ಸವದತ್ತಿ: ಕೋವಿಡ್ ಲಸಿಕೆ ಹಾಕಿಸಿಕೊಂಡವರು ಎಲ್ಲಿಯೂ ಸತ್ತಿರುವ ಉದಾಹರಣೆಗಳಿಲ್ಲ. ಸತ್ತವರ ಕಾರಣಗಳು ಹಲವಾರು ಇರುತ್ತವೆ. ಆದರೆ ಕೆಲವರು ಸುಮ್ಮನೆ ವದಂತಿಗಳನ್ನು ಹಬ್ಬಿಸುತ್ತಿರುತ್ತಾರೆ, ವದಂತಿಗಳನ್ನು ನಂಬಬೇಡಿ ಎಂದು ಸವದತ್ತಿ ತಾಲೂಕ ಆಸ್ಪತ್ರೆಯ ವೈದ್ಯರಾದ ಡಾ. ಶಿವನಗೌಡ ಹಚಡದ ನುಡಿದರು.
ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕ, ಎನ್.ಸಿ.ಸಿ., ಯುಥ್ ರೆಡ್ ಕ್ರಾಸ್ ಮತ್ತು ತಾಲೂಕ ಆಸ್ಪತ್ರೆ ಹಾಗೂ ತಾಲೂಕ ಆಡಳಿತವು ಹಮ್ಮಿಕೊಂಡ ಬೃಹತ್ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಲಸಿಕೆ ಹಾಕಿಸಿಕೊಂಡವರಿಗೆ ಕೊರೊನಾ ವೈರಸ್ ಬರುವದಿಲ್ಲ ಅಂತಲ್ಲ. ಲಸಿಕೆ ಹಾಕಿಸಿಕೊಂಡ ವ್ಯಕ್ತಿಯ ದೇಹದಲ್ಲಿ ಕೊರೊನಾ ವೈರಸ್ ಪ್ರವೇಶಿಸಿದರೂ ಅವನಿಗೆ ಪ್ರಾಣಾಂತಿಕ ಆಗುವಂತಹ ಯಾವ ಸಮಸ್ಯೆಗಳು ಆಗುವುದಿಲ್ಲ. ಎರಡು ಡೋಸ್ ಲಸಿಕೆ ತೆಗೆದುಕೊಂಡವರು ಆರೋಗ್ಯವಾಗಿದ್ದ ಉದಾಹರಣೆಗಳು ಇವೆ. ಹೀಗಾಗಿ ಎಲ್ಲರೂ ಸರಕಾರ ನೀಡುವ ಉಚಿತ ಲಸಿಕೆಯನ್ನು ಪಡೆಯುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹೇಳಿದರು.
ಮತ್ತೋರ್ವ ಅತಿಥಿಗಳಾದ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಬಿ.ವಿ.ಮಲಗೌಡರ ಮಾತನಾಡಿ ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರಿಗಾಗಿ ಈ ಬೃಹತ್ ಲಸಿಕೆ ಅಭಿಯಾನವನ್ನು ಹಮ್ಮಿಕೊಂಡಿವೆ. ನೀವೆಲ್ಲರೂ ಲಸಿಕೆ ಹಾಕಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಇಂದು ಮಹಾವಿದ್ಯಾಲಯದಲ್ಲಿ ಒಟ್ಟು 183 ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಪ್ರೊ. ಮಾರುತಿ ಎ. ದೊಂಬರ ಅಧ್ಯಕ್ಷತೆ ವಹಿಸಿದ್ದರು. ಶಾಂಭವಿ ಬಡಿಗೇರ ಪ್ರಾರ್ಥಿಸಿದರು, ಪ್ರೊ. ಎಂ.ಸಿ.ಹಾದಿಮನಿ ಸ್ವಾಗತಿಸಿದರು, ವೇದಿಕೆ ಮೇಲೆ ವೈದ್ಯಾಧಿಕಾರಿಗಳಾದ ಡಾ.ಖಾಜಪ್ಪ ಹೊಸಮನಿ ಉಪಸ್ಥಿತರಿದ್ದರು, ಪ್ರೊ.ಶಿವಾನಂದ ಎಂ. ಹೊಳಿ ವಂದಿಸಿದರು, ಪ್ರೊ.ಶಿವಲೀಲಾ ಅರಹುಣಸಿ ನಿರೂಪಿಸಿದರು.