ಅಂಬಾರಿ ಹೊತ್ತ ಆನೆಗಳ ಇತಿಹಾಸ

0
1265

(ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ವಿಜಯ ದಶಮಿಯ ಗಜಪಥ ಸಂಚಲನ)

ಮೈಸೂರು ದಸರಾ ಅಂದರೆ ನೆನಪಾಗುವುದು ಅಂಬಾರಿ ಮತ್ತು ಆನೆ. ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲು ಅಂಬಾರಿ ಹೊತ್ತ ಆನೆಯಾಗಿದೆ.

ಒಡೆಯರ್ ಕಾಲದಲ್ಲಿ ಪ್ರಾರಂಭವಾದ ಈ ಕೆಲಸ ಅಂದಿನ ವಿಜಯದಶಮಿಯಿಂದ ಅಂದಾಜು 45 ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಹೊತ್ತ ಹಿನ್ನೆಲೆಯಲ್ಲಿ ಜಯಮಾರ್ತಾಂಡ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು. ಅರಮನೆಯ ಮಹಾದ್ವಾರಗಳಲ್ಲೊಂದಾದ ಜಯಮಾರ್ತಾಂಡ ದ್ವಾರಕ್ಕೆ ಈ ಆನೆ ಹೆಸರು ಇಡಲಾಗಿದೆ.

1902 ರಿಂದ ಅಂಬಾರಿ ಹೊತ್ತ ಆನೆಗಳೆಂದರೆ:

  • ವಿಜಯಬಹದ್ದೂರ್
  • ನಂಜುಂಡ
  • ರಾಮಪ್ರಸಾದ್
  • ಮೋತಿಲಾಲ್
  • ಸುಂದರ್ ರಾಜ್
  • ಐರಾವತ: 1935ರಲ್ಲಿ ಐರಾವತ ಆನೆಯನ್ನು ಹಾಲಿವುಡ್
    ಚಿತ್ರ ‘ದಿ ಎಲಿಫೆಂಟ್ ಬಾಯ್’ಗೆ ಬಳಸಿಕೊಳ್ಳಲಾಯಿತು ಆನೆಯ ಮಾವುತನೆ ಚಿತ್ರದ ನಾಯಕ, ಚಿತ್ರ ಜಗತ್ತಿನಾದ್ಯಂತ ಪ್ರದರ್ಶನಗೊಂಡಿತು. ಆ ಮಾವುತ ಮತ್ಯಾರು ಅಲ್ಲ 7 ವರ್ಷದ ಹುಡುಗ ಮೈಸೂರು ಸಾಬು.
  • ಗಜೇಂದ್ರ
  • ಬಿಳಿಗಿರಿ: ಇದು ಅಂಬಾರಿ ಹೊತ್ತ ಆನೆಗಳಲ್ಲಿ ಅತ್ಯಂತ ದೈತ್ಯ ಆನೆಯಾಗಿದ್ದು ಇದರ ಎತ್ತರ 10.5 ಅಡಿ. ಸುಮಾರು 7 ಸಾವಿರ ಕೆ.ಜಿ. ಇತ್ತಂತೆ. 1975ರಲ್ಲಿ ಇದು ಮರಣ ಹೊಂದಿತು. ಇದರ ಮಾವುತ ಗೌಸ್ ಅಂತ. ಬಿಳಿಗಿರಿ ಹೆಗ್ಗಳಿಕೆ ಏನೆಂದರೆ ಇದೇ ಮಹಾರಾಜರನ್ನು ಹೊತ್ತೂಯ್ದ ಕೊನೇ ಆನೆ.
  • ರಾಜೇಂದ್ರ:  ‘ಗಂಧದ ಗುಡಿ’ ಚಿತ್ರದಲ್ಲಿ ಡಾ. ರಾಜ್ ಆನೆಯದಂತದ ಮೇಲೆ ಕುಳಿತು ಹಾಡುವ ಹಾಡು ಯಾರಿಗೆ ತಾನೆ ನೆನಪಿಲ್ಲ. ಈ ಆನೆಯ ಹೆಸರು ರಾಜೇಂದ್ರ. ಚಿತ್ರದುದ್ದಕ್ಕೂ ಇದು ಭಾಗವಹಿಸಿದೆ. ಡಾ.ರಾಜ್ ಗೆ ಅಚ್ಚುಮೆಚ್ಚಿನ ಆನೆ ಕೂಡ.
  • ದ್ರೋಣ: ದ್ರೋಣ 10.25 ಅಡಿ ಎತ್ತರದ ಆನೆ ದ್ರೋಣ. ಅದು ಸುಮಾರು 6,400 ಕೆ.ಜಿ ತೂಕ ಇತ್ತು. ದ್ರೋಣ ಆನೆ 18 ವರ್ಷ ಸತತವಾಗಿ ಅಂಬಾರಿಗೆ ಬೆನ್ನುಕೊಟ್ಟ ಖ್ಯಾತಿ, ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘The Sword of Tippu sultan’ ನ ಟಿಪ್ಪು ಪಾತ್ರಧಾರಿಯನ್ನು ಹೊತ್ತೂಯ್ದದ್ದೂ ಇದೇ ದ್ರೋಣ, 1998ರಲ್ಲಿ ಹೈ ಟೆನ್ಶನ್ ವಿದ್ಯುತ್ ತಗುಲಿ ದ್ರೋಣ ಸಾವನ್ನಪ್ಪಿತು.
  • ಅರ್ಜುನ: ದ್ರೋಣ ನ ನಂತರ ಅರ್ಜುನ ಒಮ್ಮೆ ಅಂಬಾರಿ ಹೊತ್ತಿದ್ದ. ಆದರೆ ನಂತರದ ದಿನಗಳಲ್ಲಿ ಮಾವುತನನ್ನು ಕೊಂದ ಆರೋಪದಲ್ಲಿ ಅರ್ಜುನನನ್ನು ಉತ್ಸವದಿಂದ ಹೊರಗುಳಿಸಲಾಯಿತು.
  • ಬಲರಾಮ: ಅರ್ಜುನನ ನಂತರ ಬಲರಾಮನಿಗೆ ಅಂಬಾರಿ ಹೊರಿಸಲಾಯಿತು, ಬಲರಾಮ ಶಾಂತ ಸ್ವಭಾವದ ಆನೆ ಆಗಿದ್ದು 1987ರಲ್ಲಿ ಕಟ್ಟೆಪುರದಲ್ಲಿ ಬಲರಾಮ, ಗಜೇಂದ್ರ, ವಿಕ್ರಮ, ಹರ್ಷ, ಪ್ರಶಾಂತ ಈ ಐದೂ ಆನೆಗಳನ್ನು ಹಿಡಿದಿದ್ದರು. ಹನ್ನೊಂದು ವರ್ಷಗಳ ಕಾಲ ಅಂಬಾರಿ ಹೊತ್ತ ಬಲರಾಮನಿಗೆ ಕೆಲ ವರ್ಷಗಳ ಹಿಂದೆ ನಿವೃತ್ತಿ ದೊರೆತಿದೆ.
  • ಅರ್ಜುನ: ದ್ರೋಣನ ಮರಣದ ನಂತರ ಒಮ್ಮೆ ಅಂಬಾರಿ ಹೊತ್ತಿದ್ದ ಅರ್ಜುನನ ಗುಣದಲ್ಲಿ ಸ್ವಲ್ಪ ಕೀಟಲೆ ಸ್ವಭಾವವಿರುವ ಅರ್ಜುನನ ಮೇಲೆ ಸಾಕಷ್ಟು ಟೀಕೆಗಳು ಬಂದಿತ್ತು. ಆದರೂ ಬಲರಾಮನಿಗೆ ವಯಸ್ಸಾದ ಕಾರಣ ಕಳೆದ ಕೆಲ ವರ್ಷದಿಂದ ಅಂಬಾರಿ ಹೊರುವ ಜವಾಬ್ದಾರಿ ಅರ್ಜುನನಿಗೆ ನೀಡಲಾಗಿದೆ. ಅರ್ಜನ ಬರೋಬ್ಬರಿ 5,535 ಕೆಜಿ ತೂಕವನ್ನು ಹೊಂದುವ ಮೂಲಕ ತಂಡದ ಎಲ್ಲಾ ಆನೆಗಳಿಗಿಂತಲೂ ಬಲಿಷ್ಠನಾಗಿದ್ದಾನೆ.

ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ