ಬೀದರ – ಜಂಟಿ ಕೃಷಿ ನಿರ್ದೇಶಕರ ವಿರುದ್ಧ ಕಿರುಕುಳ ಆರೋಪ ಮಾಡಿ,ವರ್ಗಾವಣೆಗೆ ಪಟ್ಟು ಹಿಡಿದು ಸಾಮೂಹಿಕ ರಜೆ ಹಾಕಿ ಪ್ರತಿಭಟಿಸಿದ ಐವರು ಸಹಾಯಕ ಕೃಷಿ ನಿರ್ದೇಶಕರನ್ನೇ ಸರ್ಕಾರ ಎತ್ತಂಗಡಿ ಮಾಡಿ ಶಾಕ್ ನೀಡಿದೆ.
ಜೂನ್ 24 ರಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿಎಚ್ ವಿರುದ್ದ ಮಾನಸಿಕ ಕಿರುಕುಳ ಆರೋಪ ಮಾಡಿ ಅವರನ್ನು ಈ ಕೂಡಲೇ ವರ್ಗಾವಣೆ ಮಾಡಬೇಕು ಎಂದು 82 ಕೃಷಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಮೂಹಿಕ ರಜೆ ಹಾಕಿದ್ದರು. ರಾಜ್ಯ ಸರ್ಕಾರ ಇವರಿಗೆ ಬಿಗ್ ಶಾಕ್ ನೀಡಿದ್ದು ಐವರು ಸಹಾಯಕ ನಿರ್ದೇಶಕರನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ ಆದೇಶ ಮಾಡಿದೆ.
ಕೃಷಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜೋನ್ ಪ್ರಕಾಶ್ ರೋಡ್ರಿಗ್ಸ್ ಈ ಆದೇಶ ಮಾಡಿದ್ದು, ಔರಾದ್ ಕೃಷಿ ಸಹಾಯಕ ನಿರ್ದೇಶಕರಾದ ಅಬ್ದುಲ್ ಮಾಜೀದ್,ಬಸವಕಲ್ಯಾಣದ ವೀರಶೆಟ್ಟಿ, ಬೀದರ್ ನ ಮಾರ್ತಾಂಡ, ಭಾಲ್ಕಿಯ ಮಸ್ಕಲೇ ರಮೇಶ,ಹುಮ್ನಬಾದ್ ಕೃಷಿ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ ಪಿಎಂ ಯವರನ್ನು ವರ್ಗಾವಣೆ ಮಾಡಲಾಗಿದೆ.
ಸೋಯಾ ಬೀಜ ವಿತರಣೆಯಲ್ಲಿ ಕೃಷಿ ಇಲಾಖೆಯಲ್ಲಿ ಉಂಟಾದ ವೈಯಕ್ತಿಕ ಹಗ್ಗ ಜಗ್ಗಾಟಕ್ಕೆ ಐವರು ಕೃಷಿ ಸಹಾಯಕ ನಿರ್ದೇಶಕರು ಎತ್ತಂಗಡಿಯಾಗಿದ್ದು ಮಾತ್ರ ವಿಪರ್ಯಾಸ ಎಂಬುದು ಸಾರ್ವಜನಿಕ ವಲಯದಲ್ಲಿ ಮೂಡಿದೆ.