spot_img
spot_img

ನೆರೆಹೊರೆಯವರೊಂದಿಗೆ ಹೇಗಿರಬೇಕು?

Must Read

- Advertisement -

ಇತ್ತೀಚೆಗೆ ಪಕ್ಕದ ಮನೆಗೆ ನೆಂಟರು ಬಂದಿದ್ದರು ಅವರು ತಮ್ಮ ಮೋಬೈಲ್ ಚಾರ್ಜರ್ ತಂದಿರಲಿಲ್ಲ. ಆಗ ಅವರಿಗೆ ಮೋಬೈಲ್ ಚಾರ್ಜರ್ ಬೇಕಾಯಿತು. ನಮ್ಮ ಮನೆಗೆ ಬಂದರು.ಅವರ ಮೋಬೈಲ್ ನೋಡಿದೆ ಅದಕ್ಕೆ ಬೇಕಾಗುವ ಚಾರ್ಜರ್ ನಮ್ಮ ಮನೆಯಲ್ಲಿತ್ತು ಅವರಿಗೆ ಕೊಟ್ಟು “ನಿಮ್ಮ ಮೋಬೈಲ್ ಚಾರ್ಜ ಆದ ತಕ್ಷಣ ಮರಳಿಸಿ” ಎಂದು ತಿಳಿಸಿದೆ.ತಗೆದುಕೊಂಡು ಹೋದರು. ಮರುದಿನ ಸಂಜೆಯಾದರೂ ಚಾರ್ಜರ ಮರಳಿಸಿರಲಿಲ್ಲ. ಆಫೀಸಿಂದ ಮನೆಗೆ ಬಂದು ಹೆಂಡತಿಯನ್ನು ಅವರ ಮನೆಗೆ ಕಳಿಸಿದೆ. “ಅಯ್ಯೋ ಮರೆತೇ ಬಿಟ್ಟಿದ್ದೆವು.ತಗೊಳ್ಳಿ” ಎಂದು ಚಾರ್ಜರ್ ಕೊಟ್ಟರಂತೆ.

ಅಷ್ಟೇ ಅಲ್ಲ ಮರುದಿನ ನಿನ್ನೆ ಅವರ ಮನೆಗೆ ಬಂದಿದ್ದ ನೆಂಟರೂ ಕೂಡ ಬೆಳಿಗ್ಗೆಯೇ ಊರಿಗೆ ಹೊರಟು ಹೋಗಿರದ್ದರಂತೆ. ಅದೇ ನೆಂಟರು ಮತ್ತೊಂದು ತಿಂಗಳ ನಂತರವೂ ಅವರ ಮನೆಗೆ ಬಂದರು ರಾತ್ರಿ ಸಮಯ ಅವರಿಗೆ ಚಾರ್ಜರ್ ಬೇಕಾಯಿತು.ಇವರೂ ಕೇಳಲು ನಮ್ಮನೆಗೆ ಬಂದರು.ಆಗ ನಾನು ಚಾರ್ಜರ್ ಹಾಕಿರುವೆ ಅರ್ಧ ಗಂಟೆ ಬಿಟ್ಟು ಬಂದು ತಗೆದುಕೊಂಡು ಹೋಗಿ ಎಂದೆ.ಅವರು ಅರ್ಧ ಗಂಟೆ ನಂತರ ಬರಲೇ ಇಲ್ಲ.ಬಹುಶಃ ಕಳೆದ ಸಲ ಚಾರ್ಜರ್ ತಗೆದುಕೊಂಡು ಮರಳಿಸದ ಘಟನೆ ಅವರಿಗೆ ನೆಂಟರು ತಿಳಿಸಿರಬಹುದೇನೋ.? ಇಂಥ ಅನೇಕ ಘಟನೆಗಳು ನಮ್ಮ ಬದುಕಿನಲ್ಲಿ ನಡೆಯುತ್ತಿರುತ್ತವೆ.

ನನ್ನ ಸ್ನೇಹಿತನೊಬ್ಬ ತನ್ನ ವಿವಾಹದ 25 ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದ. ಅದಕ್ಕೆ ತನ್ನ ಬಾಲ್ಯದ ಸ್ನೇಹಿತರನ್ನೆಲ್ಲಾ ಆಹ್ವಾನಿಸಿದ್ದ. ಹಲವರು ದೂರದ ಊರುಗಳಿಂದ ತಮ್ಮ ಸ್ವಂತ ವಾಹನಗಳಲ್ಲಿ ಬಂದಿದ್ದರು. ಕಾರ್ಯಕ್ರಮ ಮುಗಿಯುವುದು ರಾತ್ರಿಯಾಯಿತು. ಒಬ್ಬ ಸ್ನೇಹಿತ ತಮ್ಮ ಊರಿಗೆ ಬೇಗ ಹೊರಡುವ ಆಲೋಚನೆ ಮಾಡಲಿಲ್ಲ. ಆಗ ಉಳಿದವರು ಒಬ್ಬೊಬ್ಬರಾಗಿ ಗೆಳೆಯನಿಗೆ ಶುಭಕೋರಿ ತಮ್ಮ ತಮ್ಮ ಮನೆಗಳಿಗೆ ಹೊರಟು ಹೋದರು. ಆದರೆ ಒಬ್ಬ ಮಾತ್ರ ತನ್ನ ಕಾರಿನಲ್ಲಿ ಬಂದಿದ್ದ. ಅವನಿಗೆ ಆತನ ಪತ್ನಿ ಕರೆ ಮಾಡಿದಳು. ‘ಇನ್ನೂ ಊರಿಗೆ ಬರುತ್ತಿಲ್ಲವಲ್ಲ ಎಲ್ಲಿದ್ದೀರಿ.?’ ಎಂದು. ಆತ ‘ತನ್ನ ಸ್ನೇಹಿತನ ಮದುವೆ ವಾರ್ಷಿಕೋತ್ಸವದಲ್ಲಿ ಇರುವೆ.’ ಎಂದನು. ಆಗ ಅವಳು ‘ರಾತ್ರಿಯಾಯಿತಲ್ಲ. ರಾತ್ರಿ ತಾವು ಮರಳಬೇಡಿ ಇಷ್ಟು ತಡವಾಗಿ ಒಬ್ಬರೇ ಕಾರು ಚಲಾಯಿಸಿಕೊಂಡು ಬರುವ ಪ್ರಯತ್ನ ಮಾಡುವ ಬದಲು ಇವತ್ತು ರಾತ್ರಿ ಅಲ್ಲಿ ಕಳೆದು ನಾಳೆ ಬೆಳಿಗ್ಗೆ ಬನ್ನಿ’ ಎಂಬ ಸಲಹೆ ನೀಡಿದಳು. ಆ ಮಹಾಶಯ ಕೂಡ ಅದಕ್ಕೆ ತಲೆ ಆಡಿಸಿದ. ಪಕ್ಕದಲ್ಲಿ ಇದ್ದ ಸ್ನೇಹಿತ ಕೇಳಿದ ‘ಇನ್ನೂ ಎಷ್ಟು ಹೊತ್ತಿಗೆ ಹೊರಡೋದು.?’ ಅಂತಾ. ಆಗ ಆತ ತನ್ನ ಪತ್ನಿಯ ಸಲಹೆ ಹೇಳಿದನು.

- Advertisement -

ಇದು ನಾವು ಎಲ್ಲಿಯೇ ಹೋದರೂ ಸಮಯದ ಇತಿಮಿತಿ ಅರಿತು ನಮ್ಮ ಕರ್ತವ್ಯ ಪೂರೈಸಬೇಕು. ಅದು ನಮ್ಮ ವಾಸ್ತವ್ಯ ಇನ್ನೊಬ್ಬರಿಗೆ ಹೊರೆಯಾಗುವಂತಿರಬಾರದು ಎಂಬುದಕ್ಕೆ ಒಂದು ನಿದರ್ಶನ. ಆದರೂ ಆತ ರಾತ್ರಿ ತಡವಾದರೂ ತಮ್ಮ ಊರಿಗೆ ಹೊರಟು ಹೋಗಿದ್ದನು.ಎಂಬ ಸಂಗತಿ ಆತನಿಂದ ಮರುದಿನ ತಿಳಿಯಲ್ಪಟ್ಟೆ. ಇದರ ತಾತ್ಪರ್ಯ ಇಷ್ಟೇ ನಾವು ನಮ್ಮ ಸ್ನೇಹಿತರೇ ಇರಲಿ ಸಂಬಂಧಿಕರೇ ಇರಲಿ ಯಾರೇ ಇರಲಿ ಅವರು ತಮ್ಮ ಕುಟುಂಬದ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಕೂಡ ಸಮಯದ ಇತಿಮಿತಿಯಲ್ಲಿ ಅದನ್ನು ಮುಗಿಸಿಕೊಂಡು ಬಂದರೆ ಉತ್ತಮ.

ಹೊತ್ತಲ್ಲದ ಹೊತ್ತಿನಲ್ಲಿ ಕರೆಗಂಟೆ ಬಾರಿಸಿ, ಬಂದು ಬಟ್ಟಲು ಸಕ್ಕರೆ, ಕಾಫಿ, ಟೀ ಪುಡಿ ಬೇಡುವ ನೆರೆಹೊರೆಯವರು ಪ್ರತಿಯೊಂದು ಮನೆಗಿರುತ್ತಾರೆ. ಸಾಮಾಜಿಕ ಸಂಬಂಧಗಳನ್ನು ಕಾಯ್ದುಕೊಂಡು ಹೋಗುವ ನಿಟ್ಟಿನಲ್ಲಿ ಇಂಥ ಬೇಡಿಕೆಗಳನ್ನು ಪೂರೈಸುವುದು ಅನಿವಾರ್ಯವಾಗಿ ಬಿಡುತ್ತದೆ.

ಹಾಗೆ ನೋಡಿದರೆ ಆಕಸ್ಮಿಕವಾಗಿ ಯಾವುದೋ ಒಂದು ವಸ್ತು ಮುಗಿದು ಹೋಯಿತೆಂದಾಕ್ಷಣ ಪಕ್ಕದ ಮನೆಗೆ ಹೋಗಿ ಕೇಳುವುದು ತಪ್ಪೇನಲ್ಲ. ಆದರೆ, ಕೆಲವರು ಇದನ್ನೇ ಒಂದು ಪದ್ಧತಿಯನ್ನಾಗಿಸಿಕೊಂಡು ಬಿಡುತ್ತಾರೆ.

- Advertisement -

ಕೆಲವು ಜನ ಹೇಗಿರುತ್ತಾರೆಂದರೆ, ಬೆಳಗಿನ 6 ಗಂಟೆಯಿಂದಲೇ ಕೈಯಲ್ಲಿ ಟೂತ್‍ಬ್ರಷ್ ಹಿಡಿದು ಪಕ್ಕದ ಮನೆಯತ್ತ ಗಮನಿಸುತ್ತ ನಿಂತುಬಿಡುತ್ತಾರೆ. ಪಕ್ಕದ ಮನೆಯಲ್ಲಿ ವರ್ತಮಾನ ಪತ್ರಿಕೆ ಬಂದು ಬೀಳುತ್ತಿದ್ದಂತೆ ಅದನ್ನು ತಮ್ಮದೇ ಎಂಬಂತೆ ತಂದು ಓದುತ್ತಾರೆ. ಅದನ್ನು ಓದಿ ತ್ವರಿತವಾಗಿ ತಂದುಕೊಟ್ಟರೆ ಪಕ್ಕದ ಮನೆಯಾತ ಸುಮ್ಮನಿರುತ್ತಿದ್ದನೇನೋ.! ಆದರೆ ಪಕ್ಕದ ಮನೆಯಾತ “ನಮ್ಮ ಪತ್ರಿಕೆ ಕೊಡಿ” ಎಂದು ಬಂದು ಕೇಳಿದಾಗಲೇ ಅಸ್ತವ್ಯಸ್ತವಾದ ಪತ್ರಿಕೆಯನ್ನು ಅವರ ಕೈಗಿಡುತ್ತಾರೆ.

ಇನ್ನೂ ಕೆಲವು ಜನ ಹೇಗಿದ್ದಾರೆಂದರೆ, ತಮ್ಮ ಅಕ್ಕಪಕ್ಕ ಅಷ್ಟಿಷ್ಟು ಸಂಭಾವಿತ ಜನರಿದ್ದಾರೆಂದರೆ ಸಾಕು, ಪ್ರತಿಯೊಂದು ವಸ್ತುವಿಗೂ ಅವರ ಮನೆಯನ್ನೇ ಅವಲಂಬಿಸಿರುತ್ತಾರೆ. ಇಸ್ತ್ರೀ, ಮಿಕ್ಸಿ ಖರೀದಿಸುವುದು, ತಮಗೆ ಅಗತ್ಯವೇ ಇಲ್ಲವೆಂದುಕೊಂಡು ಪ್ರತಿನಿತ್ಯ ನೆರೆಮನೆಗೆ ಹೋಗಿ ಕೈಯೊಡ್ಡುತ್ತಿರುತ್ತಾರೆ.

ಮತ್ತೆ ಕೆಲವು ಜನ ಹೇಗಿರುತ್ತಾರೆಂದರೆ, ಪಕ್ಕದ ಮನೆಗೆ ನೆಂಟರಿಷ್ಟರು ಬಂದಾಗ ಏನಾದರೂ ನೆಪ ಮಾಡಿಕೊಂಡು ಅವರ ಮನೆಯಲ್ಲಿ ನಡೆದ ಸ್ಥಿತಿಗತಿ ತಿಳಿದುಕೊಳ್ಳಲೆಂದೇ ಹೋಗಿ, ಅವರ ನೆಮ್ಮದಿಯನ್ನು ಹಾಳು ಮಾಡುತ್ತಾರೆ.

ಇಂತಹವರ ಕಾಟಕ್ಕೆ ಬೇಸತ್ತು ಹಲವು ಜನ ಮನೆಯನ್ನೇ ಬದಲಿಸಿ ಬಿಡುತ್ತಾರೆ. ಕೆಲವರ ಮಾನಸಿಕ ಸ್ಥಿತಿಯೇ ಹಾಗಿರುತ್ತದೆ. ಬೇರೆಯವರಿಂದ ವಸ್ತು ಪಡೆದುಕೊಳ್ಳದೆ ಅವರಿಗೆ ಸಮಾಧಾನವೇ ಇರುವುದಿಲ್ಲ. ತಾವು ಹಾಗೆ ಮಾಡುವುದರಿಂದ ಪಕ್ಕದ ಮನೆಯವರಿಗೆ ಕಿರಿಕಿರಿಯಾಗುತ್ತದೆ ಎಂಬ ಭಾವನೆಯೇ ಅವರಿಗೆ ಬರುವುದಿಲ್ಲ.

ಇನ್ನೂ ಕೆಲವರು ದೊಡ್ಡವರು ಎನಿಸಿಕೊಂಡಿರುತ್ತಾರೆ. ಅವರಿಗೆ ಸಾಕಷ್ಟು ಸಂಬಳವೂ ಇರುತ್ತದೆ. ಆ ಸಂಬಳದಲ್ಲಿ ಸ್ವಲ್ಪ ಹಣ ವ್ಯಯ ಮಾಡಿದರೂ ಅವರ ಕೆಲಸಗಳು ಸಲೀಸಾಗಿ ಆಗುತ್ತಿರುತ್ತವೆ. ಅಷ್ಟು ಮಾಡಲು ಪಾಪ ಅವರಿಗೆ ಮನಸ್ಸಿಲ್ಲ. ಜೇಬಿನಲ್ಲಿ ಒಂದು ಪೈಸೆಯೂ ಕೂಡ ಹೊರ ಹೋಗಬಾರದು. ತಮ್ಮ ಕೆಲಸ ಆಗಬೇಕು. ಇಂತವರು ತಮ್ಮ ಕೈಕೆಳಗಿನವರಿಂದ ಸಣ್ಣ ಪುಟ್ಟ ಕೆಲಸ ಮಾಡಿಸಿಕೊಂಡು ನಿತ್ಯದ ಜೀವನ ಸಾಗಿಸುತ್ತಿರುತ್ತಾರೆ. ಒಂದು ಸಣ್ಣ ವಿಷಯದ ಟೈಪ್ ಕೂಡ ಬೇರೆಯವರು ಪುಕ್ಕಟೆಯಾಗಿ ಮಾಡಿ ಕೊಡಲಿ ಎಂದು ಆದೇಶದಂತೆ ತಮ್ಮ ಕೆಳಗಿನವರಿಂದ ಮಾಡಿಸಿಕೊಳ್ಳುತ್ತಿರುತ್ತಾರೆ. ಇವರ ಸಂಬಳ ಎಷ್ಟಿದ್ದರೇನು ಅಲ್ಲವೇ.?

ಒಂದು ಕಛೇರಿಯಲ್ಲಿ ಒಬ್ಬ ಹಿರಿಯ ಮಹಾನುಭಾವ. ಅವನ ಸಂಬಳ ನೋಡಿದರೆ ಬಹಳ. ಆದರೆ ಕಛೇರಿಯಲ್ಲಿ ಯಾವುದಾದರೂ ಕಾರ್ಯಕ್ರಮ ಮಾಡಬೇಕು ಎಂದರೆ ತನ್ನ ಕೈಕೆಳಗಿನವರು ಹಣವನ್ನು ಕೂಡಿಸಬೇಕು. ಉದಾಹರಣೆಗೆ ಯಾರಾದರೂ ತಮ್ಮ ಕಛೇರಿಯಲ್ಲಿ ವರ್ಗಾವಣೆಯಾದರೆಂದರೆ ಅವರನ್ನು ಬೀಳ್ಕೊಡಬೇಕು. ಬೀಳ್ಕೊಡುವ ಕಾರ್ಯಕ್ಕೆ ತಗಲುವ ಖರ್ಚು ತಾವೊಬ್ಬರೆ ಹಾಕಬಹುದಾದಷ್ಟು ಶ್ರೀಮಂತಿಕೆ ಹಣ ಅವರ ಬಳಿ ಇದ್ದರೂ ಕೂಡ ಜವಾನನಿಗೂ ನೀನು ಇಷ್ಟು ಕೊಡು ಗುಮಾಸ್ತನಿಗೆ ನೀನು ಇಷ್ಟು ಕೊಡು. ಹೀಗೆ ಅವರವರ ಹುದ್ದೆಗನುಸಾರ ಹಣ ಸಂದಾಯ ಮಾಡುವಂತೆ ತಿಳಿಸಿ ಕೂಡಿದ ಹಣದಲ್ಲಿ ತನ್ನ ಪಾಲು ಒಂದಿಷ್ಟು ಸೇರಿಸಿ ವೇದಿಕೆಯಲ್ಲಿ ತನ್ನದೇ ಹಿರಿತನದಲ್ಲಿ ಕಾರ್ಯಕ್ರಮ ಜರುಗಿಸಿ ಹೆಸರು ಪಡೆಯುವವರು ಎಷ್ಟು ಹಣವಂತರಿದ್ದರೇನು.? ಅಲ್ಲವೇ.?

ಇನ್ನೂ ಒಂದು ನಿದರ್ಶನ ಹಲವು ಸ್ನೇಹಿತರು ಸೇರಿ ಪ್ರವಾಸಕ್ಕೆ ಹೋಗಿದ್ದರು. ಅದರಲ್ಲಿ ಒಬ್ಬ ಜಾಣನಿಗೆ ಹಣಕಾಸಿನ ಜವಾಬ್ದಾರಿ ನೀಡಿದ್ದರು. ಅಂದರೆ ಯಾವುದೇ ಸ್ಥಳಕ್ಕೆ ಹೋಗಲಿ ಅಲ್ಲಿ ನಡೆಯುವ ಖರ್ಚುವೆಚ್ಚಗಳನ್ನು ಅವನು ಬರೆದಿಟ್ಟು ಪ್ರವಾಸ ಮುಗಿದ ಮೇಲೆ ಆ ಖರ್ಚು ಎಷ್ಟಾಯಿತೆಂದು ತಿಳಿಸುವುದು. ಆಗ ಎಲ್ಲರೂ ಸಮಾನವಾಗಿ ಹಂಚಿಕೊಂಡು ಆ ಹಣವನ್ನು ಸಂದಾಯ ಮಾಡುವುದು ಇದು ಅವರ ಪ್ರವಾಸದ ವೈಖರಿ. ಆ ಜಾಣ ಹೇಗಿದ್ದನೆಂದರೆ ಪ್ರವಾಸ ಸಂದರ್ಭದಲ್ಲಿ ನಿರ್ಗತಿಕ ಬಿಕ್ಷುಕನೋರ್ವ ಬಂದು ಸಹಾಯ ಕೇಳಿದಾಗ ಅವರಿಗೆ ಐದು ರೂಪಾಯಿ ಕೊಟ್ಟು ಅದನ್ನು ಎಲ್ಲರೂ ಸೇರಿದ ಖರ್ಚು ವೆಚ್ಚಕ್ಕೆ ಸೇರಿಸಿ ಲೆಕ್ಕ ಬರೆದಿಟ್ಟ ಪುಣ್ಯಾತ್ಮ. ಇಂತವರು ಇರುತ್ತಾರೆ ಎಂದರೆ ಇವರು ಎಷ್ಟು ಉದಾರಿಗಳು ಇರಬಹುದು ಅಲ್ಲವೇ.?

ನಮ್ಮ ನೆರೆಹೊರೆಯವರೊಂದಿಗೆ ನಾವು ಹೇಗಿರಬೇಕು ಎಂಬುದಕ್ಕೆ ನಿಮಗೆ ಇಲ್ಲಿ ಕೆಲವು ಸಲಹೆ-ಸೂಚನೆಗಳಿವೆ….

ಪ್ರತಿನಿತ್ಯ ಮುಂಜಾನೆ ನಿಮಗೆ ದಿನ ಪತ್ರಿಕೆ ಓದುವ ಹವ್ಯಾಸ ಇದೆಯೆಂದರೆ ನೀವೇ ಒಂದು ಪತ್ರಿಕೆ ತರಿಸಿಕೊಳ್ಳಿ. ಹಾಗೊಂದು ವೇಳೆ ನಿಮಗೆ ಆ ಪತ್ರಿಕೆಯ ಹಣ ಭರಿಸಲು ಸಾಧ್ಯವಿಲ್ಲವೆಂದಾದರೆ ಮಧ್ಯಾಹ್ನದ ಸಮಯ ಇಲ್ಲವೆ ಸಂಜೆಯ ಹೊತ್ತು ನೆರೆಮನೆಯಾತ ಓದಿ ಮುಗಿಸಿದ ನಂತರ ಕೇಳಿ ಪಡೆದುಕೊಳ್ಳಿ. ಆತ ಸಂತಸದಿಂದ ಕೊಟ್ಟಲ್ಲಿ ನಿಮಗೂ ಓದಲು ಹಿತ. ಇಲ್ಲವೆಂದಾದಲ್ಲಿ ನಿಮ್ಮೂರಿನಲ್ಲಿ ವಾಚನಾಲಯ ಸೌಲಭ್ಯವಿದ್ದಲ್ಲಿ ಹೋಗಿ ಓದಿ ಬನ್ನಿ.

ನಿಮಗೆ ನೆರೆಮನೆಯಿಂದ ಏನೇ ಬೇಕೆಂದರೂ ಸಮಯ ಪಾಲಿಸಿ, ಬೆಳಗಿನ ಜಾವ, ಮಧ್ಯಾಹ್ನ ಮಲಗಿದ ಹೊತ್ತಿನಲ್ಲಿ, ಪಕ್ಕದ ಮನೆಯವರ ಬಾಗಿಲು ತಟ್ಟಬೇಡಿ. ಅವರ ಮನೆಯಲ್ಲಿ ನೆಂಟರಿಷ್ಟರು ಬಂದಿದ್ದಲ್ಲಿ ಅಂತಹ ಸಮಯದಲ್ಲೂ ನೀವು ಅವರ ಮನೆಗೆ ಹೋಗಬೇಡಿ. ಪಕ್ಕದವರ ಗೌಪ್ಯತೆಗೆ ಬೆಲೆ ಕೊಡಿ.

ಇನ್ನು ನಿಮ್ಮ ಮನೆಯಲ್ಲಿ ಫೋನ್ ಇರದಾಗ, ಪಕ್ಕದ ಮನೆಯ ನಂಬರನ್ನು ನಿಮಗೆ ಬೇಕಾದವರಿಗೆ, ಸಂಬಂಧಿಗಳಿಗೆ ಕೊಟ್ಟಿರುತ್ತೀರಿ. ಆದರೆ, ಅವರಿಗೆ ಫೋನ್ ಮಾಡಲು ನಿಗದಿತ ವೇಳೆ ನೀಡಿ. ರಾತ್ರಿ ಹೊತ್ತಿನಲ್ಲಿ ಅನವಶ್ಯಕವಾಗಿ ಫೋನ್ ಮಾಡಿ, ನಿಮ್ಮನ್ನು ಅವರ ಮನೆಗೆ ಕರೆಸುವಂತೆ ಮಾಡಬೇಡಿ. ಅಷ್ಟೇ ಅಲ್ಲ, ಅನವಶ್ಯಕ ಸಂಗತಿಗಳಿಗೂ ಫೋನ್ ಮಾಡಬೇಡಿ ಎಂದು ನೀವು ಪೋನ್ ನಂಬರ ಕೊಟ್ಟ ನಿಮ್ಮ ಸಂಬಂಧಿಕರಿಗೆ ಹೇಳಿ. ಅಂದಾಗ ಪಕ್ಕದವರ ಮನೆಗೆ ನಿಮ್ಮ ಫೋನ್ ಕರೆ ಬಂದರೂ ಅವರು ನಿಮ್ಮನ್ನು ಸೌಜನ್ಯಯುತವಾಗಿ ಕರೆಯುತ್ತಾರೆ.

ಏನನ್ನಾದರೂ ಬೇಡಿ ತರುವುದಷ್ಟೇ ಅಲ್ಲ, ಅದನ್ನು ಸಮಯಕ್ಕೆ ಸರಿಯಾಗಿ ತಲುಪಿಸುವುದನ್ನು ನಿಮ್ಮ ಹವ್ಯಾಸವಾಗಿಸಿಕೊಳ್ಳಿ.

ಒಂದು ಬಟ್ಟಲ ಟೀ, ಸಕ್ಕರೆ, ಎಣ್ಣೆ, ಹಾಲು, ಏನೇ ಆಗಲಿ ತಂದಿದ್ದರೆ ನಿಮ್ಮ ಮನೆಗೆ ನೀವು ಆ ವಸ್ತು ತಂದ ತಕ್ಷಣ ಅವರಿಗೆ ಮರಳಿಸಿ, ಜೊತೆಗೆ ಏನೇ ವಸ್ತು ನಿಮ್ಮ ಮನೆಯಲ್ಲಿ ಮುಗಿಯುವ ಮುಂಚೆಯೇ ಸಂಗ್ರಹಿಸುವ ಪ್ರವೃತ್ತಿ ನಿಮ್ಮಲ್ಲಿರಲಿ. ಅಂದರೆ ಇನ್ನೊಂದು ಸಲ ಬೇಡಲು ನಿಮಗೆ ಸಂಕೋಚವಾಗಬಹುದು.

ಬೇಡುವುದೇ ನಿಮ್ಮ ಹವ್ಯಾಸವಾಗಬಾರದು. ಯಾವಾಗಲಾದರೊಮ್ಮೆ ಬೇಡಿದರೆ ಅದು ಅನಿವಾರ್ಯ. ಅವರೂ ಬೇಡಿದಾಗ ಕೊಡಿ, ಹೀಗೆ ಕೊಡುವ – ಪಡೆದುಕೊಳ್ಳುವ ಉತ್ತಮ ಬಾಂಧವ್ಯ ನಿಮ್ಮದಾಗಿಸಿಕೊಳ್ಳಿ.

ನೀವು ಮೋಬೈಲ್ ಬಳಸುತ್ತಿದ್ದರೆ ಬೇರೆ ಊರಿಗೆ ಹೋಗುವಾಗ ಅದಕ್ಕೊಂಡು ಚಾರ್ಜರ್ ಜೊತೆಗಿರಿಸಿಕೊಳ್ಳಿ.ನೀವು ಹೋಗಿರುವ ಸ್ಥಳದಲ್ಲಿ ನಿಮ್ಮ ಮೋಬೈಲ್‍ಗೆ ಬೇಕಾದ ಚಾರ್ಜರ್ ಲಭ್ಯವಾಗಬಹುದು ಅಥವ ಲಭ್ಯವಾಗಲಿಕ್ಕಿಲ್ಲ.ಸಂಪರ್ಕ ಸಾಧನ ನಮಗೆ ಅವಶ್ಯಕವಿರುವಾಗ ಅದಕ್ಕೆ ಪೂರಕ ವಸ್ತುಗಳು ನಮ್ಮ ಬಳಿ ಇರುವಂತೆ ನೋಡಿಕೊಳ್ಳುವುದೂ ನಮ್ಮ ಕರ್ತವ್ಯವಾಗಲಿ.

ನೀವು ಯಾವುದೇ ದೊಡ್ಡ ಹುದ್ದೆಯಲ್ಲಿರಲಿ. ಅಥವ ಶ್ರೀಮಂತಿಕೆಯ ವ್ಯಕ್ತಿಯಾಗಿರಲಿ ಸಣ್ಣ ಪುಟ್ಟ ಸಂಗತಿಗಳಿಗೆ ನಿಮಗಿಂತ ಕೆಳಗಿನವರಿಂದ ಪುಕ್ಕಟೆ ಕೆಲಸವಾಗುವ ರೀತಿಯಲ್ಲಿ ವರ್ತಿಸಬೇಡಿ.ಅದು ವಸ್ತು ರೂಪದಲ್ಲಿರಲಿ,ಕೆಲಸದ ರೂಪದಲ್ಲಿರಲಿ.ಅಥವ ಇನ್ನಾವುದೇ ರೂಪದಲ್ಲಿರಲಿ.

ಕೆಲವರು ಸಭೆ ಸಮಾರಂಭ ಬಂದರೆ ಸಾಕು ತಮ್ಮ ವೇತನ ಎಷ್ಟೇ ಹೆಚ್ಚಿದ್ದರೂ ಕೂಡ ತಮ್ಮ ಕೆಳಗಿನ ಹಂತದವರಿಂದ ಹಣ ಕೂಡಿಸುವ ರೀತಿಯಲ್ಲಿ ಹಣ ವಸೂಲು ಮಾಡಿ ಕಾರ್ಯಕ್ರಮ ಆಯೋಜಿಸುವುದು ಕೂಡ ಮಾಡುವುದು ಸಭ್ಯತೆಯಲ್ಲ. ಹಾಗೆ ಮಾಡದೇ ನಿಮ್ಮ ವೇತನದಲ್ಲಿ ಹೆಚ್ಚಿನ ಹಣ ನೀವೇ ಮುಂದೆ ಬಂದು ನಾನು ಇಷ್ಟು ಕೊಡುವೆನು. ಕಾರ್ಯಕ್ರಮ ಮಾಡಿ ಉದಾರಭಾವ ತೋರಿಸಿದರೆ ನಿಮ್ಮಷ್ಟು ದೊಡ್ಡವರು ಯಾರೂ ಇರಲಾರರು. ಇತರರಿಗೂ ಅದು ಮಾದರಿಯಾಗಬಹುದು.

ನಾಲ್ಕು ಜನರ ಜೊತೆಗೆ ಪ್ರವಾಸ ಹೋದಾಗ ನಿಮಗೆ ಹಣಕಾಸಿನ ಜವಾಬ್ದಾರಿ ಕೊಟ್ಟಿದ್ದಲ್ಲಿ. ನಿರ್ಗತಿಕರಿಗೆ ನಿಮ್ಮಿಂದ ಪುಟ್ಟ ಸಹಾಯ ಆಗುವುದಿದ್ದರೆ ಉದಾರ ಮನಸ್ಸಿನಿಂದ ಮಾಡಿ.ಅದು ನಮ್ಮೆಲ್ಲ ನಾಲ್ಕು ಜನರ ಸಹಾಯ ಎಂದು ಖರ್ಚಿನ ಬಾಬತ್ತಿನಲ್ಲಿ ದಾಖಲಿಸಬೇಡಿ. ನಿರ್ಗತಿಕರನ್ನು ಕಂಡಾಗ ಕೊಡುವುದೂ ಕೂಡ ನಿಮ್ಮ ಧ್ಯೇಯವಾಗಿರಲಿ.

ಯಾವುದಾದರೂ ಸಂಬಂಧಿಕರ ವಿವಾಹ ಹುಟ್ಟುಹಬ್ಬ ಇತ್ಯಾದಿ ಕಾರ್ಯಕ್ರಮಗಳಿಗೆ ಹೋದಾಗ ನಿಮ್ಮ ಸಮಯದ ಇತಿಮಿತಿಯಲ್ಲಿ ಅಲ್ಲಿ ಇದ್ದು ಮರಳುವ ಪ್ರಯತ್ನ ಮಾಡಿರಿ. ಇವರು ಯಾವಾಗ ಮರಳುವರೋ ಎಂಬಂತೆ ಇರುವ ಪ್ರಯತ್ನ ಮಾಡಬೇಡಿ.

ಜೀವನದಲ್ಲಿ ನಾವು ಯಾವುದನ್ನೂ ಜೊತೆಗೆ ಒಯ್ಯುವುದಿಲ್ಲ. ಒಳ್ಳೆಯತನ ಮತ್ತು ಕೆಟ್ಟ ವರ್ತನೆ ಇವು ಮಾತ್ರ ವ್ಯಕ್ತಿಯ ಮರಣದ ನಂತರ ಅವರ ವ್ಯಕ್ತಿತ್ವದೊಂದಿಗೆ ಉಳಿಯಬಲ್ಲವು. ಇದು ಮೊದಲು ನಾವು ಅರಿತರೆ ನಮ್ಮ ಜೀವನದಲ್ಲಿ ನಕಾರಾತ್ಮಕ ಆಲೋಚನೆಗಳು ಬರಲು ಸಾಧ್ಯವಿಲ್ಲ.ಮನಸ್ಸು ಸದಾ ಸಕಾರಾತ್ಮಕವಾಗಿ ಆಲೋಚನೆ ಮಾಡಲು ಸಾಧ್ಯ.

ಬೇರೆಯವರಿಗೆ ನೆರವು ಪಡೆಯುವುದಷ್ಟೇ ಜೀವನವಲ್ಲ. ಸಮಯ ಬಂದಾಗ ನೆರೆಹೊರೆಯವರಿಗೆ ನೆರವಾಗುವುದು ಸಹ ನಿಮ್ಮ ಕರ್ತವ್ಯವೆಂದು ಭಾವಿಸಿ. ಅದನ್ನು ಸಾಮಾಜಿಕ ಋಣವೆಂದು ಭಾವಿಸಿಕೊಳ್ಳಿ. ಸಹಕಾರವಿರಲಿ, ಅದು ಅಸಹಕಾರವಾಗದಿರಲಿ.


ವೈ.ಬಿ.ಕಡಕೋಳ(ಶಿಕ್ಷಕರು)
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group