ಬೀದರ – ಮಕ್ಕಳಿಗೆ ಶಾಂತಿ ಸೌಹಾರ್ದದ ಪಾಠ ಹೇಳಬೇಕಾದ ಶಿಕ್ಷಕರೇ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಬೀದಿ ಜಗಳ ಮಾಡಿಕೊಂಡ ಘಟನೆ ಜಿಲ್ಲೆಯ ಮರ್ಜಾಪೂರ (ಎಮ್) ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲೆಯಲ್ಲಿ ಮಧ್ಯಾಹ್ನ ಬಿಸಿ ಊಟ ನೀಡುವ ಯೋಜನೆ ಜೊತೆ ಮಕ್ಕಳಿಗೆ ಪೌಷ್ಟಿಕಾಹಾರ ಕೂಡ ಜಾರಿಗೆ ತಂದಿದ್ದು ಈ ಯೋಜನೆಯಲ್ಲಿ ಇವಾಗ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಕಾರಣಕ್ಕಾಗಿಯೇ ಈ ಇಬ್ಬರು ಶಿಕ್ಷಕರು ಕೇವಲ ಆರು ಸಾವಿರ ರೂಪಾಯಿ ಗೋಸ್ಕರ ಮಕ್ಕಳ ಮುಂದೆ ಗಲಾಟೆ ಮಾಡಿಕೊಂಡಿದ್ದು ಮಕ್ಕಳ ಶಿಕ್ಷಣಕ್ಕೆ ಆತಂಕ ತಂದೊಡ್ಡಿದ್ದಾರೆ.
ವಿದ್ಯಾ ಸಂಸ್ಥೆಗಳು ಅಭಿವೃದ್ಧಿ ಹೊಂದುತ್ತಾ ಸಾಗುತ್ತಾ ಹೆಚ್ಚಾಗುತ್ತಾ ಹೋದಂತೆ ಅಲ್ಲಿಯ ಪ್ರದೇಶ ಕೂಡ ಅಭಿವೃದ್ಧಿ ಆಗುತ್ತದೆ ಎಂದು ಹೇಳಬಹುದು. ಆದರೆ ಬೀದರ ಶಿಕ್ಷಣ ಇಲಾಖೆ ಮತ್ತು ಮಕ್ಕಳು ಅಭಿವೃದ್ಧಿ ಹೊಂದುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಭ್ರಷ್ಟಾಚಾರ ಗಡಿ ಜಿಲ್ಲೆಯಲ್ಲಿ ತಾಂಡವವಾಡುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಬಹುದು.
ಈ ಇಬ್ಬರು ಶಿಕ್ಷಕರು ರಸ್ತೆಯ ಮೇಲೆ ಶಾಲಾ ಮಕ್ಕಳು ಮುಂದೆ ಹೊಲಸು ಪದಗಳನ್ನು ಬಳಸಿ ಜಗಳ ಮಾಡಿಕೊಂಡು ಶಿಕ್ಷಣ ಇಲಾಖೆಯ ಮರ್ಯಾದೆಯನ್ನೇ ಹಾಳು ಮಾಡಿದ್ದಾರೆ. ರಾಜ್ಯ ಸರ್ಕಾರ ಮಕ್ಕಳಿಗೋಸ್ಕರ ಹಲವು ಯೋಜನೆ ತರುತ್ತಾ ಇದೆ. ಶಿಕ್ಷಕರು ಮಕ್ಕಳಿಗೆ ಯೋಜನೆಗಳನ್ನು ತಲುಪಿಸಬೇಕು. ಮಕ್ಕಳಿಗೆ ವಿದ್ಯಾ ಬುದ್ದಿ ಹೇಳಿ ತಿದ್ದಬೇಕಾದ ಶಿಕ್ಷಕರು ಈ ರೀತಿ ಮಕ್ಕಳ ಮುಂದೆ ಗಲಾಟೆ ಮಾಡಿಕೊಂಡಿದ್ದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಎಲ್ಲರಲ್ಲಿ ಮನೆಮಾಡಿದೆ.
ಘಟನೆಯ ಹಿನ್ನೆಲೆ:
ಈ ಘಟನೆ ಯಾವ ಕಾರಣಕ್ಕೆ ನಡೆಯಿತು ಎಂಬ ಬಗ್ಗೆ ನೋಡುವುದಾದರೆ…. ಬೀದರ್ ತಾಲ್ಲೂಕಿನ ಮರ್ಜಾಪೂರ (M) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದ ಹಣದ ಹಂಚಿಕೊಳ್ಳುವ ವಿಷಯದಲ್ಲಿ ಮುಖ್ಯಗುರು ಆದ ಮಡಯ್ಯಸ್ವಾಮಿ ಮತ್ತು ಶಿಕ್ಷಕ ಶಾಂತಕುಮಾರ ಇಬ್ಬರೂ ಶಾಲೆಯ ಎದುರುಗಡೆ ಜಗಳ ಆಡುತ್ತಿದಾರೆ. ನಿನ್ನ ತಲೆ ಖರಾಬಾಗಿದೆ, ನಿನ್ನ ತಲೆ ಖರಾಬಾಗಿದೆ ಎಂದು ಕಿತ್ತಾಡುತ್ತ ಈ ಇಬ್ಬರು ಶಿಕ್ಷಕರು ಊರ ಜನರ ತಲೆ ಖರಾಬು ಮಾಡಿಬಿಟ್ಟರೆನ್ನಬಹುದು. ಸರ್ಕಾರಿ ಅನುದಾನವನ್ನು ಮಕ್ಕಳಿಗೆ ಹಂಚದೆ ತಾವೇ ನುಂಗಿ ಹಾಕುವ ಭರದಲ್ಲಿ ಪರಸ್ಪರ ವಿಶ್ವಾಸ ಕಳೆದುಕೊಂಡ ಶಿಕ್ಷಕರು ನೈತಿಕ ಶಿಕ್ಷಣದ ಮಾನವನ್ನೇ ಹರಾಜು ಹಾಕಿದ್ದಾರೆ.ಬೀದರ್ ಜಿಲ್ಲಾ ಆಡಳಿತ ಮತ್ತು ಶಿಕ್ಷಣ ಇಲಾಖೆ ಯಾವ ರೀತಿ ಇಬ್ಬರು ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ