ಮೂಡಲಗಿ: ಕಠಿನ ಪರಿಶ್ರಮ ಹಾಗೂ ಏಕಾಗ್ರತೆಯ ಸತತ ಅಧ್ಯಯನವು ಸಾಧನೆಯ ಶಿಖರವಾಗಿದೆ ಎಂದು ಅಥಣಿಯ ಜೆ ಎ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಮಹಾಲಿಂಗ ಮೇತ್ರಿ ಹೇಳಿದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ‘ಸೂಕ್ಷ್ಮ ಅರ್ಥಶಾಸ್ತ್ರ’ ವಿಷಯದ ಕುರಿತು ವಿದ್ಯಾರ್ಥಿಗಳ ಪರಿಕ್ಷಾ ತಯಾರಿಯ ಪೂರ್ವಭಾವಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮನಃ ಪೂರ್ವಕವಾಗಿ ಮಾಡಿದ ಪರಿಶ್ರಮದಿಂದ ಎಂತಹ ಕಠಿಣ ಕಾರ್ಯಗಳನ್ನು ಯಶಸ್ವಿಗೊಳಿಸಬಹುದು. ಸರಳ, ಸುಲಭ-ವಿಚಾರ ಹಾಗೂ ವಿಧಾನಗಳನ್ನು ಅಳವಡಿಸಿಕೊಂಡು ಶ್ರದ್ಧಾಭಕ್ತಿಯಿಂದ ಅಧ್ಯಯನ ಮಾಡಿದಾಗ ಯಶಸ್ಸು ಲಭಿಸುತ್ತದೆ. ಪರೀಕ್ಷಾ ಸಂದರ್ಭಗಳಲ್ಲಿ ಭಯಗೊಳ್ಳದೆ ಆತ್ಮವಿಶ್ವಾಸದಿಂದ ಎದುರಿಸಿ ಭವ್ಯ ಭವಿಷ್ಯತ್ತನ್ನು ನಿರ್ಮಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಮ್.ಇ.ಎಸ್ ಪದವಿ ಕಾಲೇಜು ಪ್ರಾಚಾರ್ಯ ಪ್ರೊ. ಎ.ಪಿ ರಡ್ಡಿ ಮಾತನಾಡಿ, ಮನುಷ್ಯನ ದೈನಂದಿನ ಜೀವನಕ್ಕೆ ಅತ್ಯಂತ ಹತ್ತಿರವಿರುವ ಅರ್ಥಶಾಸ್ತ್ರ ವಿಷಯವು ಪ್ರತಿಯೊಬ್ಬರಿಗೆ ಅವಶ್ಯಕವಾಗಿದೆ. ಆರ್ಥಿಕ ಸ್ಥಿತಿ ಸರಿ ಇದ್ದಾಗ ಮಾತ್ರ ಪ್ರತಿಯೊಂದು ಕ್ಷೇತ್ರಗಳಲ್ಲಿ ಯಸಸ್ಸು ಸಾಧಿಸಲು ಸಾಧ್ಯ ಎಂದು ನುಡಿದರು.
ಪ್ರಾಚಾರ್ಯ ಎಸ್.ಡಿ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಉಪನ್ಯಾಸಕರಾದ ಎಮ್.ಎಸ್ ಪಾಟೀಲ, ಬಿ.ಜಿ ಗಡಾದ, ಪ್ರವೀಣ ವಡೇರ, ಎ.ಎಮ್ ಪಾಟೀಲ ಹಾಗೂ ಕಾಲೇಜು ಸಿಬ್ಬಂದಿ ಅರ್ಥಶಾಸ್ತ್ರ ವಿಷಯದ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅನಿಲ ಲಂಗೋಟಿ, ಸುಷ್ಮೀತಾ ಪಾಟೀಲ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಅಮರೇಶ ಪಾಟೀಲ ಸ್ವಾಗತಿಸಿ, ಸೌಂದರ್ಯ ಕಮತೆ ವಂದಿಸಿದರು.