ಸಿಂದಗಿ; ವಿಜಯಪುರ, ಬಾಗಲಕೋಟ, ಕಲಬುರ್ಗಿ ಭಾಗದ ರೈತರ ತೊಗರಿ ಬೆಳೆ ಸಂಪೂರ್ಣ ನಾಶವಾಗಿದ್ದರು ಕೂಡಾ ಅವರಿಗೆ ಪರಿಹಾರ ನೀಡದೇ ಬರೀ ಬಜೆಟ್ನಲ್ಲಿ ಮುಸ್ಲೀಂ ಸಮುದಾಯಕ್ಕೆ ಹೆಚ್ಚಿಗೆ ಅನುದಾನ ನೀಡಿದ್ದಾರೆ, ಬಹುಸಂಖ್ಯಾತ ಹಿಂದೂಗಳಿಗೆ ಯಾವ ಯೋಜನೆಗಳಿಗೆ ಅನುದಾನ ನೀಡದೇ ನಮ್ಮ ದೇವಸ್ಥಾನದ ಪೂಜಾರಿಗಳಿಗೆ ೨ ಸಾವಿರ, ಆದರೆ ಇಮಾಮ್ ಗಳಿಗೆ ೬ ಸಾವಿರ ನೀಡಿದ್ದಾರೆ. ಇದು ತುಷ್ಟಿಕರಣದ ಪರಮಾವಧಿಯ ರೈತ ವಿರೋಧಿ ಸರಕಾರವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಸರಕಾರದ ವಿರುದ್ಧ ಹರಿಹಾಯ್ದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇನ್ನು ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.೪% ರಷ್ಟು ಮೀಸಲು ನೀಡಿದ್ದಾರೆ ರಾಜ್ಯದ ಹಿಂದುಳಿದ ವರ್ಗದವರು ಏನು ಮಾಡಬೇಕು ಈ ವಿಜಯಪುರ ಭಾಗಕ್ಕೆ ಬಜೆಟ್ ನಲ್ಲಿ ಯಾವುದೇ ಹೊಸ ಯೋಜನೆ, ಅನುದಾನ ಘೋಷಣೆ ಮಾಡಿಲ್ಲ. ಕಳೆದ ಬಾರಿ ಮಂಡಿಸಿದ ಘೋಷಣೆಗಳು ಜಾರಿ ಮಾಡಿಲ್ಲ, ಈ ಭಾಗದ ಬೃಹತ್ ನೀರಾವರಿ ಯೋಜನೆಯಾದ ಆಲಮಟ್ಟಿ ಜಲಾಶಯ ನೀರು ಜಿಲ್ಲೆಯ ಜನರಿಗೆ, ನೀರಾವರಿಗೆ ಸಮರ್ಪಕ ಬಳಸುವಲ್ಲಿ ವಿಫಲವಾಗಿದೆ. ನೆರೆ ರಾಜ್ಯಕ್ಕೆ ನೀರು ಹರಿಸುತ್ತಿದ್ದಾರೆ ಇದು ದುರ್ದೈವದ ಸಂಗತಿಯಾಗಿದೆ .ಇನ್ನು ಈ ಜಿಲ್ಲೆಯಲ್ಲಿ ಮುಳವಾಡ ಏತ ನೀರಾವರಿ, ಉತ್ತರ ಕರ್ನಾಟಕ ಭಾಗದ ಅತಿದೊಡ್ಡ ನೀರಾವರಿ ಯೋಜನೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ಈ ಕಾಂಗ್ರೆಸ್ ಸರ್ಕಾರ ಒಂದು ಬಿಡಿಗಾಸು ಕೂಡ ಘೋಷಿಸಿಲ್ಲ. ಈ ಯೋಜನೆ ಬಗ್ಗೆ ಆಸಕ್ತಿಯೇ ಇಲ್ಲ. ಇನ್ನು ಚಿಮ್ಮಲಗಿ ನೀರಾವರಿ ಯೋಜನೆಯು ಸಂಪೂರ್ಣ ಸ್ಥಗಿತಗೊಂಡಿದೆ. ಜಿಲ್ಲೆಗೆ ಕೈಗಾರಿಕೆಗಳನ್ನು ತಂದು ಈ ಭಾಗದ ಯುವಕರಿಗೆ ಉದ್ಯೋಗ ನೀಡಿಲ್ಲ. ತೊಗರಿ ಬೆಳೆ ಬೆಳೆದ ರೈತರು ಸಂಕಷ್ಟ ದಲ್ಲಿದ್ದಾರೆ ಕೂಡಲೇ ೮೦೦ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯದ ಸಚಿವರಿಗೆ, ಶಾಸಕರಿಗೆ ಹನಿಟ್ರ್ಯಾಪ್ ಮಾಡಿದ್ದಾರೆ ಅದನ್ನು ತನಿಖೆ ಮಾಡಿ ಎಂದು ನಮ್ಮ ಶಾಸಕರು ಪ್ರತಿಭಟನೆ ಮಾಡಿದರೆ ನಮ್ಮ ಬಿಜೆಪಿಯ ೧೮ ಜನ ಶಾಸಕರನ್ನು ಅಮಾನತ್ತು ಗೊಳಿಸುತ್ತಾರೆ, ವಿಧಾನಸಭಾ ಅಧ್ಯಕ್ಷರ ನಿರ್ಧಾರ ಖಂಡನೀಯ. ಇದು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನಡೆಯಾಗಿದೆ. ಕೂಡಲೇ ಈ ಆದೇಶ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಇನ್ನು ರಾಜ್ಯದ ದಲಿತ ಎಸ್ಸಿಪಿ ಟಿಎಸ್ಪಿ ಯೋಜನೆಗೆ ಮೀಸಲಿಟ್ಟ ಸಾವಿರಾರು ಕೋಟಿ ರೂಪಾಯಿ ಅನುದಾನ ದುರ್ಬಳಕೆ ಈ ಸರ್ಕಾರ ಮಾಡಿಕೊಂಡಿದೆ. ಇತ್ತೀಚೆಗೆ ಸಿಎಂ ಮಂಡಿಸಿರುವ ಬಜೆಟ್ ಸಂಪೂರ್ಣ ಸಾಲಮಯವಾಗಿದೆ , ರಾಜ್ಯದ ಯಾವುದೇ ಅಭಿವೃದ್ಧಿಯ ಬಗ್ಗೆ, ದೂರದೃಷ್ಟಿ ಬಗ್ಗೆ ಯೋಜನೆ ಘೋಷಣೆ ಮಾಡಿಲ್ಲ, ಎಲ್ಲರ ಮೂಗಿಗೆ ತುಪ್ಪ ಸವರಿ , ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ್ ಭೂಸನೂರು, ಸಿಂದಗಿ ಮಂಡಲ ಬಿಜೆಪಿ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಲಿಂಬೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಶೋಕ ಆಲ್ಲಾಪುರ, ಬಿ ಎಚ್ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಗುರು ತಳವಾರ, ಸಿದ್ರಾಮ್ ಆನಗೊಂಡ, ಪ್ರಶಾಂತ ಕದ್ದರಕಿ, ಪೀರು ಕೆರೂರ, ಅಶೋಕ ನಾರಾಣಪೂರ, ವಿಠ್ಠಲ ನಾಯ್ಕೋಡಿ ಅವರು ಹಾಗೂ ಸ್ಥಳೀಯ ಪಕ್ಷದ ನಾಯಕರು ಉಪಸ್ಥಿತರಿದ್ದರು.