ಮುನವಳ್ಳಿಃ “ ಎಲ್ಲಿಂದಲೋ ಬಂದು ಇಲ್ಲಿ ಅಂಗಳದಲ್ಲಿ ತಾವರೆ ಹೂವೊಂದು ತಾನಿರುವ ಸ್ಥಳದಲ್ಲಿ ಅರಳಿ ಸುವಾಸನೆ ಬೀರುವಂತೆ ನಮ್ಮ ಜೀವನದಲ್ಲಿ ನಾವು ಸೇವೆಯ ಬದುಕಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸುತ್ತ ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ಗಗೊಳ್ಳುವ ಮೂಲಕ ಮತ್ತೊಂದು ಸ್ಥಳದಲ್ಲಿ ಕಾರ್ಯನಿರ್ವಹಿಸುವುದು ಇಂತಹ ಸಮಯದಲ್ಲಿ ಮೂಲ ಸ್ಥಳದಲ್ಲಿ ಅವರನ್ನು ಬೀಳ್ಕೊಡುವುದು.ನೋವು ನಲಿವಲ್ಲಿ ಹೆಜ್ಜೆ ಹಾಕುವ ಹೊತ್ತು ಈ ಬೀಳ್ಕೊಡುಗೆ.ಅದು ಇಲ್ಲಿ ಭಾವನಾತ್ಮಕವಾಗಿರುವುದು.ಅವರು ನಮ್ಮಿಂದ ಹೊರಟು ಹೋದರೂ ನಮ್ಮ ಅವರ ಬಾಂಧವ್ಯದ ನಂಟು ಸದಾ ಇದ್ದೇ ಇರುತ್ತದೆ” ಎಂದು ಮದ್ಲೂರ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಚ್.ಎನ್.ಪಮ್ಮಾರ ಹೇಳಿದರು.
ಅವರು ಮುನವಳ್ಳಿ ಸಮೀಪದ ಸರಕಾರಿ ಪ್ರೌಢಶಾಲೆ ಮದ್ಲೂರಿನಲ್ಲಿ ಹಿಂದಿ ವಿಷಯದ ಶಿಕ್ಷಕರಾದ ಆಯ್.ಜಿ.ಉಳ್ಳೀಗೇರಿಯವರ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಬೆನಕಟ್ಟಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಮಡ್ಡಿ, ವಿಕಲಚೇತನ ಸಂಪನ್ಮೂಲ ವ್ಯಕ್ತಿ ವೈ.ಬಿ.ಕಡಕೋಳ, ಗುರುಮಾತೆಯರಾದ ವೈ.ಎ.ಕುಸುಗಲ್, ಆರ್.ಕೆ.ಹೊಸಮನಿ, ಶಿಕ್ಷಕರಾದ ಎಲ್.ಎಫ್.ಕಂಕಣವಾಡಿ, ಬಸವಣ್ಣೆಪ್ಪ,ಎನ್. ಎಸ್.ಸಲಕಿ,ವಾಯ್.ಬಿ.ರೊಟ್ಟಿ,ಎಲ್.ಎ.ಬಾಣದಾರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಬಸವಣ್ಣೆಪ್ಪ ಮಾತನಾಡಿ, “ನಾವಿಬ್ಬರೂ ಜೊತೆಯಲ್ಲಿ ಓದಿದೆವು.ಜೊತೆಯಲ್ಲಿ ಕಳೆದ ಆರು ವರ್ಷಗಳಿಂದ ಒಂದೇ ಶಾಲೆಯಲ್ಲಿ ಸೇವೆ ಮಾಡಿದೆವು.ನನ್ನ ಸನ್ಮಿತ್ರ ಈಗ ವರ್ಗಗೊಂಡಿರುವರು. ಅವರ ಸೇವೆ ಮುಂದಿನ ಶಾಲೆಯಲ್ಲಿಯೂ ಕೂಡ ಉತ್ತಮವಾಗಿ ಸಾಗಲಿ” ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ವರ್ಗಗೊಂಡ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾದ ಮಡ್ಡಿಯವರು ಮಾತನಾಡಿ, “ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ವಿದ್ಯಾರ್ಥಿಗಳು ತಮ್ಮ ಗುರುಗಳ ಕುರಿತು ಮಾತನಾಡಿದರು. ನಾವಿಬ್ಬರೂ ಕಾರ್ಯ ನಿಮಿತ್ತ ಸವದತ್ತಿಯಲ್ಲಿ ಸಭೆಯೊಂದರಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕೂಡಿದೆವು. ಅಂದು ಅವರ ಪರಿಚಯ ನಮ್ಮಿಬ್ಬರಲ್ಲಿ ನಿಕಟ ಸ್ನೇಹಕ್ಕೆ ಕಾರಣವಾಯಿತು.ಅವರ ಮುಂದಿನ ಸೇವೆ ಉತ್ತಮವಾಗಿ ಸಾಗಲಿ”ಎಂದು ಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಆಯ್.ಜಿ.ಉಳ್ಳೀಗೇರಿಯವರು, “ಈ ಶಾಲೆಯ ಎಲ್ಲ ನನ್ನ ವೃತ್ತಿ ಬಾಂಧವರು ನನ್ನನ್ನು ತಮ್ಮ ಸಹೋದರನಂತೆ ಕಂಡಿರುವರು. ನಾವೆಲ್ಲರೂ ಅಣ್ಣತಮ್ಮಂದಿರಂತೆ ಇಲ್ಲಿ ಕಾರ್ಯ ನಿರ್ವಹಿಸಿದೆವು. ಇದೊಂದು ಮರೆಯಲಾಗದ ಅನುಭವ.,ನನ್ನ ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು. ಉತ್ತಮ ಫಲಿತಾಂಶ ಗಳಿಸಬೇಕು. ಆಗಾಗ ನನ್ನ ಸಮಯಾನುಕೂಲ ನೋಡಿಕೊಂಡು ನಾನು ಮತ್ತೆ ತಮ್ಮನ್ನು ಭೇಟಿಯಾಗುವೆನು” ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಅಂಬವ್ವ,ಹಣಮಂತ,ಲಕ್ಷ್ಮೀ ತಮ್ಮ ಗುರುಗಳ ಕುರಿತು ಮಾತನಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಎಂಟನೆಯ ತರಗತಿಯ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಜರುಗಿತು.ಶಿಕ್ಷಕ ಎಲ್.ಎ.ಬಾಣದಾರ ಕಾರ್ಯಕ್ರಮ ನಿರೂಪಿಸಿದರು.