ಮೂಡಲಗಿ: ಶಿಕ್ಷಣ ಕ್ಷೇತ್ರಕ್ಕೆ ದಿ.ಕೃಷ್ಣಪ್ಪ ಎಚ್.ಸೋನವಾಲ್ಕರ ಹಾಗೂ ಅವರ ಕುಟುಂಬದ ಸಾಮಾಜಿಕ ಕೊಡುಗೆಗಳು ಅಪಾರವಾದದು ಇವರ ಸೇವಾ ಕಾರ್ಯಗಳು ಇತರರಿಗೆ ಮಾದರಿಯಾಗಿದ್ದು ಪ್ರೇರಣಾದಾಯಕವಾಗಿವೆ ಎಂದು ಮೂಡಲಗಿ ಬಿಇಒ ಅಜೀತ ಮನಿಕೇರಿ ಹೇಳಿದರು.
ಪಟ್ಟಣದ ಕೊಡುಗೈ ದಾನಿ ಹಾಗೂ ಸಾಮಾಜಿಕ ಕಳಕಳಿಯುಳ್ಳ ಹಾಗೂ ಮೂಡಲಗಿ ಸರಕಾರಿ ಪ್ರೌಢ ಶಾಲೆಯ ಭೂ ದಾನಿ ದಿ.ಕೆ.ಎಚ್.ಸೋನವಾಲ್ಕರರ ೧೮ ನೇ ಪುಣ್ಯಸ್ಮರಣೆ ನಿಮಿತ್ತ ಶನಿವಾರದಂದು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಹಾಗೂ ಶಾಲೆಯಲ್ಲಿ ಕೆ.ಎಚ್.ಸೋನವಾಲ್ಕರ ಪ್ರತಿಮೆಗೆ ಹಾಗೂ ಭಾವ ಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ಕೆ.ಎಚ್.ಸೋನವಾಲ್ಕರ ಅವರು ಹೆಸರಿನಲ್ಲಿ ಅವರ ಪತ್ನಿ ಲಕ್ಷ್ಮಿಬಾಯಿ ಸೋನವಾಲ್ಕರ ಅವರು ಮೂಡಲಗಿ ಸರಕಾರಿ ಪ್ರೌಢ ಶಾಲೆಗೆ ಬೆಲೆ ಬಾಳುವ ಎರಡು ಎಕರೆ ಭೂಮಿ ಖರೀದಿಸಿ ದಾನ ಮಾಡಿದ್ದರಿಂದ ಇಂದು ಸುಸಜ್ಜಿತ ಕಟ್ಟಡದಲ್ಲಿ ಸುಮಾರು ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಲು ಅನುಕೂಲವಾಗಿದೆ ಎಂದರು.
ಮೂಡಲಗಿ ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ ಮಾತನಾಡಿ, ಕೆ.ಎಚ್.ಸೋನವಾಲ್ಕರ ಅವರು ಮೂಡಲಗಿಯಲ್ಲಿ ನಡೆಯುವ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಎಲ್ಲ ಕಾರ್ಯಕ್ರಮಗಳಿಗೆ ದಾನ-ಧರ್ಮ ಮಾಡಿದ್ದರಿಂದ ಅವರು ಕೊಡುಗೈ ದಾನಿಗಳೆಂದು ಎನಿಸಿಕೊಂಡಿದ್ದಾರೆ.
ಅವರು ನಮ್ಮನ್ನಗಲಿ ೧೮ ವರ್ಷ ಗತಿಸಿದರು ಅವರ ಪ್ರವೃತ್ತಿ ಮತ್ತು ಸಂಸ್ಕೃತಿಯನ್ನು ಅವರು ಕುಟುಂಬದವರು ಮುಂದುವರೆಸಿಕೊoಡು ಬಂದಿರುವುದು ವಿಶೇಷವಾಗಿದೆ, ಕೃಷ್ಣಪ್ಪ ಸೋನವಾಲ್ಕರ ಅವರ ಪುಣ್ಯಸ್ಮರಣೆ ಆಚರಣೆ ಮಾಡುತ್ತಿರುವದು ಶ್ಲಾಘನೀಯವಾದುದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಸಂತೊಷ ಸೋನವಾಲಕರ, ಡಾ.ಭಾರತಿ ಕೋಣಿ, ಅನ್ವರ ನದಾಫ್, ಮುಖ್ಯೋಪಾಧ್ಯಾಯ ಎಮ್.ಎಮ್.ವಾಟಕರ, ಶಿಕ್ಷಕ ಎ.ಆರ್.ಕುರಬರ, ಶಿವಲಿಂಗ ಪಾಟೀಲ, ಈರಪ್ಪ ಢವಳೇಶ್ವರ, ಶಿವಲಿಂಗ ಯಳ್ಳುರ, ಅಬ್ದುಲ್ ಫೈಲವಾನ್, ಸಂಜು ಬಂಡಿವಡ್ಡರ, ವಿಠ್ಠಲ ಮನ್ನಿಕೇರಿ, ವಿಶಾಲ ಜಾಧವ, ಮಾಳಪ್ಪ ಬೋರಗೌಡ, ಯೇಸು ಪರಸನ್ನವರ, ವಿಠ್ಠಲ ಪಾಟೀಲ, ನಿಂಗಪ್ಪ ಹೊಸುರ ಹಾಗೂ ಶಿಕ್ಷಕರು ಮತ್ತಿತರರು ಇದ್ದರು.