ಬೆಳಗಾವಿ – ಸ್ವಾತಂತ್ರ್ಯದ ಅಮೃತಮಹೋತ್ಸವ ವರ್ಷದ ನಿಮಿತ್ತ ಹಿರಿಯ ಸಾಹಿತಿಗಳು ಮತ್ತು ಚಿಂತಕರಿಂದ ನಡೆಯುತ್ತಿರುವ ಚಿಂತನ ಚಾವಡಿ ಗೋಷ್ಠಿಯ ಎರಡನೇ ಕಾರ್ಯಕ್ರಮ ದಿ 9 ರಂದು ರಾಮತೀರ್ಥ ನಗರದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಅಗಲಿದ ಹಿರಿಯ ಸಾಹಿತಿ, ಪತ್ರಕರ್ತ ಶ ಕಲ್ಯಾಣರಾವ ಮುಚಳಂಬಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಚಿಂತನ ಗೋಷ್ಠಿಯ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷೆ ಮಂಗಲ ಮೆಟಗುಡ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಮತ್ತು ನಿವೃತ್ತ ಶಿಕ್ಷಕರಾದ ಎಸ್ ಎಸ್ ಪಾಟೀಲರವರು ರಚಿಸಿದ “ಮನದಾಳದ ಮಾತು” ಕೃತಿಯನ್ನು ಮಂಗಲಾ ಮೆಟಗುಡ್ ಬಿಡುಗಡೆಗೊಳಿಸಿ ನಿವೃತ್ತ ಜೀವನದಲ್ಲೂ ಸಹ ಸಾಹಿತ್ಯಕ ಕೃಷಿ ಮನುಷ್ಯನನ್ನು ಇನ್ನಷ್ಟು ಉಲ್ಲಸಿತ ಗೊಳಿಸುತ್ತದೆ. ಇಂತಹ ಕೃತಿಗಳು ಇನ್ನಷ್ಟು ಬರಲಿ ಎಂದು ಎಸ್ ಎಸ್ ಪಾಟೀಲ ಅವರನ್ನು ಅಭಿನಂದಿಸಿದರು.
ಕೃತಿಯ ಪರಿಚಯ ಹಿರಿಯ ಸಾಹಿತಿ ಜಲತ್ಕುಮಾರ್ ಪುಣಜ ಗೌಡ ಮಾಡಿ, ಈ ಕೃತಿ ಪ್ರತಿಯೊಬ್ಬನ ಮನದಾಳದ ಭಾವನೆಗಳಿಗೆ ಹತ್ತಿರ ವಾಗುವಂತಹ ನಿದರ್ಶನಗಳನ್ನು ಒಳಗೊಂಡಿದೆ. ಮನುಷ್ಯನ ಭಾವನೆ ಅವನ ಜೀವನದ ಪ್ರತಿ ಹಂತದಲ್ಲಿಯ ಆಗುಹೋಗುಗಳು ಕೃತಿಯ ರೂಪದಲ್ಲಿ ಬಂದಾಗ ಸಾಹಿತ್ಯ ಮನಸ್ಸು ಹಗುರವಾಗುವ ದರ ಜೊತೆಗೆ ಇನ್ನುಳಿದವರಿಗೆ ಅದು ಒಂದು ವಿಶೇಷ ರೂಪದಲ್ಲಿ ದಾರಿದೀಪ ವಾಗುವುದರಲ್ಲಿ ಸಂದೇಹವಿಲ್ಲ, ಮತ್ತು ಮನದಾಳದ ಕೃತಿ ಒಂದು ವಿಶೇಷ ಅನುಭವವನ್ನು ನೀಡುವಂತಹುದು ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಶಿಕ್ಷಕ ಬಸವರಾಜ ಸುಣಗಾರರವರು ಬೆಳಗಾವಿಯ ನಾಡಹಬ್ಬ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ವ್ಯಕ್ತಿತ್ವ ಮತ್ತು ಇಂದಿನ ದಿನಮಾನಗಳಲ್ಲಿ ನಡೆಯುತ್ತಿರುವ ಅಪ್ರಾಮಾಣಿಕತೆಯ ಕುರಿತು ವಿವರಿಸಿದರು. ಸಾಹಿತಿ ಎಸ್ ಎಸ್ ಪಾಟೀಲ್ ಮಾತನಾಡಿ ಕೃತಿಯಲ್ಲಿ ತಮ್ಮ ಜೀವನದ ಅನುಭವ, ತಾವು ಎದುರಿಸಿದ ಕಷ್ಟ, ಸಂತಸದ ಕ್ಷಣಗಳು ಮತ್ತು ಪ್ರವಾಸ ಕಥನ ಮತ್ತು ವೈಯಕ್ತಿಕ ಜೀವನವನ್ನು ಸಹಿತ ಚಿಕ್ಕ ಕಥಾರೂಪದಲ್ಲಿ ವಿವರಿಸಿದ್ದೇನೆ ಮತ್ತು ಇವು ಓದುಗರಿಗೂ ಸಹ ಒಂದು ವಿಶೇಷ ಅನುಭವ ನೀಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಸ. ರಾ. ಸುಳಕೂಡೆ, ಆರ್. ಎಸ್. ಚಾಪಗಾವಿ, ಮುತಾಲಿಕ್ ದೇಸಾಯಿ, ಮಲ್ಲಿಕಾರ್ಜುನ ಜೋಗತಿ , ಬೇವಿನಕೊಪ್ಪಮಠ, ಶೋಭಾ ಉಳ್ಳೆಗಡ್ಡಿ, ಎಸ್. ಜಿ. ಹಕ್ಕಲದವರ, ಸುರೇಶ ತಲ್ಲೂರ, ಗುರುನಾಥ ಕೋರಿ (ಖರ್ಜುರಿ ) ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶಿವಾನಂದ ತಲ್ಲೂರ ಸ್ವಾಗತಿಸಿದರು, ಎಂ. ವೈ. ಮೆಣಸಿನಕಾಯಿ ವಂದಿಸಿದರು ಮತ್ತು ಅಶೋಕ ಉಳ್ಳೆಗಡ್ಡಿ ಕಾರ್ಯಕ್ರಮವನ್ನು ನಿರೂಪಿಸಿದರು.