ಅವರವರ ಸಮಸ್ಯೆಗೆ ಕಾರಣವೆ ಅಧರ್ಮ,ಅಸತ್ಯದ ಜೀವನ. ಇದು ಅವರವರ ಮೂಲ ಧರ್ಮ ಕರ್ಮ,ದೇವರನ್ನು ಬಿಟ್ಟು ಹೊರಗೆ ಬಂದಿರುವವರಿಗೆ ಹೆಚ್ಚಾಗಿ ಕಾಡುತ್ತಿದೆ.ಹಣದಿಂದ ಎಲ್ಲಾ ಸರಿಪಡಿಸಬಹುದೆನ್ನುವ ಅಜ್ಞಾನವೇ ಇನ್ನಷ್ಟು ಭ್ರಷ್ಟಾಚಾರ ಬೆಳೆಸಿದೆ.
ಹಾಗಾದರೆ ಇದಕ್ಕೆ ಪರಿಹಾರವಿದೆಯೆ? ಪರಿಹಾರ ನಮ್ಮೊಳಗೇ ಇದೆ. ಆದರೆ ನಾವೇ ಒಳಗೆ ನಡೆಯದಿದ್ದರೆ ಸಿಗೋದಿಲ್ಲ.ಈಗ ಕೊರೋನಾ ಮಹಾಮಾರಿ ತಾಯಿಯ ರೂಪದಲ್ಲಿ ಬಂದು ಜೀವ ಇದ್ದರೆ ಜೀವನವೆಂದು ಮನೆಯೊಳಗೆ ಕೂರಿಸಿ ಆತ್ಮಾವಲೋಕನಕ್ಕೆ ಅವಕಾಶ ನೀಡಿದ್ದರೂ, ವಿಜ್ಞಾನ ಜಗತ್ತಿಗೆ ಸತ್ಯ ಅರ್ಥವಾಗದೆ ಜನರನ್ನು ಮತ್ತೆ ಮತ್ತೆ ಭೌತಿಕದಲ್ಲಿ ಆಳಲು ಹೊರಟಿದೆ.
ಭಾರತದಂತಹ ಪವಿತ್ರ ದೇಶವನ್ನು ಸ್ವಚ್ಚಮಾಡಲು ಸ್ವಚ್ಚ ಭಾರತೀಯ ಶಿಕ್ಷಣದ ಅಗತ್ಯವಿದೆ. ಶಿಕ್ಷಣದಲ್ಲಿ ಬದಲಾವಣೆ ತರೋದಕ್ಕೂ ಪ್ರಜೆಗಳೆ ವಿರೋಧಿಗಳಾದರೆ ನಮ್ಮ ನಮ್ಮ ಮಕ್ಕಳ ಭವಿಷ್ಯ ನಮ್ಮ ಕೈಯಲ್ಲಿದೆ. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು, ಸತ್ಯವೇ ದೇವರು ಕಾಯಕವೇ ಕೈಲಾಸ,ದೇಶ ಸೇವೆಯೇ ಈಶಸೇವೆ.
ಇವು ಮಂತ್ರದಂತೆ ಬಳಸಿ ತಿಳಿದು, ತಿಳಿಸಿ, ಕಲಿಸಿ, ಬೆಳೆಸಿದರೆ ನಮ್ಮನ್ನು ನಾವು ತಿದ್ದಿ ನಡೆಯಬಹುದು. ಪೋಷಕರು ಸರಿಯಾದರೆ ಮಕ್ಕಳವರೆಗೆ ಅಜ್ಞಾನ ಬೆಳೆಯುವುದಿಲ್ಲ. ಹೀಗೆ ಮೂಲ ದೇಶ, ನೆಲ, ಜಲ, ಧರ್ಮ, ದೇವರು, ಕರ್ಮ ತಿಳಿಯುವುದಕ್ಕೆ ಹೊರಗಿನ ಸರ್ಕಾರದ ಸಾಲ ಬೇಡ. ಸಾಲವೇ ಶೂಲ.
ಮಕ್ಕಳ ದೈವಶಕ್ತಿ ಬೆಳೆಸುವುದಕ್ಕೆ ನಮ್ಮಲ್ಲಿ ದೈವಗುಣವಿರಬೇಕು. ಪರರ ಹಿಂದೆ ನಡೆದರೆ ಪರಮಾತ್ಮ ಸಿಗೋದಿಲ್ಲ. ಪರದೇಶ ಸಿಗೋದಲ್ಲವೆ? ಹೆಚ್ಚು ಸಾಲ ಮಾಡಿದಂತೆಲ್ಲಾ ಮಕ್ಕಳೂ ಸಾಲ ತೀರಿಸಲು ಪರದೇಶದ ಕಡೆಗೆ ನಡೆಯಲೇಬೇಕು. ಇದು ತಪ್ಪಲ್ಲ. ದೂರ ಹೋದ ಮಕ್ಕಳಿಗೆ ಆಸ್ತಿ ಮಾಡದೆ, ದೇಶದ ಋಣ ತೀರಿಸಲು ಸಮಾಜಸೇವೆ ಮಾಡಲು ಹಣ ಬಳಸಿದರೆ ಜೀವಕ್ಕೆ ಮುಕ್ತಿ. ಹೆಚ್ಚು ಆಸ್ತಿ,ಹಣ,ಅಧಿಕಾರ ನಮಗಿದ್ದರೆ
ಅದು ಸಮಾಜದ ಋಣ.ಅದಕ್ಕಾಗಿ ಸಮಾಜ ಸೇವೆ ಅಗತ್ಯ. ಸೇವೆ ಮಾಡದೆ ಸೇವೆ ಮಾಡಿಸಿಕೊಂಡರೆ ರೋಗ ಹೆಚ್ಚುತ್ತದೆ. ಕಷ್ಟಪಡದೆ ಅನುಭವಿಸುವ ಸುಖ ತಾತ್ಕಾಲಿಕ ಇದು ಮಕ್ಕಳು ಮೊಮ್ಮಕ್ಕಳ ಕಾಲದಲ್ಲಿ ಕಷ್ಟಕರ ಎನಿಸುತ್ತದೆ. ಒಗ್ಗಟ್ಟು, ಸಮಾನತೆ, ಸತ್ಯ, ಸ್ವಾಭಿಮಾನ, ಸ್ವಾವಲಂಬನೆ, ಸ್ವತಂತ್ರ ಜ್ಞಾನಕ್ಕೆ ಬೇಕಿದೆ ಸರಳ ಜೀವನ.
ಸರಳವಾಗಿ ಜೀವಿಸುವವರ ಹಿಂದೆ ಜನವಿಲ್ಲದಿದ್ದರೂ ಜನಾರ್ದನ ಇರುತ್ತಾನೆ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು