spot_img
spot_img

ಕೀಳರಿಮೆಯಿಂದ ಮುಕ್ತರಾಗಬೇಕೆ?

Must Read

- Advertisement -

ಬಹುತೇಕರು ದೈಹಿಕವಾಗಿ ಬಲಿಷ್ಠವಾಗಿದ್ದರೂ ಮಾನಸಿಕವಾಗಿ ಶಕ್ತಿಶಾಲಿಯಾಗಿರುವದಿಲ್ಲ. ಧೈರ್ಯದ ಕೊರತೆಯಿಂದ ಕೀಳರಿಮೆ ಎಂಬ ಮಾನಸಿಕ ರೋಗದಿಂದ ಬಳಲುತ್ತಿರುತ್ತಾರೆ. ತನ್ನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವದನ್ನು ಬಲವಾಗಿ ನಂಬಿ ತನ್ನ ಸಾಮರ್ಥ್ಯದ ಬಗೆಗೆ ಅಪನಂಬಿಕೆ ಹೊಂದಿರುವದು ಕೀಳರಿಮೆಗೆ ಕಾರಣ. ತನ್ನನ್ನು ತಾನರಿಯದೆ ಅಜ್ಞಾನದ ಕೂಪದಲ್ಲಿ ಬಿದ್ದು ನರಳುತ್ತಾರೆ.

ನನ್ನಲ್ಲಿ ಅಪಾರ ಶಕ್ತಿ ಸಾಮರ್ಥ್ಯ ಅಡಗಿದೆ ಕಠಿಣತಮವಾದುದುನ್ನು ನಾನು ಸಾಧಿಸಬಲ್ಲೆ ಎಂಬ ದೃಢ ನಂಬಿಕೆ ಬೆಳೆಸಿಕೊಳ್ಳಬೇಕು.ಇದನ್ನೇ ಅಲ್ಲವೇ ವಿವೇಕಾನಂದರು ತಮ್ಮ ವಿದ್ಯುತ್ ವಾಣಿಯಲ್ಲಿ ಹೇಳಿದ್ದು. ಆತ್ಮವಿಶ್ವಾಸದ ಮಟ್ಟವನ್ನು ಬೆಳೆಸಿಕೊಳ್ಳಬೇಕೆ ವಿನಃ ನಾನು ಎಂಬ ಅಹಂಕಾರವನ್ನಲ್ಲ. ಅಹಂಭಾವವು ಅಧೋಗತಿಗೆ ಮುನ್ನುಡಿ ಬರೆಯುತ್ತದೆ. ಹೀಗಾಗಿ ಅಹಂಭಾವವನ್ನು ತೊರೆಯಬೇಕು. ಪ್ರಾರಂಭದಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತ ಅದರಲ್ಲಿ ಯಶ ಪಡೆದ ಮೇಲೆ ನಾನು ದುರ್ಬಲನಲ್ಲ’ ಎನ್ನುವ ನಕಾರಾತ್ಮಕ ಭಾವನೆಯನ್ನು ಮನಸ್ಸಿನಿಂದ ತೊಡೆದು ಹಾಕಬೇಕು.

ಪ್ರತಿಯೊಬ್ಬ ವ್ಯಕ್ತಿಗೂ ತಾನೇನಾಗಬೇಕೆಂದು ಬಯಸುವನೋ ಅದೇ ಆಗುವ ಶಕ್ತಿ ಅವನಲ್ಲಿದೆ. ಸಣ್ಣ ಗುರಿಯನ್ನು ಹೊಂದಿರುವದು ಅಪರಾಧ’ ಎಂದು ನಮ್ಮ ಮಾಜಿ ರಾಷ್ಟ್ರಪತಿ ಅಬ್ದುಲ್ಲ ಕಲಾಂ ಅವರು ಹೇಳಿದ್ದಾರೆ. ಸಣ್ಣ ಗುರಿಯನ್ನು ಹೊಂದುವುದೇ ಅಪರಾಧವೆಂದಿರುವಾಗ ಕೀಳರಿಮೆ ಹೊಂದುವದು ಅದಕ್ಕಿಂತ ದೊಡ್ಡ ಅಪರಾಧ. ಅತ್ಯುನ್ನತವಾದುದುನ್ನು ಸಿದ್ದಿಸಿಕೊಳ್ಳಬೇಕು ಸಮಾಜದಲ್ಲಿ ಭಿನ್ನ ವ್ಯಕ್ತಿಯಾಗಿ ಇತರರಿಗೆ ಮಾದರಿಯಾಗಿ ಬಾಳಬೇಕೆಂದು ಇಚ್ಛಿಸಿದರೆ ಅಂಥ ಮಹಾನ ಶಕ್ತಿ ನಮ್ಮಲ್ಲಿ ಉತ್ಪತ್ತಿಯಾಗುತ್ತದೆ.

- Advertisement -

ನಮ್ಮನ್ನು ನಾವು ಕೈಲಾಗದವರು, ಅಬಲರು, ನಿಷ್ಪ್ರಯೋಜಕರು ಎಂದು ತಪ್ಪಾಗಿ ಭಾವಿಸಿಕೊಳ್ಲುವದು ಅಪಾಯಕಾರಿ ಸಂಗತಿ. ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯ ಗಳನ್ನು ಗುರುತಿಸಿಕೊಳ್ಳುವದನ್ನು ಕಲಿಯಬೇಕು. ನಮ್ಮನ್ನು ನಾವು ನಂಬುವ ಮೂಲಕ ಕೀಳರಿಮೆಯಿಂದ ಮುಕ್ತಿ ಪಡೆಯಬಹುದು.

ಬಹಳಷ್ಟು ಸಲ ಚಿಕ್ಕ ಮಕ್ಕಳಿದ್ದಾಗಲೇ ಈ ಕೀಳರಿಮೆ ಭಾವ ಮೊಳಕೆಯೊಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಾರಣ ಮಕ್ಕಳಿಗೆ ಸಾಧಕರ ಜೀವನ ಚರಿತ್ರೆಗಳನ್ನು ಬೋಧಿಸಬೇಕು. ಸಾಹಸಮಯ ಕಥೆಗಳಿರುವ ಚಲನಚಿತ್ರಗಳನ್ನು ನೋಡಲು ಪ್ರೇರೇಪಿಸಬೇಕು. ಇದರಿಂದ ಕೀಳರಿಮೆ ಭಾವ ಮಕ್ಕಳಲ್ಲಿ ಮೂಡದೇ ಸಾಹಸ ಪ್ರವೃತ್ತಿಯು ಎಚ್ಚೆತ್ತುಕೊಳ್ಳುತ್ತದೆ. ಅಲ್ಲದೆ ಮಕ್ಕಳು ಬಾಲ್ಯದಿಂದಲೇ ಕೀಳರಿಮೆಯಿಂದ ಮುಕ್ತರಾಗಿ ಭವಿಷ್ಯದ ಜೀವನದಲ್ಲಿ ಸಮಸ್ಯೆಗಳಿಗೆ ಎದೆಗುಂದದೆ, ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗಗಳೆಂದು ತಿಳಿದು ಧೈರ್ಯದಿಂದ ಮುನ್ನುಗ್ಗುತ್ತಾರೆ,

ಬಾಲ್ಯದಲ್ಲಿಯೇ ಮಕ್ಕಳಿಗೆ ಅವರಲ್ಲಡಗಿದ ಸುಪ್ತ ಪ್ರತಿಭೆಯ ಬಗೆಗೆ ಮನದಟ್ಟಾಗುವಂತೆ ವಿವರಿಸುವದು ಅವಶ್ಯ. ಚಿಕ್ಕ ಪುಟ್ಟ ಕೆಲಸಗಳನ್ನು ಅವರಿಗೆ ಮಾಡಲು ಬಿಡಬೇಕು ಅವರು ಕೆಡಿಸುತ್ತಾರೆ ಹಾಳು ಮಾಡುತ್ತಾರೆ ಎಂದು ಅವರಿಗೆ ಅವರ ಕೆಲಸಗಳನ್ನು ಮಾಡಲು ಬಿಡದೆ ಪರಾವಲಂಬಿಗಳನ್ನಾಗಿಸಬಾರದು. ತಮ್ಮ ಕೆಲಸ ತಾವು ಮಾಡಿಕೊಳ್ಳುವದರಿಂದ ಮನೆಯಲ್ಲಿ ತಂದೆ ತಾಯಿಗೆ ಸಹಾಯ ಮಡುವದರಿಂದ ಅವರ ಆತ್ಮವಿಶ್ವಾಸದ ಮಟ್ಟ ಹೆಚ್ಚುತ್ತದೆ. ಇವೆಲ್ಲವುಗಳಿಂದ `ನಾನೂ ಮಾಡಬಲ್ಲೆ’ ಎನ್ನುವ ನಂಬಿಕೆ ಬೆಳೆಯುತ್ತದೆ. ಅಂಜಿಕೆ ಹೆದರಿಕೆ ಭಯದಂಥ ನಕಾರಾತ್ಮಕ ಭಾವಗಳನ್ನು ಬಿಟ್ಟು ಸಮಸ್ಯೆಗಳನ್ನು ಎದೆಗಾರಿಕೆಯಿಂದ ಎದುರಿಸುವ ಮನೋಭಾವ ಬೆಳೆಯುತ್ತದೆ. ಸ್ವಾವಲಂಬನೆಯ ಬದುಕಿಗೆ ಬುನಾದಿ ಹಾಕಿದಂತಾಗುತ್ತದೆ.

- Advertisement -

ನಿಮ್ಮ ಮಕ್ಕಳನ್ನು ಇತರರ ಮಕ್ಕಳೊಂದಿಗೆ ಹೋಲಿಸಿ ಬೈಯಬೇಡಿ. ಅವರ ಮೇಲೆ ದುಷ್ಪರಿಣಾಮ ಬೀಳುತ್ತದೆ. ಕೇವಲ ಅವರ ದೌರ್ಬಲ್ಯಗಳ ಕುರಿತು ಹೇಳುತ್ತಾ ಚಿಕ್ಕ ಪುಟ್ಟ ತಪ್ಪುಗಳಿಗೆ ದೊಡ್ಡ ಶಿಕ್ಷೆ ಕೊಡುತ್ತಾ ಹೋದರೆ ಅರಳುವ ಮುನ್ನವೇ ಮೊಗ್ಗನ್ನು ಚಿವುಟಿದ ಹಾಗಾಗುತ್ತದೆ. ಹೆತ್ತವರು ಹೀಗೆ ಮಕ್ಕಳೊಂದಿಗೆ ನಡೆದುಕೊಳ್ಳುವದರಿಂದ ಅವರು ಮುಂದೆ ತೀವ್ರ ಖಿನ್ನತೆಗೊಳಗಾಗಿ ಮಾನಸಿಕ ಸ್ಥೀಮಿತತೆ ಕಳೆದುಕೊಂಡು ಕ್ರೂರಿಗಳಾಗುವ ಅಪಾಯವೂ ಇರುತ್ತದೆ.

ಪ್ರತಿ ಮಗುವಿನಲ್ಲೂ ಅಗಾಧವಾದ ಪ್ರತಿಭೆಯೊಂದು ಸುಪ್ತವಾಗಿರುತ್ತದೆ ಅದನ್ನು ಅವರ ಅರಿವಿಗೆ ಬರುವಂತೆ ಮಾಡಿ ಶಹಭಾಸಗಿರಿ ನೀಡುತ್ತಿದ್ದರೆ ಅವರ ನಡವಳಿಕೆಯಲ್ಲಿ ಅಗಾಧವಾದ ಧನಾತ್ಮಕ ಬದಲಾವಣೆಗಳನ್ನು

ಕಾಣಬಹುದು. ತಾನು ಸ್ವ ಸಾಮರ್ಥ್ಯದಿಂದ ವಿಶೇಷವಾದುದುನ್ನು ಸಾಧಿಸಬಲ್ಲೆ ಎಂಬ ಸಂಪೂರ್ಣ ವಿಶ್ವಾಸ ತುಂಬುತ್ತದೆ. ತನ್ನ ಜೀವನದ ಗುರಿ ಧ್ಯೇಯಗಳನ್ನು ನಿರ್ಧರಿಸುವ ಅವುಗಳನ್ನು ಸಾಕಾರಗೊಳಿಸಿಕೊಳ್ಳುವ ಶಕ್ತಿಯು ಬೆಳೆಯುತ್ತದೆ.

ಅನುಭವಗಳಿಂದ ಪಾಠ ಕಲಿತು ಯಾವುದು ಸರಿ ಯಾವುದು ತಪ್ಪು ಯಾವ ಸಂಧರ್ಭಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಮಾತನಾಡಬೇಕು ಎನ್ನುವ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳುತ್ತಾರೆ. ಕೀಳರಿಮೆ ನಮ್ಮ ವಿಚಾರಗಳಿಗೆ ಸಂಬಂಧಿಸಿದೆ. ಆದ್ದರಿಂದ ನಮ್ಮ ಮನಸ್ಸಿನಲ್ಲಿ ಮೂಡುವ ವಿಚಾರಗಳು ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು. ಮೇಧಾವಿಗಳ ಜೊತೆ ಸಜ್ಜನರ ಸಂಗದಲ್ಲಿರಬೇಕು.

ಶಕ್ತಿಗಿಂತ ಯುಕ್ತಿ ಮೇಲು ಎಂಬ ಮಾತಿನಂತೆ ಮನುಷ್ಯ ಕಾಡು ಪ್ರಾಣಿಗಳಾದ ಸಿಂಹ ಹುಲಿ ಆನೆಗಳಿಗಿಂತ ದೈಹಿಕವಾಗಿ ಅಶಕ್ತವಾಗಿದ್ದರೂ ಯುಕ್ತಿಯಿಂದ ಅವುಗಳನ್ನು ಪಳಗಿಸಿದ್ದಾನೆ ಬಲಿಷ್ಠ ಪ್ರಾಣಿಗಳ ಮೇಲೆ ಹಿಡಿತ ಸಾಧಿಸಲು ಮಾನವನ ಮನೋಬಲವೇ ಕಾರಣ. ವಿವೇಕಭರಿತವಾದ ಜೀವನವನ್ನು ನಡೆಸಿದರೆ ಕೀಳರಿಮೆಯಿಂದ ಪಾರಾಗಬಹುದು ನಮ್ಮ ಬದುಕನ್ನು ಹಸನಾಗಿಸಿಕೊಂಡು,ಮಕ್ಕಳಿಗೆ ಸುಂದರವಾದ ಬಾಳನ್ನು ನೀಡಬಹುದು.


ಶ್ರೀಮತಿ ಜಯಶ್ರೀ ಅಬ್ಬಿಗೇರಿ
ಸ ಪ ಪೂ ಕಾಲೇಜು ಕಟಕೋಳ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group