ಮೂಡಲಗಿ: ಕೋವಿಡ್ ಮಹಾಮಾರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಕೊರೋನಾದಂತಹ ಅಪಾಯದ ಸಮಯದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಫ್ರಂಟ್ಲೈನ್ ವಾರಿಯರ್ಸ್ ಗಳಾದ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು.
ಪಟ್ಟಣದ ಎಪಿಎಮ್ಸಿ ಆವರಣದಲ್ಲಿ ಯಾದವಾಡದ ಡಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ವತಿಯಿಂದ ಹಮ್ಮಿಕೊಳ್ಳಲಾದ ಪತ್ರಕರ್ತರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡುವ ಪತ್ರಕರ್ತರು ಇಂದು ಕೋವಿಡ್ ಸಂದರ್ಭದಲ್ಲಿ ತ್ರೀವ್ರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಅವರಿಗೆ ಆಹಾರ ಕಿಟ್ ನೀಡಿರುವ ಡಾಲ್ಮಿಯಾ ಸಿಮೆಂಟ್ ಕಾರ್ಖಾನೆಯವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಡಾಲ್ಮಿಯಾ ಕಾರ್ಖಾನೆಯ ಸಹಾಯಕ ವ್ಯವಸ್ಥಾಪಕ ರಮೇಶ ಮಳಲಿ ಮಾತನಾಡಿ, ಪತ್ರಕರ್ತರು ಕೋವಿಡ್ ಸಂದರ್ಭದಲ್ಲಿ ಆತಂಕದ ದಿನಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಕೋವಿಡ್ ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಗುರುತಿಸಿದೆ. ಸರ್ಕಾರದ ಮಟ್ಟದಲ್ಲಿ ಪತ್ರಕರ್ತರಿಗೆ ವಿವಿಧ ಸೌಲಭ್ಯ ಹಾಗೂ ಆರ್ಥಿಕ ನೆರವು ನೀಡಬೇಕಾದ ಅಗತ್ಯವಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಪತ್ರಕರ್ತರು ಸೇವಾ ಮನೋಭಾವನೆಯಿಂದ ತಮ್ಮ ಜೀವದ ಹಂಗು ತೊರೆದು ಕೊರೋನಾ ಸೋಂಕಿನ ವ್ಯಾಪಕ ಹರಡುವಿಕೆಯ ಸಂದರ್ಭದಲ್ಲಿ ಜನರನ್ನು ಎಚ್ಚರಿಸುತ್ತಾ ಹಗಲಿರುಳು ಶ್ರಮಿಸುತ್ತಿರುವ ಪತ್ರಕರ್ತರ ಕಾರ್ಯ ಮಹತ್ವದಾಗಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಹಿರಿಯ ವ್ಯದ್ಯಾಧಿಕಾರಿ ಡಾ. ಆರ್ ಎಸ್ ಬೆಣಚಿನಮರಡಿ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಕಾರ್ಖಾನೆಯ ಹಿರಿಯ ಕಾರ್ಯಕ್ರಮಾಧಿಕಾರಿ ಚೇತನ್ ವಾಗಮೋಡೆ, ಮಲ್ಲೇಶ ಕುಂಬಾರ, ಈರಣ್ಣ ಸೋನವಾಲ್ಕರ, ಅಶೋಕ ಮಾರಡ್ಡಿ, ವಿಶಾಲ ಜಾಧವ ಹಾಗೂ ಮತ್ತಿತರರು ಉಪಸ್ಥಿತರಿದ್ದರು.