Homeಸುದ್ದಿಗಳುಬಬಲೇಶ್ವರ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ

ಬಬಲೇಶ್ವರ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ

ಸಿಂದಗಿ: ಕಳೆದ ಬೇಸಿಗೆಯಲ್ಲಿ ಬಬಲೇಶ್ವರ, ಬೆನಕೊಟಗಿ, ಕಲಹಳ್ಳಿ, ರಾಂಪೂರ, ಮಂಗಳೂರ, ಆಹೇರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬಬಲೇಶ್ವರ ಕರೆಗೆ ನೀರು ತುಂಬಿಸುವಂತೆ ಸಾಕಷ್ಟು ಬಾರಿ ಒತ್ತಾಯಿ ಮಾಡಿದಾಗ ಕಾಲುವೆಯನ್ನು ಅಗೆದು ನೀರು ತುಂಬಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಏನೆ ಮಾಡಿದರೂ ನೀರು ತುಂಬಿಸುವಲ್ಲಿ ಸಫಲತೆ ಸಿಗಲಿಲ್ಲ. ಆಗ ಸ್ಥಳ ಪರಿಶೀಲನೆ ಮಾಡಲಾಗಿ ಬೆನಕೊಟಗಿ ಹಳ್ಳದಿಂದ ಬಬಲೇಶ್ವರ ಕೆರೆಗೆ ನೀರು ತುಂಬಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಯೋಜನೆಯನ್ನು ರೂಪಿಸಲಾಯಿತು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ರಾಂಪುರ ರಸ್ತೆಯ ಕಾಲುವೆ ಬಳಿ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರರು, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಆಯ್.ಬಿ.ಎಸ್ ವಿಭಾಗ ೦೨ ಇಂಡಿ ಏತ ನೀರಾವರಿ ಕಾಲುವೆಯ ವಿತರಣಾ ಕಾಲುವೆ ಸಂಖ್ಯೆ ೩೧ಎ ಮೂಲಕ ಬಬಲೇಶ್ವರ ಕೆರೆಗೆ ೧ಕೋಟಿ ೩೦ಲಕ್ಷ ರೂ. ಮೊತ್ತದ ನೀರು ತುಂಬುವ ಕಾಮಗಾರಿ ಪ್ರಾರಂಭದ ಪೂಜೆಯನ್ನು ನೇರವೇರಿಸಿ ಮಾತನಾಡಿದ ಅವರು, ಈ ಕಾರ್ಯಕ್ಕೆ ಸಿಎಂ, ಡಿಸಿಎಂ ಅವರ ಸಹಕಾರವು ಇದೆ. ಮೋರಟಗಿ, ಹಂದಿಗನೂರ, ಪುರದಾಳ, ಆಲಮೇಲ, ಬಬಲೇಶ್ವರ ಹಾಗೂ ಯಂಕಂಚಿ ಗ್ರಾಮಗಳ ಕೆರೆಗಳ ಪುನರುತ್ಥಾನ ಹಾಗೂ ನೀರು ತುಂಬಿಸುವ ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಪ್ರಾಮಾಣಿಕವಾಗಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕು ಎಂದರು.

ಮಾಜಿ ಶಾಸಕ ರಮೇಶ ಭೂಸನೂರ ಅವರು ಕೇಂದ್ರ ಸಚಿವ ನೀತಿನ ಗಡ್ಕರಿ ಅವರಿಂದ ಅನುದಾನ ತಂದಿದ್ದೇವೆ ಎಂದು ಸಾಕಷ್ಟು ಬಾರಿ ಹೇಳಿದ್ದಾರೆ. ಮಾಜಿ ಶಾಸಕರೇ ನಿಮ್ಮ ಅವಧಿಯಲ್ಲಿ ಆಲಮೇಲದಿಂದ ನಿಮ್ಮ ಸ್ವಗ್ರಾಮಕ್ಕೆ ಹೋಗುವ ಸುಸಜ್ಜಿತ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ. ಮೇಲಿಂದ ಮೇಲೆ ದೆಹಲಿಗೆ ಹೋಗಿ ದುಡ್ಡು ವ್ಯರ್ಥವೇಕೆ ಮಾಡುತ್ತೀರಿ. ಆ ಕೆಲಸವನ್ನು ಕರ್ನಾಟಕ ಸರಕಾರದಲ್ಲಿಯೇ ಮಾಡಿಸಬಹುದು. ಈಗಾಗಲೇ ೪ಕಿಮಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನುಳಿದ ರಸ್ತೆಗೆ ಶೀಘ್ರ ಮಂಜೂರಾತಿ ತರಲಾಗುವುದು ಎಂದರು.

ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ವಾಯ್.ಸಿ.ಮಯೂರ ಹಾಗೂ ಬುದ್ದು ನಾಯಕ್ ಮಾತನಾಡಿದ ಅವರು, ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಕಾರ್ಯದಲ್ಲಿ ಅವರು ತೊಡಗಿದ್ದು ಸಂತಸ ತಂದಿದೆ. ೨೮೦ಎಕರೆ ವಿಸ್ತೀರ್ಣ ಹೊಂದಿದ ಬಬಲೇಶ್ವರ ಕೆರೆಗೆ ನೀರು ತುಂಬಿಸುವ ಬಹುದಿನಗಳ ಬೇಡಿಕೆ ಇಂದಿನ ಶಾಸಕ ಅಶೋಕ ಮನಗೂಳಿ ಅವರು ಮಾಡಿದಕ್ಕೆ ಬಬಲೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಭಾರಿಯಾಗಿದ್ದೇವೆ. ಈ ಭಾಗದ ಜನ ಜಾನುವಾರುಗಳಿಗೆ ನೀರು ಒದಗಿಸುವ ಅವರ ಕಾರ್ಯ ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಭಾಗಪ್ಪಗೌಡ ಬಿರಾದಾರ, ರಾಚಯ್ಯ, ನಬಿಸಾಬ್, ದವಲತ ದೊಡಮನಿ, ಈರಣ್ಣ ನಾಯ್ಕೋಡಿ, ಶ್ರೀಶೈಲ ದೇಸಾಯಿ, ಗಂಗಾಧರ ಚಿಂಚೋಳ್ಳಿ, ಎಇಇ ಭಾಸ್ಕರ್, ಫಾರೂಕ್, ಜೈಭೀಮ ತಳಕೇರಿ, ಕುಮಾರ ವರ್ಕಾನಳ್ಳಿ, ಅನಿಲ ಪಾಟೀಲ, ಅನೀಲಗೌಡ ಪಾಟೀಲ, ಸಂತೋಷ ಪಾಟೀಲ, ಶರಣಗೌಡ ಪಾಟೀಲ, ಶರಣು ನಾಯ್ಕೋಡಿ, ಬಸವರಾಜ ಪಾಟೀಲ ಸೇರಿದಂತೆ ಹಲವರಿದ್ದರು.

RELATED ARTICLES

Most Popular

close
error: Content is protected !!
Join WhatsApp Group