ಬೈಲಹೊಂಗಲ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿಗಳಾಗಿ ನೇಮಕಗೊಂಡ ಶಿವಾನಂದ ಕುಡಸೋಮಣ್ಣವರ ಅವರನ್ನು ಬೆಂಗಳೂರಿನ ಕೇಂದ್ರ ಬಸವ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಬಸವ ಸಮಿತಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ, ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿರುವ ಕುಡಸೋಮಣ್ಣವರ ಅವರಿಂದ ಬೈಲಹೊಂಗಲ ನಾಡಿನ ಕೀರ್ತಿ ಎಲ್ಲೆಡೆ ಹಬ್ಬಲಿ ಎಂದು ಶುಭ ಹಾರೈಸಿದರು.
ನೌಕರರ ಸಮಸ್ಯೆಗಳಿಗೆ ಗಟ್ಟಿಧ್ವನಿಯಾಗಿ ಕೆಲಸ ಮಾಡಲಿ ಎಂದು ಅವರು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಾನಂದ ಕುಡಸೋಮಣ್ಣವರ, ಸರಕಾರಿ ನೌಕರರ ಆಶೋತ್ತರಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿ,ಹೊಸ ಹುದ್ದೆ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಕನ್ನಡ ಜಾನಪದ ಪರಿಷತ್ತಿನ ಬೈಲಹೊಂಗಲ ತಾಲ್ಲೂಕು ಘಟಕದ ಅಧ್ಯಕ್ಷರಾದ ಚಂದ್ರಶೇಖರ ರುದ್ರಪ್ಪ ಕೊಪ್ಪದ ಮಾತನಾಡಿ, ಕಾರ್ಯದಕ್ಷತೆ, ನಿಷ್ಠೆಯಿಂದ ಕಾರ್ಯ ಮಾಡಿದರೆ ಉನ್ನತ ಹುದ್ದೆಗಳು ಹುಡುಕಿಕೊಂಡು ಬರುತ್ತವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ ಮಾತನಾಡಿ, ನೂತನ ಜಂಟಿ ಕಾರ್ಯದರ್ಶಿಗಳು ಸರಕಾರಿ ನೌಕರರ ಪ್ರತಿನಿಧಿಯಾಗಿ ಉತ್ತಮ ಸೇವೆ ಸಲ್ಲಿಸಲಿ ಎಂದು ಶುಭ ಕೋರಿದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಫಕ್ಕೀರನಾಯ್ಕ ಗಡ್ಡಿಗೌಡರ ಮಾತನಾಡಿ, ಸದ್ಯ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೈಲಹೊಂಗಲ ತಾಲೂಕಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶಿವಾನಂದ ಅವರು ಸರಕಾರಿ ನೌಕರರ ಸಂಘವನ್ನು ಇನ್ನೂ ಉತ್ತಮ ರೀತಿಯಲ್ಲಿ ಸಂಘಟನೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಲಿ ಎಂದು ಆಶಯ ವ್ಯಕ್ತಪಡಿಸಿದರು.
ಶ್ರೀರಾಮ ವಧುವರರ ವೇದಿಕೆಯ ರಾಜ್ಯ ಸಂಚಾಲಕರಾದ ಬಸವರಾಜ ಬಡಿಗೇರ ಸ್ವಾಗತಿಸಿದರು. ಹುಲಿಕೇರಿ ತಾಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಅಶೋಕ ಶೀಲವಂತರ ವಂದಿಸಿದರು.