ಮೂಡಲಗಿ: ರಾಜ್ಯ ಸರ್ಕಾರ ಶುಕ್ರವಾರದಂದು ಸರ್ವ ಪಕ್ಷಗಳ ಸಭೆ ಕರೆದು ಜನಸಂಖ್ಯೆ ಆಧಾರದ ಮೇಲೆ ಎಸ್ಸಿ-ಎಸ್ಟಿ ಸಮಾಜದ ಮೀಸಲಾತಿ ಹೆಚ್ಚಳ ಮಾಡಿರುವುದು ಸಂತಸವಾದರೂ ಆ ಸಭೆಯಲ್ಲಿ ಪಂಚಮಸಾಲಿಗಳ ಮೀಸಲಾತಿ ಬಗ್ಗೆ ಚರ್ಚಿಸಿದ್ದರೆ ಮೀಸಲಾತಿಗಾಗಿ ಹೋರಾಟ ಮಾಡಿದ ಸಮುದಾಯಗಳಿಗೆ ನೆಮ್ಮದಿ ಸಿಗುತ್ತಿತ್ತು ಎಂದು ಸರ್ಕಾರದ ವಿರುದ್ದ ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಅಸಮಾಧಾನವನ್ನು ಹೊರ ಹಾಕಿದರು.
ತಾಲೂಕಿನ ಪುಲಗಡ್ಡಿ ಗ್ರಾಮದಲ್ಲಿ ಆಯೋಜಿಸಲಾದ ಪಂಚಮಸಾಲಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಸಮಾಜದ ಕುರಿತು ಚರ್ಚೆ ಮಾಡಿದ್ದಕ್ಕೆ ನಮಗೆ ಯಾವುದೇ ಬೇಜಾರಿಲ್ಲ. ಆದರೆ ಪಂಚಮಸಾಲಿ ಸಮುದಾಯದ ಹೋರಾಟದ ಬಗ್ಗೆ ಚರ್ಚೆ ಮಾಡಬೇಕಿತ್ತು, ಚರ್ಚೆ ಆಗದಿರುವುದು ಬೇಸರದ ಸಂಗತಿಯಾಗಿದೆ. ಅ.21ಕ್ಕೆ ಹುಕ್ಕೇರಿಯಲ್ಲಿ ಜಿಲ್ಲಾ ಮಟ್ಟದ ಬಹೃತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಅಂದು ಸಮಾಜದ ನಿರ್ಧಾರವನ್ನು ನಾವು ಪ್ರಕಟ ಮಾಡುತ್ತೇವೆ. ಸರ್ಕಾರ ಪಂಚಮಸಾಲಿ ಸಮುದಾಯದ ಮೀಸಲಾತಿ ಬಗ್ಗೆ ಅಂತಿಮ ತೀರ್ಮಾನ ಮಾಡಬೇಕು, ಒಂದು ವೇಳೆ ತೀರ್ಮಾನ ತೆಗೆದುಕೊಳ್ಳದಿದ್ದರೆ ನವಂಬರ ಎರಡನೇ ವಾರದಲ್ಲಿ 25 ಲಕ್ಷ ಪಂಚಮಸಾಲಿಗಳೊಂದಿಗೆ ಬೆಂಗಳೂರಿಗೆ ಬಂದು ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದೇ ತಿಂಗಳು 23ರಂದು ಕಿತ್ತೂರ ರಾಣಿ ಚೆನ್ನಮ್ಮನ ಜಯಂತಿಯನ್ನು ರಾಜ್ಯಾದ್ಯಂತ ಸರ್ಕಾರದಿಂದ ಆಚರಣೆ ಮಾಡಲಾಗುತ್ತದೆ, ಅಷ್ಟರೊಳಗಾಗಿ ಸರ್ವ ಪಕ್ಷಗಳ ಸಭೆ ಕರೆದು ಸಿಎಂ ಬೊಮ್ಮಾಯಿಯವರು ಒಂದು ನಿರ್ಧಾರಕ್ಕೆ ಬರಬೇಕು. ಇಲ್ಲವಾದರೇ ಪಂಚಮಸಾಲಿಗಳು ಸರ್ಕಾರದಿಂದ ಮಾಡುವಂಥ ಜಯಂತಿಗಳನ್ನು ಈ ವರ್ಷ ಬಹಿಷ್ಕಾರ ಹಾಕುವ ಕಾಲ ಬರಬಹುದು ಹಾಗಾಗಿ ಕೂಡಲೇ ಸರ್ಕಾರ ಒಂದು ನಿರ್ಧಾರಕ್ಕೆ ಬರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಪುಲಗಡ್ಡಿಯ ಗ್ರಾಮದ ಪಂಚಮಸಾಲಿಗಳು ಉಪಸ್ಥಿತರಿದ್ದರು.