ಆರ್ ಚಂದ್ರು ನಿರ್ದೇಶನದ, ನಟ ನಿರ್ದೇಶಕ ಉಪೇಂದ್ರ ಅಭಿನಯದ ಕಬ್ಜ ಚಿತ್ರ. ಉಪೇಂದ್ರ ಅವರ ಹುಟ್ಟು ಹಬ್ಬದ ಪ್ರಯುಕ್ತ “ಕಬ್ಜ” ಚಿತ್ರತಂಡದಿಂದ ಹೊಸ ಮೋಷನ್ ಪೋಸ್ಟರ್ ಆನಂದ ಆಡಿಯೋ ಯ್ಯುಟ್ಯೂಬ್ ಚಾನೆಲ್ ಅಲ್ಲಿ ಬಿಡುಗಡೆಯಾಗಿದೆ.
ಸಿಡಿದೆದ್ದಿರುವ ೧೯೬೦ ರ ಗೂಂಡಾಗಳ ಮಾಫಿಯಾದಲ್ಲಿ, ಭುಗಿಲೆದ್ದಿರುವ ಜ್ವಾಲಾಗ್ನಿ ನರ್ತಿಸುತ್ತಿದೆ. ಎರಡು ಬೈಕ್ ಗಳ ಮೇಲೆ ನರಭಕ್ಷಕ ರೌಡಿಗಳು ಬಂದೂಕುಧಾರಿಗಳಾಗಿ ಇನ್ಯಾರನ್ನೋ ಕೊಚ್ಚಿಹಾಕಲು ಹೊಂಚುಹಾಕಿ ಹೊರಟಿರುವರು. ಅದೇ ನಗರಮಾಫಿಯಾದಲ್ಲಿ ಕಾರೊಂದು ಸ್ಫೋಟಗೊಂಡು ಮತ್ತ್ಯಾರದ್ದೋ ರೋಷಾಗ್ನಿಯಲ್ಲಿ ಉರಿಯುತ್ತಿರುವ ಕ್ರಾಂತಿಕಾರಕ ದೃಶ್ಯ ಮೈಮನ ಆಕರ್ಷಿಸುತ್ತಿರುವುದರ ಜೊತೆಗೆ ಕುದುರೆಗಳ ಝೇಂಕಾರ ಎಲ್ಲರಲ್ಲೂ ಕುತೂಹಲವನ್ನು ಹುಟ್ಟಿಸುವಂತಿದೆ.
ಇವೆಲ್ಲದರ ಮಧ್ಯೆ ನಮ್ಮ “ಇಂಡಿಯನ್ ರಿಯಲ್ ಸ್ಟಾರ್” ಉಪೇಂದ್ರರವರ ದರ್ಶನವಾಗುತ್ತೆ, ಅಗ್ನಿನೇತ್ರಗಳಿಂದ ಕಂಗೊಳಿಸುವ ಅವರ ಕೈಯಲ್ಲಿನ ಕತ್ತಿಯಿಂದ ನೆತ್ತರು ಧರಣಿಯೆಡೆಗೆ ಚಿಮುಕುವುದರ ಜೊತೆಗೆ ಈಗಾಗಲೇ ರಕ್ಕಸ ಮನಸ್ಸಿನ ಮಾನವರನ್ನು ಸಂಹರಿಸಿ ವೀರಾವೇಶದಿಂದ ಇನ್ನುಳಿದವರನ್ನ ಹುಡುಕುತ್ತಿರವಂತೆ ವೀಕ್ಷಕರಿಗೆ ಭಾಸವಾಗುತ್ತದೆ. ಆಗಸ ಮೇಘದೂತ ಈ ಭಯಂಕರ ದೃಶ್ಯವನ್ನು ನೋಡಿ ಬೇರೆಡೆಗೆ ಪಲಾಯನ ಮಾಡುತ್ತಿರುವಾಗ ಉಪೇಂದ್ರರವರ ಹಿಂದೆ ಮೂರ್ತಿಯು ಅಪರಿಚಿತವಾಗಿ ಗೋಚರವಾಗುತ್ತದೆ.
ಈ ಚಿತ್ರದ ಮೋಷನ್ ಪೋಸ್ಟರ್ ಕ್ವಾಲಿಟಿ, ಸ್ಟಿಲ್ ವರ್ಕ್ ಮತ್ತು ಹಾಗೂ ತಾಂತ್ರಿಕ ವಿಭಾಗದ ಸದಸ್ಯರೆಲ್ಲರೂ ತಮ್ಮ ಕರ್ತವ್ಯ ನಿಷ್ಠೆಯಲ್ಲಿ ಅದ್ಧೂರಿತನವನ್ನು ತೋರಿಸಿದ್ದಾರೆ. ವಿಕ್ರಾಂತ್ ರೋಣ ಮತ್ತು ಕೆ ಜಿ ಎಫ್ ನಂತರ ಕನ್ನಡ ಚಿತ್ರೋದ್ಯಮವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಎಲ್ಲಾ ಲಕ್ಷಣಗಳು ಇವೆ. ಹಾಲಿವುಡ್ ರೀತಿಯ ಚಲನಚಿತ್ರಗಳು ನಮ್ಮ ಕನ್ನಡ ಭಾಷೆಯಲ್ಲಿ ಬರುತ್ತಿರುವುದು, ಕನ್ನಡಿಗರಾದ ನಮಗೆಲ್ಲಾ ಹೆಮ್ಮೆಯ ವಿಷಯ. ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ಅವರೆ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ..
ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್,ವಿಜಯ್ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಕಿಚ್ಚ ಸುದೀಪ್, ಕಾಮರಾಜನ್(ಐ ಮೂವಿ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್,ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರಿದ್ದಾರೆ.