ಸಿಂದಗಿ; ವಿಶ್ವ ಏಡ್ಸ್ ದಿನದ 2021 ರ ಘೋಷವಾಕ್ಯ“ ಅಸಮಾನತೆಯೊಂದಿಗೆ ಏಡ್ಸ್ ಅನ್ನು ಕೊನೆಗೊಳಿಸಿ”. ಆರೋಗ್ಯ ಸೇವೆಗಳಲ್ಲಿ ಎಲ್ಲರಿಗೂ ಸಮಾನ ಪ್ರವೇಶ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯ ಮಟ್ಟ ಬಲಪಡಿಸುವುದನ್ನು ತಿಳಿಸುವ ಉದ್ದೇಶವಾಗಿದೆ. ಎಚ್ಐವಿ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ವಿಶೇಷ ಜಾಗೃತಿ ಮೂಡಿಸುವುದು ಮುಖ್ಯ ಗುರಿಯಾಗಿದೆ ಎಂದು ತಾಲೂಕ ಆಸ್ಪತ್ರೆಯ ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರದ ಆಪ್ತ ಸಮಾಲೋಚಕ ಎಂ.ಪಿ.ಸಾಗರ ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ಬಿ ಎಸ್ ಡಬ್ಲ್ಯೂ, ಬಿಕಾಮ್ ಮತ್ತು ಬಿಎ ಮಹಿಳಾ ಕಾಲೇಜ್ನಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ, ತಾಲೂಕ ಪಂಚಾಯತಿ, ಜಿಲ್ಲಾ ಏಡ್ಸ್ ನಿಯಂತ್ರಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಏಡ್ಸ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಡಿಸೆಂಬರ್ 1 ವಿಶ್ವ ಏಡ್ಸ್ ದಿನಾಚರಣೆ. ಪ್ರತಿ ವರ್ಷವೂ ಏಡ್ಸ್ ನಿಯಂತ್ರಣಕ್ಕಾಗಿ ಒಂದೊಂದು ಘೋಷ ವಾಕ್ಯವನ್ನು ಹೊರಡಿಸಲಾಗುತ್ತಿದ್ದು, ಸೋಂಕನ್ನು 1981ರಲ್ಲಿ ಗುರುತಿಸಲಾಗಿದ್ದರೂ, 35 ಮಿಲಿಯನ್ಗಿಂತಲೂ ಹೆಚ್ಚು ಜನರು ಎಚ್ಐವಿ ಅಥವಾ ಏಡ್ಸ್-ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಡಿಸೆಂಬರ್ 1, 1988ರಲ್ಲಿ ಪ್ರಥಮ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆಯು ಯು.ಎನ್.ಏಡ್ಸ್ ಸಂಯುಕ್ತ ನೇತೃತ್ವದಲ್ಲಿ ಈ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲು ಮುಂದಾಯಿತು. ಎಚ್ಐವಿ/ಏಡ್ಸ್ ಕಾರ್ಯ ಚಟುವಟಿಕೆಗಳಿಗೆ ಸಂಪನ್ಮೂಲ ಕೂಡಿಸುವುದು ಅಲ್ಲದೆ ವ್ಯಕ್ತಿಗತ ಮತ್ತು ಸಮುದಾಯದಲ್ಲಿ ಈ ಸೋಂಕಿನಿಂದ ಉಂಟಾಗುತ್ತಿರುವ ಸಮಸ್ಯೆಗಳು ಮತ್ತು ಇದರ ಬಗ್ಗೆ ಜಾಗೃತಿ ಹೆಚ್ಚಿಸುವುದು ಹಾಗೂ ಎಚ್ಐವಿ ಸೋಂಕಿತರಾಗಿರುವವರಿಗೆ ಬೆಂಬಲ ನೀಡುವುದು ಮತ್ತು ಅವರು ಅನುಭವಿಸುತ್ತಿರುವ ಕಳಂಕ ತಾರತಮ್ಯವನ್ನು ಕಡಿಮೆ ಮಾಡುವುದು ವಿಶ್ವದಲ್ಲಿನ ಎಚ್ಐವಿ ಏಡ್ಸ ಬೆಳವಣಿಗೆಯತ್ತ ದೃಷ್ಟಿ ಬೀರಿ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳತ್ತ ಪ್ರತಿಯೊಬ್ಬರ ಗಮನ ಸೆಳೆಯುವುದೇ ಧ್ಯೇಯವಾಗಿದೆ ಎಂದರು..
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎಸ್. ಎಂ.ಪೂಜಾರಿ ಮಾತನಾಡಿ, ಇದುವರೆಗಿನ ವಿಶ್ವದ ಹಲವಾರು ಮಾರಕ ಕಾಯಿಲೆಗಳಲ್ಲಿ ಎಚ್ ಐವಿ, ಏಡ್ಸ ಕೂಡ ಒಂದು. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಸುಲಭವಾಗಿ ವರ್ಗಾವಣೆಯಾಗುವ ರೋಗವಿದು. ಮುಖ್ಯವಾಗಿ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ರೋಗಿಯ ಆರೋಗ್ಯವನ್ನು ನಿಧಾನವಾಗಿ ಹಾನಿ ಮಾಡಿ ಆದಷ್ಟು ಬೇಗನೆ ವ್ಯಕ್ತಿಗೆ ಸಾವನ್ನು ತಂದು ಕೊಡುವ ಲಕ್ಷಣ ಏಡ್ಸ ರೋಗಕ್ಕೆ ಇದೆ. ಹಾಗಾಗಿ ವಿಶ್ವದೆಲ್ಲೆಡೆ ಏಡ್ಸ್ ದಿನವನ್ನು ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜನರಿಗೆ ಎಚ್ಐವ್ಹಿ ಏಡ್ಸ್ ಬಗ್ಗೆ ಅರಿವು ಮೂಡಿಸಿ ಚಿಕಿತ್ಸಾ ವಿಧಾನಗಳನ್ನು ತಿಳಿಸಿ ರೋಗ ನಿಯಂತ್ರಣದ ಬಗ್ಗೆ ಮಾಹಿತಿ ನೀಡುವ ಉದ್ದೇಶ ಈ ದಿನದ್ದಾಗಿರುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯ ಉಪನ್ಯಾಸಕರಾದ, ಮುರ್ತುಜಬಿಬೇಗ ಬಿರಾದಾರ, ಪ್ರಭಾವತಿ ಮಾಲಿಪಾಟೀಲ್, ಶೃತಿಹೂಗಾರ್, ಸರಸ್ವತಿ ಜಿ, ಚೈತ್ರಾ ಅರಳಗುಂಡಗಿ, ಲಕ್ಷ್ಮಿ ಕೆಸರಗೋಪ್ಪ, ಉಮೇಶ ಪೂಜೇರಿ, ಗದಗಯ್ಯ ನಂದಿಮಠ, ಮಂಗಳ ಈಳಗೇರ, ದಾನಮ್ಮ ಜೋಗುರ, ಮಮತಾ ಹರನಾಳ ಹಾಗೂ ನಾಗಯ್ಯ ಹಿರೇಮಠ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉಪನ್ಯಾಸಕ ಮಹಾಂತೇಶ ನೂಲಾನವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಶ್ರೀ ರೂಕುಂಪುರ ಪ್ರ್ರಾರ್ಥಿಸಿದರು. ಭಾಗ್ಯಶ್ರೀ ಬಿರಾದಾರ ನಿರೂಪಿಸಿದರು. ನಜ್ಮಾ ಮಣೂರ ವಂದಿಸಿದರು.