Homeಸುದ್ದಿಗಳುಕ.ಸಾ.ಪ.ಮತದಾನ ಗೊಂದಲದ ಗೂಡು

ಕ.ಸಾ.ಪ.ಮತದಾನ ಗೊಂದಲದ ಗೂಡು

ಸೃಜನಶೀಲ ಹೃನ್ಮನಗಳಿಗೊಂದು ಶುಭ ಸುದ್ದಿ.ಅದೇ ಈ ಬಾರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ. ಹೌದು ಇದೊಂದು ಪ್ರತಿಷ್ಠೆಯ ಸಂಗತಿ. ಏಕೆಂದರೆ ನಾನೂ ಅಧ್ಯಕ್ಷನಾಗಿ ಆಯ್ಕೆಯಾಗುತ್ತೇನೆ ಎನ್ನುವ ಹಂಬಲ. ಜೊತೆಗೆ ಒಂದಷ್ಟು ಸ್ವಾರ್ಥ.

ಹಾಗಾದರೆ ಇಲ್ಲಿ ಕೆಲವು ಪ್ರಶ್ನೆಗಳಿವೆ.ನನ್ನ ಮತ ಯಾರಿಗೆ? ಏಕೆ?ನನ್ನ ಮತವನ್ನು ನಾನು ಯಾರಿಗೆ ಹಾಕಿದರೆ ಸೂಕ್ತ. ಏಕೆ ಹಾಕಿದರೆ ಸೂಕ್ತ. ಈ ಎರಡು ಪ್ರಶ್ನೆಗಳನ್ನು ಹಾಕಿಕೊಂಡರೆ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಒಬ್ಬ ಸದಸ್ಯನಾಗಿರುವುದಕ್ಕೆ ಸೂಕ್ತನಾದವನು ಎನಿಸುತ್ತದೆ.

ಈಗಾಗಲೇ ನಾಮಪತ್ರಗಳನ್ನು ಉಮೇದುವಾರರು ಜಿಲ್ಲಾ ಹಂತದ ಚುನಾವಣಾಧಿಕಾರಿಗಳಿಗೆ ಸಲ್ಲಿಸಿಯಾಗಿದೆ.ಇನ್ನೂ ಬಿರುಸಿನ ಪ್ರಚಾರ ಒಂದೇ ಬಾಕಿ.ಹಾಗಾದರೆ ಈ ನಾಮಪತ್ರ ಸಲ್ಲಿಸಿದವರೆಲ್ಲರೂ ನಿಜವಾದ ಸಾಹಿತಿಗಳಾ?ಅಥವಾ ಸಾಹಿತ್ಯ ಪರಿಚಾರಕರಾ?ಇಲ್ಲವೇ ಸಂಘಟಕರಾ?ಅಥವಾ ನಮ್ಮ ಜಾತಿಯವರಾ? ಎನ್ನುವ ಪ್ರಶ್ನೆ ಪ್ರತಿಯೊಬ್ಬ ಸಾಹಿತ್ಯ ಪರಿಷತ್ತಿನ ಸದಸ್ಯನನ್ನು ಕಾಡುತ್ತಿದೆ.

ಹಾಗಾದರೆ ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಕೇವಲ ಸಾಹಿತಿಗಳಾದವರೂ ಇದ್ದಾರೆ.ಇನ್ನೂ ಕೆಲವರು ಪರಿಚಾರಕರೂ ಇದ್ದಾರೆ. ಇನ್ನೂ ಕೆಲವರು ಸಂಘಟಕರೂ ಇದ್ದಾರೆ. ಇನ್ನೂ ಕೆಲವರು ಜಾತಿಯಿಂದ ಗುರುತಿಸಲು ಮುಂದಾದವರು ಇದ್ದಾರೆ. ತಮ್ಮ ಕೆಲವು ಸಂಘಟನೆಗಳನ್ನು ಸಂಪರ್ಕಿಸಿ ಮುಂದಿಟ್ಟುಕೊಂಡು ಮಾನವೀಯತೆಯ ಮೌಲ್ಯಗಳನ್ನು ಗಾಳಿಗೆ ತೂರಿ ಪ್ರಬುದ್ಧ ರಾಜಕಾರಣಿಗಳ ಹಾಗೆ ಕಾಲು ಬೀಳುವ ಮೂಲಕ ತಮ್ಮನ್ನು ತಾವು ಅಧಿಕಾರಶಾಹಿಗಳಂತೆ ವರ್ತಿಸಿಕೊಳ್ಳುವವರಿದ್ದಾರೆ.

ಏಕೆ ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಜಾತಿಯಿಂದ ಗುರುತಿಸಲ್ಪಡುವ ಒಂದು ಸಂಸ್ಥೆಯೇ? ಅಥವಾ ಹತ್ತಾರು ಸಂಘಟನೆಗಳ ಮೂಲಕ ಬೆಳೆದು ಬಂದ ಸಮ್ಮಿಶ್ರ ಪಡೆಗಳ ರಾಜಕಾರಣಿಯಾ? ಅಲ್ಲ. ಅದೊಂದು ಪ್ರಾಂಜ್ವಲ ಮನಸ್ಸುಗಳು ಅಂದು ಕನ್ನಡಮ್ಮನ ಸೇವೆಗೆ ಕಟ್ಟಿಕೊಂಡ ಒಂದು ತಂಡ. ಇಂದು ಅದು ನೆಲಕಚ್ಚಿ ಪಟ್ಟ ಭದ್ರ ಹಿತಾಸಕ್ತಿಗಳ ನಡುವೆ ಒದ್ದಾಡುತ್ತಿದೆ. ಕನ್ನಡಮ್ಮ ತಾಯಿ ಭುವನೇಶ್ವರಿಯ ಸೇವೆಗೆ ಈ ಐದು ವರ್ಷಗಳ ಕಾಲ ನಾನು ನನ್ನದೆಲ್ಲವನ್ನೂ ಮೀರಿ ಟೊಂಕ ಕಟ್ಟಿಕೊಂಡು ಸೇವೆ ಮಾಡುತ್ತೇನೆ ಎನ್ನುವ ಉಮೇದುವಾರರು ಇಷ್ಟು ದಿನ ಏನು ಮಾಡುತ್ತಿದ್ದರು? ಈಗ ಚುನಾವಣೆ ಬಂದ ತಕ್ಷಣ ಕನ್ನಡ ಶಾಲು,ಧ್ವಜ ಎಲ್ಲವೂ ಒಂದೇ ಸಮನೇ ನೆನಪಾಗಿಬಿಟ್ಟವೆ?ಜೊತೆಗೆ ಈ ಹಿಂದೆ ಕಾಲು ಕಸವಾಗಿ ಕಂಡ ಅದೇಷ್ಟೋ ಮತದಾರರು ಈಗ ನೆನಪಿಗೆ ಬಂದರೆ?ಕೇವಲ ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹಾಗೆ ಇವರೂ ಕೂಡ ಅದೇ ದಾರಿಯಲ್ಲಿ ಮುನ್ನಡೆದರೆ ಹೇಗೆ?

ನಿತ್ಯ ನಿರಂತರವಾಗಿ ಕನ್ನಡಮ್ಮನ ಸೇವೆ ಮಾಡುತ್ತ,ಬಂದಿರುವ ಅದೇಷ್ಟೋ ಕನ್ನಡಮ್ಮನ ಪಾದಕುಸುಮಗಳಿವೆ.ಅವುಗಳನ್ನು ಬಾಡಿ ಹೋಗುವ ಮುನ್ನ ಅವುಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಿದೆ.ಇಲ್ಲಿರುವ ಪ್ರತಿಯೊಬ್ಬ ಮತದಾರರೂ ಪ್ರಬುದ್ದರೇ,ಪ್ರಜ್ಞಾವಂತರೇ. ಅವರಿಗೆ ತಮ್ಮ ಮತವನ್ನು ಯಾರಿಗೆ ಹಾಕಿದರೆ ಸೂಕ್ತ ಎನ್ನುವ ಮನೋಭಾವ ಇದೆ.ತಾರ್ಕಿಕ ನೆಲೆಗಟ್ಟಿನಲ್ಲಿ ನಿಜವಾದ ಸಾಹಿತಿ ತನ್ನನ್ನು ತಾನು ಮಾರಿಕೊಳ್ಳುವುದಿಲ್ಲ. ಕೇವಲ ಸಾಹಿತ್ಯದ ಹೆಸರು ಹೇಳಿಕೊಂಡು ತಿರುಗಾಡಿದರೆ ಸಾಲದು. ಅದರೊಂದಿಗೆ ಇನ್ನೊಬ್ಬರನ್ನು ಬೆಳೆಸಿ ತಾನು ಬೆಳೆಯುವ ಗುಣ ಇರಬೇಕು.

ಅವನು ನಿಜವಾದ ಸಾಹಿತಿ. ಸಾಹಿತಿಯಾದವನಿಗೆ ಸಹಿಸಿಕೊಳ್ಳುವ ಗುಣ ಇರಬೇಕು. ಇಲ್ಲಿ ಜಾತಿಯತೆಗೆ ಮಣೆ ಹಾಕಬಾರದು.ಪ್ರಶಸ್ತಿಗಳ ಬೆನ್ನುಹತ್ತಿ ತಮ್ಮ ಹೆಸರಿಗಿಂತ ತಾವು ಪಡೆದ ಪ್ರಶಸ್ತಿಗಳ ಪಟ್ಟಿ ದೊಡ್ಡದಾಗಿರಬಾರದು.ಪ್ರತಿಭೆಯನ್ನು ಗುರುತಿಸಿ ಅವರನ್ನು ಮೇಲೆತ್ತುವ ಕೈಗಳಿಗೆ ಪಟ್ಟ ಕಟ್ಟಬೇಕು. ಈ ಜಗತ್ತು ಕಂಡ ಶ್ರೇಷ್ಠ ಚಿಂತಕ ಕಾರ್ಲ್ ಮಾರ್ಕ್ಸ್ ಒಂದು ಮಾತು ಹೇಳುತ್ತಾನೆ. “ನೇಮಿಸುವ ಕೈಗಳಿಗಿಂತ ದುಡಿಯುವ ಕೈಗಳು ಶ್ರೇಷ್ಠ” ಎಂದು. ಈ ಮಾತು ಅಕ್ಷರಶಃ ನಿಜ.

ಸಾಹಿತ್ಯದ ತಳಬುಡಗೊತ್ತಿರದ ಕೆಲವು ಪ್ರಬುದ್ಧ ಸಾಹಿತಿಗಳ ಹಿಂದೆ ಅಲೆಯುವ ಕೆಲವರು ತಮ್ಮ ಉಮೇದುವಾರರನ್ನು ಸಾಹಿತ್ಯ ಲೋಕದಲ್ಲಿ ಇನ್ನೂ ಮುಂದೆ ಇಂತಹ ಸಾಹಿತಿಗಳು ಹುಟ್ಟಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಹೊಗಳುತ್ತಿರುವವರು.ಹಾಗಾದರೆ ಈ ಹಿಂದೆ ಕನ್ನಡಮ್ಮನ ಸೇವೆ ಮಾಡಿದ ಆಚಂದ್ರಾರ್ಕರಿರುವವರೆಗೆ ಇರುವ ಸಾಹಿತ್ಯ ಕುಸುಮಗಳನ್ನು ಅರ್ಪಿಸಿದ ಧೀಮಂತ ಸಾಹಿತಿಗಳು ಎಲ್ಲಿ ಹೋದರು? ಅವರು ಬಿಟ್ಟು ಹೋದ ಪದಗಳನ್ನು ಆರಿಸಿಕೊಂಡ ಬರೆದ ಇವರು ಪ್ರಬುದ್ದರೆ?ಯೋಚಿಸಬೇಕಿದೆ.ಕನ್ನಡ ನಾಡು ನುಡಿಗಳ ಸೇವೆ ಮಾಡುತ್ತಿರುವ ಅದೇಷ್ಟೋ ಕನ್ನಡಮ್ಮನ ಕಂದರಿದ್ದಾರೆ. ಅವರಿಗೆ ನಮ್ಮ ಮತವನ್ನು ಹಾಕೋಣ. ಇಲ್ಲಿರುವವರು ಅಪ್ರಬುದ್ದರೇನಲ್ಲ.ಆದರೆ ಹೊಗಳು ಭಟ್ಟರಿಂದ ಹೊಗಳಿಕೆ ಸಲ್ಲದು.ನಾವು ಮಾಡಿದ ಕಾರ್ಯಗಳಿಂದ ಜನ ನಮ್ಮನ್ನು ಗುರುತಿಸಬೇಕೇ ವಿನಃ ನಮ್ಮಿಂದ ನಮ್ಮ ಕಾರ್ಯಗಳನ್ನು ಗುರುತಿಸಬಾರದು.

ನಾವು ಇಂದು ಮತ ಹಾಕಬೇಕಾಗಿರುವುದು,ನಿಜವಾದ ಕನ್ನಡದ ಧೀಃ ಶಕ್ತಿಗೆ ಹೊರತು,ಕನ್ನಡದ ಅಧೋ ಶಕ್ತಿಗೆ ಅಲ್ಲ.


ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು

RELATED ARTICLES

Most Popular

close
error: Content is protected !!
Join WhatsApp Group