ಸವದತ್ತಿ: ಕೊರೊನಾದಿಂದ ಭಾರತದ ವಿದೇಶಿ ವ್ಯಾಪಾರದಲ್ಲಿ ನಷ್ಟ ಉಂಟಾಗಿದ್ದು, ಬೇಡಿಕೆ, ಉತ್ಪಾದನೆ ಮತ್ತು ವಿದೇಶಿ ವ್ಯಾಪಾರದ ಮೇಲೆ ದೊಡ್ಡ ಪ್ರಮಾಣದ ಋಣಾತ್ಮಕ ಪರಿಣಾಮ ಬೀರಿದೆ. ಜಾಗತಿಕ ಆರ್ಥಿಕ ನಷ್ಟವನ್ನು ಸರಿದೂಗಿಸಲು ಜಾಗತಿಕ ಸಂಯೋಗದ ಅವಶ್ಯಕತೆ ಇದೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಹೆಚ್.ನಾಗೂರ ನುಡಿದರು.
ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಿದ್ದ ಇಂಪ್ಯಾಕ್ಟ ಆಫ್ ಕೋವಿಡ್-19 ಆನ್ ಇಂಡಿಯಾಸ್ ಎಕ್ಸಟರ್ನಲ್ ಸೆಕ್ಟರ್ ಎಂಬ ರಾಷ್ಟ್ರಮಟ್ಟದ ವೆಬಿನಾರ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕೋವಿಡ್-19 ಸಾಂಕ್ರಾಮಿಕ ರೋಗ ಬರುವ ಮುಂಚೆಯೇ ಜಾಗತಿಕ ಆರ್ಥಿಕ ಬೆಳವಣಿಗೆ ದರ ಇಳಿಕೆಯಾಗಿತ್ತು. ಕೋವಿಡ್ -19 ಬಂದ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿ ಜಾಗತಿಕ ಆರ್ಥಿಕತೆಯ ಜಿಡಿಪಿ ಬೆಳವಣಿಗೆ ದರ ಪ್ರತಿಶತ 3.8 ರಷ್ಟು ಇಳಿಕೆಯಾಯಿತು. 2020ರ ನಂತರದ ಆರು ತಿಂಗಳಲ್ಲಿ ಋಣಾತ್ಮಕ ಶೇ.21ರಷ್ಟು ಬೆಳವಣಿಗೆ ದರ ಇದ್ದು. ಕೊನೆಯಲ್ಲಿ ಶೇ.2ರಷ್ಟು ಧನಾತ್ಮಕ ಬೆಳವಣಿಗೆ ದರ ಸಾಧಿಸಿದೆ.
ಸಾಂಕ್ರಾಮಿಕ ರೋಗದ ಕಾರಣದಿಂದ 2020ರಲ್ಲಿ ಭಾರತದ ರಫ್ತು ಪ್ರಮಾಣಕ್ಕಿಂತಲೂ ಆಮದು ಪ್ರಮಾಣವೇ ಹೆಚ್ಚಾಗಿ, ವಿದೇಶಿ ವ್ಯಾಪಾರ ಆರ್ಥಿಕತೆ 2019-20ರಲ್ಲಿ 184 ಬಿಲಿಯನ್ನಿಂದ 152.88 ಬಿಲಿಯನ್ಗೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದರು. ನಂತರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಆಫ್ರಿನ್ ಎ. ಹಳ್ಳೂರ ವಹಿಸಿದ್ದರು, ಸೌಮ್ಯಾ ಪರದೇಶಿ ಪ್ರಾರ್ಥಿಸಿದರು, ಪ್ರೊ. ವಿಜಯ ಮೀಶಿ ಸ್ವಾಗತಿಸಿದರು, ಡಾ.ಎನ್.ಎ.ಕೌಜಗೇರಿ ಪರಿಚಯಿಸಿದರು. ಡಾ. ಅರುಂಧತಿ ಎಫ್. ಬದಾಮಿ ವಂದಿಸಿದರು, ಪ್ರೊ.ಎಮ್.ಸಿ. ಹಾದಿಮನಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಮತ್ತು ರಾಜ್ಯದ ವಿವಿಧ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು.