ಸಿಂದಗಿ: 23 ಶಾಸಕರನ್ನು ಪಂಚಮಸಾಲಿ ಸಮಾಜ ಕೊಟ್ಟಿದೆ ನಮ್ಮ ಸಮಾಜದಲ್ಲಿ ಒಗ್ಗಟ್ಟು ಕೊರತೆಯಾಗಿದೆ ನಾಳೆ 14 ರಂದು ನಡೆಯುವ ಸಮಾವೇಶ ಸರಕಾರಕ್ಕೆ ಎಚ್ಚರಿಕೆ ಗಂಟೆಯಾಗಬೇಕು. ಲಿಂಗಾಯತ 2ಎ ಮೀಸಲಾತಿ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ ಪಂಚಮಸಾಲಿ ಸಮಾಜದ ಎಲ್ಲ ಸಮುದಾಯ ಕೂಡಿಕೊಂಡು ಸಭೆ ನಡೆದರೆ ಹೆಚ್ಚಿನ ಬಲ ಬರುತ್ತದೆ ಕಳೆದ ಒಂದು ವರ್ಷದಿಂದ ಹೋರಾಟ ನಡೆಸಿದಾಗ ಫಲ ದೊರೆತಿಲ್ಲ ಪಂಚಮಸಾಲಿ ಸಮಾಜದ ವಿದ್ಯಾಥಿಗಳಿಗೆ ಶಿಕ್ಷಣ ಉದ್ಯೋಗದ ಜೊತೆಗೆ 2ಎ ಮೀಸಲಾತಿಯೂ ಅಷ್ಟೇ ಮುಖ್ಯ. ಇದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಸಿಹಿಸುದ್ದಿ ನೀಡುವ ಭರವಸೆ ಇದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ಮಾಮೀಜಿ ಆಶಯ ವ್ಯಕ್ತಪಡಿಸಿದರು.
ಪಟ್ಟಣದ ಬಸವ ಮಂಟಪದಲ್ಲಿ ಹಮ್ಮಿಕೊಂಡಿದ್ದ, ಜನವರಿ 14 ರಂದು ಕೂಡಲ ಸಂಗಮದಲ್ಲಿ ನಡೆಯುವ 2ಎ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಂಚಮಸಾಲಿ ಸಮುದಾಯದ ಸ್ಥಿತಿಗತಿಯನ್ನು ಅವಲೋಕನವನ್ನು ಮಾಡಲು ಹಿಂದುಳಿದ ವರ್ಗದ ಆಯೋಗಕ್ಕೆ ಆದೇಶ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಆಯೋಗದ ವಸ್ತುಸ್ಥಿತಿ ವರದಿಯನ್ನು ಪಡೆಯಲಿದ್ದಾರೆ. ಆದಾಗ್ಯೂ ಒಂದೊಮ್ಮೆ ವಿಳಂಬವಾದಲ್ಲಿ ಸಮಾಜದ ಮುಖಂಡರು ಹಾಗೂ ಬಾಂಧವರು ತಮ್ಮಲ್ಲಿರುವ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಸಮಾಜದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಬಲಪ್ರದರ್ಶನ ಮಾಡಿದರೆ ಮಾತ್ರ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಚ್ಚೆತ್ತುಕೊಳ್ಳಲು ಸಾಧ್ಯ ಎಂದ ಅವರು, ಜನವರಿ 14 ರಂದು ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ. ಅವರು ಅಂದೇ ಮೀಸಲಾತಿಯ ಕುರಿತು ಸಕಾರಾತ್ಮಕ ಘೋಷಣೆ ಮಾಡುವ ಭರವಸೆ ಇದೆ ಎಂದರು.
ನಮ್ಮ 2ಎ ಮೀಸಲಾತಿ ಹೋರಾಟದ ಕುರಿತಾಗಿ ಟೀಕೆ ಟಿಪ್ಪಣಿ ಮಾಡುವವರಿಗೆ ರಾಜ್ಯದ ಜನತೆ ಸೂಕ್ತ ಉತ್ತರ ಕೊಡುವಲ್ಲಿ ಮುಂದಾಗಬೇಕು. ಅವರ ಟೀಕೆ ಕಾನೂನು ಬಾಹಿರವೂ ಹೌದು ನಾವು ನಮ್ಮ ಸಮಾಜದ ಹಿತಕ್ಕಾಗಿ ಮೀಸಲಾತಿ ಕೇಳಿದ್ದೇವೆ ವಿನಃ ಅನ್ಯ ಸಮುದಾಯಗಳಿಗೆ ಮೀಸಲಾತಿ ನೀಡಬಾರದು ಎಂದು ಎಲ್ಲಿಯೂ ಹೇಳಿಲ್ಲ. ಹಾಗೊಂದು ವೇಳೆ ಹುನ್ನಾರ ನಡೆಸಿದರೆ ಸಮಾಜ ಅಂತವರಿಗೆ ಸೂಕ್ತ ಉತ್ತರ ನೀಡಲಿದೆ ಬರುವ ಚುನಾವಣೆಯಲ್ಲಿ 150 ಸೀಟುಗಳ ಕನಸು ಕಾಣುತ್ತಿರುವ ಸರಕಾರ ಸಮಾಜದ ವಿರೋಧ ಹಾಕಿಕೊಂಡರೆ 50 ಸೀಟುಗಳಾದರು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಮುಖಂಡ ಮುತ್ತು ಶಾಬಾದಿ ಮಾತನಾಡಿ, 23 ಪಂಚಮಸಾಲಿ ಸಮುದಾಯದ ಶಾಸಕರಿದ್ದರೂ 2ಎ ಮೀಸಲಾತಿ ಹೋರಾಟಕ್ಕೆ ಬಲ ಸಿಗದಿರುವದಕ್ಕೆ ಅವರ ಸ್ವಾರ್ಥ ರಾಜಕಾರಣವೇ ಕಾರಣ ಶ್ರೀಗಳ ಹೋರಾಟ ದೂರ ದೃಷ್ಟಿಯಿಂದ ಕೂಡಿದ್ದಾಗಿದೆ. ಈ ಹೋರಾಟ ಸಮುದಾಯದ ಜನಕ್ಕೆ ಆತ್ಮ ಸ್ಥೈರ್ಯ ಹಾಗೂ ಗಟ್ಟಿತನ ತಂದುಕೊಟ್ಟಿದೆ. ಗುರಿ ಮುಟ್ಟುವವರೆಗೂ ಬಸವ ಜಯ ಮೃತ್ಯುಂಜಯ ಶ್ರೀಗಳಿಗೆ ಸಮುದಾಯದ ಜನರು ಎಲ್ಲ ರೀತಿಯಿಂದಲೂ ಸಾಥ್ ನೀಡಲಿದ್ದೇವೆ. ಎಂದರು.
ಪಂಚಮಸಾಲಿ ಸಮಾಜದ ಅಧ್ಯಕ್ಷ ಎಮ್.ಎಮ್.ಹಂಗರಗಿ ಸ್ವಾಗತಿಸಿದರು ಕಾರ್ಯದರ್ಶಿ ಆನಂದ ಶಾಬಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು ಚಂದ್ರಶೇಖರ ನಾಗರಬೆಟ್ಟ ವಂದಿಸಿದರು.
ಈ ಸಂದರ್ಭದಲ್ಲಿ ಸಮಾಜ ಮುಖಂಡರುಗಳಾದ ಸೋಮನಗೌಡ ಬಿರಾದಾರ, ರಾಜುಗೌಡ ಪಾಟೀಲ. ನೀಲಪ್ಪಗೌಡ ಪಾಟೀಲ, ವಿಶ್ವಾನಾಥ ಕುರುಡೆ, ಬಸನಗೌಡ ತೆಗ್ಗಳ್ಳಿ, ಗುರು ಬಸರಕೋಡ, ಬಾಪುಗೌಡ ಪಾಟೀಲ, ಶಿವರಾಜ ಪೋಲಿಸ್ ಪಾಟೀಲ, ಚನ್ನು ಹೊಡ್ಲ, ಜಂಗಮ ಶೆಟ್ಟಿ ಸರ್, ಉತ್ನಾಳ ಸರ್, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಮಾಜ ಭಾಂದವರು ಪಾಲ್ಗೊಂಡಿದ್ದರು.