ಹಣ ನೀಡಲು ಪಕ್ಷಗಳಲ್ಲಿ ಪೈಪೋಟಿ
ಬೀದರ: ಕಲ್ಯಾಣ ಕರ್ನಾಟಕ ಶರಣರ ನಾಡು ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣದಲ್ಲಿ ಝಣ ಝಣ ಕಾಂಚಾಣದ ಸದ್ದು ಜೋರಾಗಿ ಕೇಳಿಬರುತ್ತಿದೆ.ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾಮ ಪಂಚಾಯತ ಸದ್ಯಸರು ಮಾರಾಟಕ್ಕೆ ಇರುವುದು ಮೇಲ್ನೋಟಕ್ಕೆ ಕಾಣುತ್ತಿದೆ.
ಬಿಜೆಪಿ ಗಿಂತ ಹೆಚ್ಚಿಗೆ ನಾವು ಹಣವನ್ನು ಕೊಡುತ್ತೇವೆ ನಮಗೆ ಓಟು ಹಾಕಿ ಎಂದ ಕಾಂಗ್ರೆಸ್ ಮುಖಂಡನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜಿಲ್ಲಾ ಚುನಾವಣೆ ಅಧಿಕಾರಿಗಳು ರಾಜಕೀಯ ನಾಯಕರ ಕೈಗೊಂಬೆ ಆಗಿದ್ದಾರಾ ಎಂಬ ಅನುಮಾನ ಹೆಡೆಯಾಡುತ್ತಿದೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಎಐಸಿಸಿ ಸದಸ್ಯ ಆನಂದ್ ದೇವಪ್ಪ ಅವರು ಮಾತಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿದೆ.
ಬಸವಕಲ್ಯಾಣ ಶಾಸಕ ರಿಗೆ ಸೆಡ್ಡು ಹೊಡೆದು ನಿಂತಿರುವ ಎಐಸಿಸಿ ರಾಷ್ಟ್ರೀಯ ನಾಯಕ ಆನಂದ್ ದೇವಪ್ಪ ಚುನಾವಣೆಯಲ್ಲಿ ತಾವೂ ಕೂಡ ಹಣ ಚೆಲ್ಲಲು ರೆಡಿ ಎಂಬಂತೆ ಮಾತನಾಡಿರುವ ವಿಡಿಯೋ ಹೊರಬಂದಿದೆ.
ಈ ಮುನ್ನವೇ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕೂಡಾ ಸಮಾರಂಭವೊಂದರಲ್ಲಿ ಒಂದು ಹೇಳಿಕೆ ನೀಡಿ, ಕೋಟಿ ಕೋಟಿ ಖರ್ಚು ಆಗಲಿ ನೋಡೇ ಬಿಡುತ್ತೇನೆ ಎಂದು ಹೇಳಿದ್ದರು..
ಈಶ್ವರ ಖಂಡ್ರೆ ಹೇಳಿದ ಎರಡು ದಿವಸದಲ್ಲಿ ಕಾಂಗ್ರೆಸ್ ಪಕ್ಷ ನಾಯಕರು ಗ್ರಾಮ ಪಂಚಾಯತ ಸದ್ಯಸರಿಗೆ ಹಣದ ಆಮಿಷವೊಡ್ಡಿರುವ ವಿಡಿಯೋ ಕೂಡಾ ಇವಾಗ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿ ವಿಪ ಚುನಾವಣೆಯಲ್ಲಿ ಕುದುರೆ ವ್ಯಾಪಾರ ಜೋರಾಗಿರುವ ಸೂಚನೆ ಕೊಟ್ಟಿದೆ.
ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ ಗ್ರಾಮದಲ್ಲಿ ನಡೆದ ಘಟನೆ.. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಮುಖರು ಗ್ರಾ.ಪಂ ಸದಸ್ಯರ ಸಭೆ ನಡೆಸಿದ್ದರು. ಸಭೆಯಲ್ಲಿ ಭಾಗವಹಿಸಿದ ಸದಸ್ಯರಿಗೆ ಹೆಚ್ಚಿನ ಹಣ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನುವ ವಿಡಿಯೋದಲ್ಲಿ , ಬಿಜೆಪಿಯಿಂದ ಈಗಾಗಲೇ ಮತದಾರರಿಗೆ 10 ಸಾವಿರ ರೂ. ಹಣ ನೀಡುತ್ತಿದ್ದಾರೆ. ಆದ್ರೆ ನಾವು ಪ್ರತಿಯೊಬ್ಬರಿಗೆ ತಲಾ 20 ಸಾವಿರ ರೂ. ಅಡ್ವಾನ್ಸ್ ನೀಡಲು ಬಂದಿದ್ದೇವೆ. ಮುಂದೆ ಬಿಜೆಪಿಯವರು ಎಷ್ಟು ಕೊಡ್ತಾರೆಯೋ ಅದಕ್ಕಿಂತಲೂ ಹೆಚ್ಚಿಗೆ ಹಣವನ್ನು ನಾವು ನಿಮಗೆ ಕೊಡುತ್ತೇವೆ. ಅವರು 50 ಸಾವಿರ ಕೊಟ್ಟಲ್ಲಿ ನಾವು 60 ಸಾವಿರ ರೂ. ಕೊಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಹೇಳಿದ ವಿಡಿಯೋ ಇವಾಗ ಬೀದರ್ ಜಿಲ್ಲೆಯಲ್ಲಿ ಬಾರಿ ಸದ್ದು ಮಾಡಿದೆ
ಕಾಂಗ್ರೆಸ್ ಪಕ್ಷದ ಮುಖಂಡರಾದ ಆನಂದ್ ದೇವಪ್ಪ, ಶಿವರಾಜ ನರಶೆಟ್ಟಿ, ಅರ್ಜುನ್ ಕನಕ್ ಸೇರಿದಂತೆ ಪ್ರಮುಖರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಪರಿಷತ್ ಚುನಾವಣೆಗೆ ಎರಡು ಪಕ್ಷಗಳ ಮುಖಂಡರು ಮತದಾರರಿಗೆ ಬಹಿರಂಗವಾಗಿಯೇ ಹಣ ಹಂಚುತ್ತಿದ್ದಾರೆ ಎನ್ನುವ ಆರೋಪ ಗಳು ಈಗ ಎಲ್ಲೆಡೆ ಕೇಳಿ ಬರುತ್ತಿದ್ದು, ಚುನಾವಣಾ ಆಯೋಗ ಯಾವ ರೀತಿ ಕ್ರಮಕ್ಕೆ ಮುಂದಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ
ಗ್ರಾಮ ಪಂಚಾಯತ ಸದಸ್ಯರ ಕುದುರೆ ವ್ಯಾಪಾರ ಯಾರ ಕೊರಳಿಗೆ ವಿಜಯ ಮಾಲೆ ಹಾಕುತ್ತಾರೆ ಎಂಬುದು ಕಾದು ನೋಡಬೇಕು ..