ಬೆಳಗಾವಿ: “ಶಿಕ್ಷಕ ವರ್ಗದವರಿಗೆ ರಂಗಕಲೆಯ ಜ್ಞಾನವು ಅಗತ್ಯವಾಗಿದೆ. ಸಾಹಿತ್ಯ ಪಠ್ಯಗಳನ್ನು ಬೋಧಿಸುವಾಗ ಅಭಿನಯ ಕಲೆಯ ಬಗೆಗೆ ಸಾಮಾನ್ಯ ತಿಳಿವಳಿಕೆಯು ಇರಬೇಕಾಗುತ್ತದೆ. ಪ್ರಾಚೀನ ಕನ್ನಡ ಪಠ್ಯಗಳೆಲ್ಲವೂ ನಾಟಕೀಯವಾಗಿವೆ. ಆದುದರಿಂದ ರಂಗಕಲೆಯ ಬಗೆಗೆ ಎಲ್ಲರೂ ತಿಳಿದಿರಬೇಕು ಎಂದು ಕನ್ನಡ ಸಾಹಿತ್ಯದ ಪ್ರಮುಖ ಕೃತಿಗಳೆಲ್ಲವೂ ನಾಟಕೀಯವಾಗಿಯೇ ಹೊರಹೊಮ್ಮಿವೆ” ಎಂದು ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಅಭಿಪ್ರಾಯಪಟ್ಟರು.
ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಕನ್ನಡ ರಂಗಭೂಮಿ ಕುರಿತ ಒಂದು ದಿನದ ಪುನಶ್ಚೇತನ ಕಾರ್ಯಾಗಾರ ಹಾಗೂ ‘ಕನ್ನಡ ರಂಗಭೂಮಿ ಮತ್ತು ರಾಷ್ಟ್ರೀಯತೆ ಯ’ ಕುರಿತು ನೀಡಿದ ಉಪನ್ಯಾಸದಲ್ಲಿ ರಂಗಕಲೆಯು ಮನುಷ್ಯನ ಭಾವನೆಗಳನ್ನು ಸಾಮುದಾಯಿಕವಾಗಿ ಅಭಿವ್ಯಕ್ತಿಸುವ ಮಾಧ್ಯಮವಾಗಿದೆ. ಹಾಗಾಗಿ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಕನ್ನಡ ರಂಗಭೂಮಿಯು ತನ್ನ ಅನುಪಮವಾದ ಕೊಡುಗೆಯನ್ನು ನೀಡಲು ಸಹಕಾರಿಯಾಯಿತು ಎಂದರು.
ಪುನಶ್ಚೇತನ ಕಾರ್ಯಾಗಾರದ ತರಬೇತುದಾರರಾಗಿ ಆಗಮಿಸಿದ ರಂಗಾಯಣದ ಕಿರಿಯ ರೆಫರ್ಟರಿ ಕಲಾವಿದರಾದ ಶರೀಫ್ ಅಂದಪ್ಪನವರ ಅವರು ಭಾರತ ಸ್ವಾತಂತ್ರ್ಯ ವೀರರ ಅದ್ಭುತ ಕಥಾನಕಗಳು ರಂಗಭೂಮಿಯ ಮೇಲೆ ಪ್ರೇರಣೆಯನ್ನುಂಟು ಮಾಡಿವೆ. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ, ಅಬ್ಬಕ್ಕ ರಾಣಿ, ದೊಂಡಿಯಾ ವಾಘ, ಸಿಂಧೂರ ಲಕ್ಷ್ಮಣ, ಹಲಗಲಿಯ ಬೇಡರು, ಮೈಲಾರದ ಮಹಾದೇವ ಮುಂತಾದವರ ಕಥಾನಕಗಳು ನಮಗೆ ಪ್ರೇರಣೆಯಾಗಿ ರಾಷ್ಟ್ರೀಯತೆಯನ್ನು ಉದ್ಧೀಪನಗೊಳಿಸುವಲ್ಲಿ ಯಶಸ್ವಿಯಾಗಿವೆ ಅದರಲ್ಲೂ ಉತ್ತರ ಕರ್ನಾಟಕದ ಸ್ವಾತಂತ್ರ್ಯದ ವೀರರ ಕಥಾನಕಗಳ ಕುರಿತು ರಂಗಪ್ರಯೋಗ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು. ಅವರು ತಮ್ಮ ಗಾಯನ, ಅಭಿನಯದ ಮೂಲಕ ರಂಗಾಯಣದ ಕುರಿತು ತರಬೇತಿ ನೀಡಿದರು. ಕಲಾವಿದರಾದ ದರ್ಶನ ಎಸ್. ಭದ್ರಾವತಿ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ವಿಭಾಗದ ಅಧ್ಯಾಪಕರುಗಳು, ಸಂಶೋಧನಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು ಮತ್ತು ರಂಗತರಬೇತಿಯನ್ನು ಪಡೆದುಕೊಂಡರು.
ಫಕೀರಪ್ಪ ಸೊಗಲದ ಅವರು ತಾಂತ್ರಿಕ ವ್ಯವಸ್ಥೆಯನ್ನು ನೆರವೇರಿಸಿದರು. ಅನಿಲ ತಳವಾರ ನಿರೂಪಿಸಿದರು, ಮಹೇಶ್ವರಿ ತೇಗೂರ ಸ್ವಾಗತಿಸಿದರು.