ಇಂದು ಅನ್ನದಾತ ರೈತನಿಗೆ ಕೈಮುಗಿದು ನಮಿಸುವ ಕಾಲ

0
379

ಡಿಸೆಂಬರ್ 23- ರಾಷ್ಟ್ರೀಯ ರೈತರ ದಿನ (National Farmer’s Day) ನಿಮಿತ್ತ ಲೇಖನ

ಇಂದು ರಾಷ್ಟ್ರೀಯ ರೈತರ ದಿನ, ತುತ್ತು ಅನ್ನ ಕೊಟ್ಟ ರೈತನಿಗೆ ಕೈಮುಗಿದು ನಮಿಸುವ ಕಾಲ. “ಬೇಸಾಯವು ಪ್ರಾರಂಭವಾದಾಗ, ಇತರ ಕಲೆಗಳು ಅನುಸರಿಸುತ್ತವೆ. ಆದ್ದರಿಂದ ರೈತರು ಮಾನವ ನಾಗರಿಕತೆಯ ಸ್ಥಾಪಕರು” ಎಂದು ಡೇನಿಯಲ್ ವೆಬ್ಸ್ಟರ್ ಹೇಳಿದ ಹಾಗೆ ಕೃಷಿಯು ನಮ್ಮ ಬುದ್ಧಿವಂತಿಕೆಯ ಅನ್ವೇಷಣೆಯಾಗಿದೆ. ಏಕೆಂದರೆ ಇದು ಅಂತಿಮವಾಗಿ ನಿಜವಾದ ಕಲೆಯ ಸಂಪತ್ತು, ಉತ್ತಮ ನೈತಿಕತೆ ಮತ್ತು ಸಂತೋಷಕ್ಕೆ ಹೆಚ್ಚಿನ ಕೊಡುಗೆ ನೀಡಿ ಮಾನವನ ನಾಗರಿಕತೆಯ ವಿಕಾಸದ ಹಾದಿಯಲ್ಲಿ ರೈತರು ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ.

ಭಾರತ ಹಳ್ಳಿಗಳಿಂದ ಕೂಡಿದ ಕೃಷಿ ಪ್ರಧಾನ ದೇಶ – ಅನಾದಿ ಕಾಲದಿಂದಲೂ ನಮ್ಮ ದೇಶವನ್ನು ಮುನ್ನಡೆಸಿದ್ದು ಈ ರೈತರೇ ಎಂಬುದು ತುಂಬಾ ಹೆಗ್ಗಳಿಕೆಯ ವಿಷಯ. ಅದಲ್ಲದೇ ಜೀವನದಲ್ಲಿ ಒಮ್ಮೆ ಡಾಕ್ಟರ್, ಲಾಯರ್, ಪೋಲೀಸ್ ಮತ್ತು ಶಿಕ್ಷಕರು ಬೇಕು ಎಂದು ನನ್ನ ಅಜ್ಜ ಹೇಳುತ್ತಿದ್ದರು. ಆದರೆ ಅವರಿಗೆ ನಮಗೆ ಪ್ರತಿದಿನ, ದಿನಕ್ಕೆ ಮೂರು ಬಾರಿ ಅನ್ನ ನೀಡುವ ರೈತ ಬೇಕು. ಹೀಗಾಗಿ ರೈತರ ಮಹತ್ವವನ್ನು ಸಾರುವ ಉಲ್ಲೇಖವನ್ನು ನಮ್ಮ ಹಿರಿಯರು ಆಗಾಗ ಹೇಳುತ್ತಿರುವುದು ಇಂದಿನ ದಿನಗಳಲ್ಲಿ ಅಕ್ಷರಶಃ ಸತ್ಯವಾದ ಮಾತಾಗಿದೆ. ರೈತರು ಮತ್ತು ಕೃಷಿಕರ ರಾಷ್ಟ್ರೀಯ ಕೊಡುಗೆಗಳನ್ನು ಸ್ಮರಿಸಲು ಮತ್ತು ಅವರ ಮಹತ್ವವನ್ನು ಸಾರಲು ಹಾಗೂ ಜನಪ್ರಿಯ ರೈತ ಮುಖಂಡರಾದ ಪ್ರಧಾನಿ ದಿ.ಚೌಧರಿ ಚರಣ್ ಸಿಂಗ್ ಅವರ ಹುಟ್ಟಿದ ದಿನದ ಸವಿನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್ 23 ರಂದು ಭಾರತದಾದ್ಯಂತ “ರಾಷ್ಟ್ರೀಯ ರೈತರ” ದಿನವನ್ನು ಆಚರಿಸಲಾಗುತ್ತದೆ.

ನಮ್ಮ ದೇಶ ಕೃಷಿ ಪ್ರಧಾನ ದೇಶ – ಕೃಷಿಯೇ ಇಲ್ಲಿ ಬದುಕಿನ ಜೀವಾಳ, ದೇಶದಲ್ಲಿ ಒಂದು ಕಾಲದಲ್ಲಿ ಕೃಷಿಗೆ ಎಷ್ಟು ಗೌರವ ಎಂದರೆ ವೇತನ ಪಡೆಯುವ ಉದ್ಯೋಗಗಳಿಂದ ಹೊರಬಂದು ಕೃಷಿಯನ್ನೇ ಕೈಗೆತ್ತಿಕೊಳ್ಳುತ್ತಿದ್ದರು. ಇದರ ಹಿಂದಿರುವುದು ಸ್ವಾಭಿಮಾನ ಹಾಗೂ ಸ್ವತಂತ್ರ ಬದುಕಿನ ಹಂಬಲ. ನಮ್ಮ ಬಾಲ್ಯದ ದಿನಗಳಲ್ಲಿ ಕಂಡ ಕೃಷಿಯ ಖುಷಿ ಇಂದು ನೆನಪು ಮಾತ್ರ. ಅವಿಭಕ್ತ ಕುಟುಂಬದಲ್ಲಿ ಮನೆಯವರೆಲ್ಲರ ಕಾಯಕ ಕೃಷಿ, ಉಳುಮೆ ಮಾಡಲು, ಹಾಲು ಹಾಗೂ ಕೃಷಿಗೆ ಅಗತ್ಯವಾದ ಗೊಬ್ಬರಕ್ಕೆ ಜಾನುವಾರಗಳೇ ಆಧಾರ. ಯಂತ್ರಗಳಿಲ್ಲದ ಕಾಲ, ಸಾವಯವ ಕೃಷಿಗೆ ಆದ್ಯತೆ. ಮರದ ನೇಗಿಲು, ನೊಗಗಳೇ ಕೃಷಿಕನ ಉಳುಮೆಯ ಆಯುಧ. ಮಳೆಗಾಲದ ತುಸು ಬಿರುಸಿನ ಮಳೆಯ ನಡುವೆಯೂ ಉತ್ಸಾಹದ ನಾಟಿಕಾರ್ಯ ಮಾಡುತ್ತಿದ್ದರು. ಮನೆಮಂದಿಯೆಲ್ಲ ಗದ್ದೆಯ ನಾಟಿಕಾಯಕದಲ್ಲಿ ತೊಡಗುತ್ತಿದ್ದರು. ಮನೆಯ ಕಣದಲ್ಲಿ ಬೆಳೆದ ಭತ್ತವನ್ನು ಒಡಲೊಳು ಹೊತ್ತು ನಿಂತ ತಿರಿ. ಭತ್ತದೊಂದಿಗೆ ಸಾವಯವ ಆಧಾರಿತ ತರಕಾರಿಗಳ ಬೆಳೆ. ಮನೆಗೆ ಸಾಕಾಗಿ ಮಾರುವ ಮಟ್ಟದಲ್ಲಿ ಹುಲುಸಾದ ಬೆಳೆಗೆ ವಿಷಯ ನೋಡುವುದಕ್ಕೂ, ಕೇಳುವುದಕ್ಕೂ ಚಂದ. ಅಂದಿನ ಅವಿಭಕ್ತ ಕೃಷಿಕುಟುಂಬದ ಮೊದಲ ನಿರೀಕ್ಷೆ ಬದುಕಿಗೆ ಅಗತ್ಯವಾದಷ್ಟು ಆಹಾರ ಉತ್ಪಾದನೆ ಮಾಡುವುದಾಗಿತ್ತು. ಬೆಳೆದ ಕೃಷಿ ಉತ್ಪನ್ನಗಳಿಂದ ರುಚಿಯಾದ ಹಾಗೂ ಸತ್ವ ಭರಿತವಾದ ಊಟ, ಮಾನಸಿಕವಾಗಿ ಆರೋಗ್ಯಪೂರ್ಣ ಪರಿಸರ, ಹಿರಿಯರಿಗೆ ಮನ್ನಣೆ, ಇದೆಲ್ಲ ಕೃಷಿಕುಟುಂಬದಲ್ಲಿ ಸಾಧ್ಯ.

ಇಂದಿನ ಸ್ಥಿತಿ –  ಇಂದಿನ ಕೃಷಿ ಪರಿಸರ ಬದಲಾಗಿದೆ. ಕೃಷಿ ಕ್ಷೇತ್ರಕ್ಕೆ ಕಾಲಿಡಲೂ ಹಿಂಜರಿಕೆ. ಕೃಷಿಯನ್ನು ಕೈಹಿಡಿವ ವಿದ್ಯಾವಂತ ಯುವಕೃಷಿಕರಿಗೆ ಕನ್ಯೆ ಕೈಹಿಡಿವಳೋ ಇಲ್ಲವೋ? ಎಂಬ ಸಂದೇಹ. ಹಿಂದೆ ಇದ್ದ ಅವಿಭಕ್ತ ಕುಟುಂಬಗಳು ಇಂದು ವಿಭಕ್ತ ಕುಟುಂಬಗಳಾಗಿವೆ ಕೃಷಿಕುಟುಂಬದ ವಿದ್ಯಾವಂತರು ಹಳ್ಳಿಯ ಜೀವನವನ್ನು ತೊರೆಯಲು ಮುಂದಾಗುತ್ತಿದ್ದಾರೆ. ವೇತನ ಎಷ್ಟೇ ಸಿಗಲಿ, ನಗರದಲ್ಲಿ ಬದುಕುಬೇಕೆಂಬ ಬಯಕೆ. ಹಾಗಾಗಿ ಹಳ್ಳಿಗಳಲ್ಲಿ ಕೃಷಿಕುಟುಂಬಗಳು ಖಾಲಿಯಾಗುತ್ತಿವೆ. ಈ ಸಮಸ್ಯೆಗಳ ನಡುವೆಯೂ ಕೃಷಿಯನ್ನು ಕೈ ಬಿಡದ ಕೆಲವು ಮಂದಿ ನಮ್ಮ ನಡುವೆ ಇದ್ಧಾರೆ. ಹಳೆಯ ಪದ್ಧತಿಯ ಜಾಗದಲ್ಲಿ ಹೊಸ ಪದ್ಧತಿ ಕೃಷಿಕ್ಷೇತ್ರವನ್ನು ಆವರಿಸಿದೆ. ರಾಸಾಯನಿಕ ಗೊಬ್ಬರಗಳ ಬೇಡಿಕೆ ಹೆಚ್ಚುತ್ತಿದೆ. ಕಾರ್ಮಿಕರ ಕೊರತೆಯ ಕೂಗಿಗೆ ಯಂತ್ರಗಳು ಕೊಂಚ ಪರಿಹಾರ ಒದಗಿಸಿವೆ. ಆದರೂ ಹೊಸ ವಿಧಾನದಿಂದ ಕೃಷಿ ಭೂಮಿಯ ಮಣ್ಣಿನ ಸತ್ವ ವರ್ಷದಿಂದ ವರ್ಷಕ್ಕೆ ಕುಸಿಯಬಹುದೆಂಬ ಆತಂಕ ಕಾಡುತ್ತಿದೆ. ಲಾಭದಾಯಕವಾದ ವಾಣಿಜ್ಯ ಬೆಳೆಗಳಿಂದಾಗಿ ಆಹಾರಕ್ಕೆ ಅಗತ್ಯವಾದ ಭತ್ತದ ಬೆಳೆ ಬತ್ತಲಾರಂಭಿಸಿದೆ. ಕೃಷಿಯೋಗ್ಯ ಭೂಮಿಯಲ್ಲಿ ಗಗನ ಚುಂಬಿ ಕಟ್ಟಡಗಳ ನಿರ್ಮಾಣ ಮುಂದುವರಿದರೆ ಕೃಷಿಗೆ ಮತ್ತಷ್ಟು ಹೊಡೆತ. ಕೃಷಿಭೂಮಿ ಯನ್ನು ಹಡಿಲು ಭೂಮಿಯನ್ನಾಗಿರಿಸಿದರೆ ಅದೂ ಇಳುವರಿಗೆ ಆತಂಕ.

ಮುಂದಿನ ದಿನ – ಕೃಷಿ ಉಳಿಯಲು ಮೊದಲು ಆಗಬೇಕಾದ ಕೆಲಸ ಕೃಷಿ ಕ್ಷೇತ್ರವನ್ನು ಆಕರ್ಷಕವನ್ನಾಗಿರಿಸಲು ಯೋಜನೆಗಳನ್ನು ರೂಪಿಸುವುದು. ವಿದ್ಯಾವಂತ ಯುವಕರು ನಗರದತ್ತ ವಲಸೆ ಹೋಗುವುದನ್ನು ತಡೆದು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹದ ವಾತಾವರಣದ ನಿರ್ಮಾಣ ಮಾಡಬೇಕು. ಕೃಷಿಕ್ಷೇತ್ರದ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವಂತಾಗಬೇಕು, ಕೃಷಿಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕ್ರಮಗಳು ರೂಢಿಸಿಕೊಳ್ಳಬೇಕು, ಕೃಷಿಯಲ್ಲಿ ಅಗತ್ಯವಾದ ಯಂತ್ರಗಳ ಪ್ರಯೋಗ ಹಾಗೂ ಈ ಕುರಿತು ಅಗತ್ಯ ಮಾಹಿತಿ ತಿಳಿದುಕೊಳ್ಳಬೇಕು, ಕೃಷಿಯನ್ನು ಲಾಭದಾಯಕವನ್ನಾಗಿ ರೂಪಿಸಲು ಅಗತ್ಯವಾದ ಸಲಹೆ ಹಾಗೂ ಮಾರ್ಗದರ್ಶನ ಪಡೆಯಬೇಕು ಅಂದಾಗ ಮಾತ್ರ ಕೃಷಿ ಉಳಿಯಲು ಸಾಧ್ಯ.



ಸಂಗ್ರಹ
– ಎನ್.ಎನ್.ಕಬ್ಬೂರ

ಶಿಕ್ಷಕರು ತಾ-ಸವದತ್ತಿ ಜಿ-ಬೆಳಗಾವಿ

ಮೊಬೈಲ್-9740043452