ಬೆಳಗಾವಿ – ದಿವಂಗತ ದೇವರಾಜು ಅರಸು ಅವರ ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಗೇಣಿ ಶಾಸನ, ಹಾವನೂರು ಆಯೋಗದಂತಹ ಪ್ರಮುಖ ನಿರ್ಧಾರಗಳನ್ನು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ತೆಗೆದುಕೊಂಡ ಹಿನ್ನೆಲೆಯಲ್ಲಿ ಅದರ ಪ್ರತಿಫಲ ಇಂದಿನ ಪೀಳಿಗೆಗೆ ಆಗುತ್ತಿದೆ. ಗೇಣಿ ಹೋರಾಟದ ಅನುಷ್ಠಾನ ಆಗದಿದ್ದರೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗ ರಚಿಸದಿದ್ದರೆ ಈವರೆಗೂ ಬಹುಸಂಖ್ಯಾತರಿಗೆ ನ್ಯಾಯ ಸಿಗುತ್ತಿರಲಿಲ್ಲ. ಆದರೆ ದೇವರಾಜ ಅರಸು ಅವರು ತಮ್ಮ ಕಟು ನಿರ್ಧಾರದಿಂದ ಮುಂದಿನ ಪೀಳಿಗೆಯ ಬದುಕಿನ ದೂರದೃಷ್ಠಿಯಿಂದ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿದ್ದರು ಎಂದು 2019-20 ನೇ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿ ವಿಜೇತ ಬಿ ಎಲ್ ಪಾಟೀಲ ಹೇಳಿದರು.
ಅಥಣಿಯ ವಿಮೋಚನ ಸಂಘದ ಅಧ್ಯಕ್ಷ ಬಿ ಎಲ್ ಪಾಟೀಲರು ಪ್ರಶಸ್ತಿ ಸ್ವೀಕರಿಸಿದ ನಂತರ ತವರಿಗೆ ಆಗಮಿಸಿದ ಸಂದರ್ಭದಲ್ಲಿ ಚಮಕೇರಿಯ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದಿವಂಗತ ದೇವರಾಜ ಅರಸು ಅವರು ಸಮಾಜದ ಎಲ್ಲ ವರ್ಗದ ಸಮುದಾಯಗಳನ್ನು ಒಂದುಗೂಡಿಸುವ ಮೂಲಕ ಸಾಮಾಜಿಕ ನ್ಯಾಯದ ಹರಿಕಾರರಾಗಿ ಹೊರಹೊಮ್ಮಿದ್ದರು ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಿದ್ದು ಸಂತೋಷ ತಂದಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಮಹಾದೇವ ಬಿರಾದಾರ, ಮುರುಗೇಶ ಬಾನಿ ಮಾತನಾಡಿ, ಸುಮಾರು ನಾಲ್ಕು ದಶಕಗಳಿಂದಲೂ ಗಡಿಭಾಗದ ಮಲಾಬಾದ ದಲ್ಲಿ ವಿಮೋಚನ ಸಂಸ್ಥೆಯ ಮೂಲಕ ಬಡ ಮಕ್ಕಳಿಗೆ ಆಶ್ರಯದಾತರಾಗಿ ಅನ್ನ, ಅರಿವು, ಆಶ್ರಯದೊಂದಿಗೆ ಬಿ ಎಲ್ ಪಾಟೀಲರು ಶ್ರಮಿಸಿದಕ್ಕೆ ಬಂದಂತಹ ಈ ಪ್ರಶಸ್ತಿ ಈ ನಾಡಿಗೆ ಗೌರವವನ್ನು ಹೆಚ್ಚಿಸಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕ ಇಬ್ರಾಹಿಂಪುರ, ಶಿವಶಂಕರ ಬಡಿಗೇರ, ಈರಣ್ಣ ಸೇರಿದಂತೆ ಇತರರು ಇದ್ದರು.