆ ಮಾಡುವದು ನಮ್ಮೆಲ್ಲರ ಕರ್ತವ್ಯ ಎಂದರು.
ಭಗವಾನ ಮಹಾವೀರರ ಕುರಿತು ಬಾಹುಬಲಿ ಒನಕುದರಿ ಉಪನ್ಯಾಸ ನೀಡಿ, ಬಗವಾನ ಮಹಾವೀರರು ತಮ್ಮ ಜೀವನದುದ್ದಕ್ಕು ಅಹಿಂಸಾ ಪರಧರ್ಮ ಪಾಲಿಸಿದವರು, ಪ್ರತಿಯೊಂದು ಜೀವಿ ಸಮಾನರ ಹಾಗೂ ಸತ್ಯವನ್ನು ನುಡಿಯಬೇಕು ಪ್ರಾಮಾಣಿಕವಾಗಿ ಜೀವಿಸಬೇಕು, ಅಹಿಂಸೆ ಮಾನವನ ಧರ್ಮವಾಗಬೇಕು ಎನ್ನುವದನ್ನು ನಂಬಿದಂತವರು ಮಹಾವೀರರು. ಅಂತೆಯೇ ಡಾ. ಬಿ. ಆರ್. ಅಂಬೇಡ್ಕರರವರು ಕೇವಲ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಾಗದೆ ಮನುಕುಲದ ಶಕ್ತಿ ಆಗಿದ್ದಾರೆ ಅವರ ಬದುಕು ನಿಜಕ್ಕೂ ಒಂದು ಇತಿಹಾಸ. ಡಾ. ಅಂಬೇಡ್ಕರವರು ಜಾತಿ ವ್ಯವಸ್ಥೆ ನಿರ್ಮೂಲನೆ ಮೌಢ್ಯತೆಯ ನಿಷೇಧ ಹಾಗೂ ಶಿಕ್ಷಣಕ್ಕೆ ಅತೀ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಸಮುದ್ರದ ಆಳ, ಆಕಾಶದಷ್ಟು ಅಗಲವಾದ ಅಂಶಗಳನ್ನು ಹೊಂದಿದ ಸಂವಿಧಾನ ಬರೆದ ಮಹಾನ ಚೇತನ ಡಾ. ಅಂಬೇಡ್ಕರರ ಜಯಂತಿಯನ್ನು ವಿಶ್ವದ ಜ್ಞಾನದ ದಿನವಾಗಿ ಆಚರಿಸಲಾಗುತ್ತಿದೆ. ಎಂದು ಹೇಳಿದ ಅವರು, ಭಾರತದ ಮೂಲ ಧರ್ಮಗಳು ಬೌದ್ಧಧರ್ಮ ಹಾಗೂ ಜೈನ ಧರ್ಮ ಇವುಗಳು ಅತ್ಯಂತ ಸೌಮ್ಯಧರ್ಮಗಳಾಗಿ ಭಾರತೀಯ ನೆಲೆಯಲ್ಲಿ ನಶಿಸಿಹೋಗುತ್ತಿವೆ ಇಡೀ ಜಗತ್ತಿನ 30 ರಾಷ್ಟ್ರಗಳಲ್ಲಿ ಬೌದ್ಧಧರ್ಮ ವಿಶಾಲವಾಗಿದ್ದರಿಂದ ಭಾರತದಲ್ಲಿ ಬೆಳೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಉತ್ಸವ ಸಮಿತಿ ಅಧ್ಯಕ್ಷ ತಹಶೀಲ್ದಾರ ನಿಂಗಣ್ಣ ಬಿರಾದಾರ, ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ, ಸಿಪಿಐ ರವಿ ಉಕ್ಕುಂದ, ಪುರಸಭೆ ಉಪಾದ್ಯಕ್ಷ ಹಾಸೀಂ ಆಳಂದ, ಸದಸ್ಯರಾದ ಶರಣಗೌಡ ಪಾಟೀಲ, ಪ್ರತಿಭಾ ಕಲ್ಲೂರ, ರಾಜಣ್ಣಿ ನಾರಾಯಣಕರ, ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ, ನೌಕರರ ಸಂಘದ ಅದ್ಯಕ್ಷ ಅಶೋಕ ತೆಲ್ಲೂರ, ಡಾ. ಅಭಯ ಕಾಗಿ ವೇದಿಕೆ ಮೇಲಿದ್ದರು.
ಸಮಾಜ ಕಲ್ಯಾಣಾಧಿಕಾರಿ ಎನ್.ಎಸ್ ಭೂಸಗೊಂಡ ಸ್ವಾಗತಿಸಿದರು. ಬಸವರಾಜ ಸೊಂಪೂರ ನಿರೂಪಿಸಿದರು. ಶಿರಸ್ತೆದಾರ ಸುರೇಶ ಮ್ಯಾಗೇರಿ ವಂದಿಸಿದರು.