ಮೂಡಲಗಿ- ಇದೇ ತಿಂಗಳ ದಿ. ೨೩ ಹಾಗೂ ೨೪ ರಂದು ಮೂಡಲಗಿ ನಗರದಲ್ಲಿ ನಡೆಯಲಿರುವ ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಕ್ಕೆ ಹಲವು ಸಾಹಿತಿ ಮಹನೀಯರು ಶುಭ ಕೋರಿ ಯಶಸ್ಸು ಹಾರೈಸಿದ್ದಾರೆ.
ವಾಣಿಜ್ಯ ಕೇಂದ್ರವಾಗಿ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿರುವ ನಮ್ಮ ಹೆಮ್ಮೆಯ ಮೂಡಲಗಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿಯೂ ದಾಪುಗಾಲು ಹಾಕುತ್ತಿರುವುದಕ್ಕೆ ಸಾಕ್ಷಿ ನಮ್ಮಲ್ಲಿ ನಡೆಯುತ್ತಿರುವ 16ನೆಯ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನ. ಈ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷರಾದ ಸ್ನೇಹಿತ ಚಂದ್ರಶೇಖರ್ ಅಕ್ಕಿ ಅವರಿಗೆ ಹಾಗೂ ಕನ್ನಡದ ಎಲ್ಲಾ ಮನಸುಗಳಿಗೆ ಶುಭ ಕೋರುತ್ತ ಸಮ್ಮೇಳದ ಎಲ್ಲ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯಲಿ ಎಂದು ಆಶಿಸುತ್ತೇನೆ ಎಂದು ಹಿರಿಯ ಸಾಹಿತಿ ಶಿವಾನಂದ ಬೆಳಕೂಡ ಹಾರೈಸಿದ್ದಾರೆ.
‘ಕರ್ನಾಟಕ’ ಎಂಬ ನಾಮಕರಣದ ಸುವರ್ಣ ಸಂಭ್ರಮದ ಸುಸಂದರ್ಭದಲ್ಲಿ ಮೂಡಲಗಿ ತಾಲೂಕಿಗೆ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆತಿಥ್ಯ ಭಾಗ್ಯ ಲಭಿಸಿರುವುದು ಸಂತೋಷವನ್ನು ಇಮ್ಮಡಿಗೊಳಿಸಿದೆ. ಕನ್ನಡ ನಾಡು ನುಡಿಯ ಕುರಿತು ಎರಡು ದಿನಗಳ ಕಾಲ ನಡೆಯುವ ಈ ಕನ್ನಡ ಜಾತ್ರೆ ಯಶಸ್ವಿಯಾಗಲಿ, ಕನ್ನಡ ಸಂಸ್ಕೃತಿಯು ವಿಶ್ವ ಪ್ರಜ್ಞೆಯಾಗಲಿ ಎಂದು ಶುಭ ಹಾರೈಸುವೆ ಎಂದು ಕಸಾಪ ಮೂಡಲಗಿ ನಿಕಟಪೂರ್ವ ಅಧ್ಯಕ್ಷ, ಸಾಹಿತಿ ಸಿದ್ರಾಮ ದ್ಯಾಗಾನಟ್ಟಿ ತಿಳಿಸಿದ್ದಾರೆ.
ಇತ್ತೀಚೆಗೆ ತಾಲೂಕಿನಲ್ಲಿ ಆಧುನಿಕ ಸಾಹಿತ್ಯದ ವಿವಿಧ ಪ್ರಕಾರಗಳ ಬೆಳೆ ಹುಲುಸಾಗಿ ಬೆಳೆಯುತ್ತಿದೆ. ತಾಲೂಕು ರಚನೆ ಆಗಿ ಕೆಲವೇ ವರ್ಷಗಳಲ್ಲಿ ಜಿಲ್ಲಾ ಸಮ್ಮೇಳನ ಆಯೋಜನೆಗೊಂಡಿರುವುದು, ಹಲವು ನಿಟ್ಟಿನಲ್ಲಿ ಮಹತ್ವ ಪಡೆದಿದೆ. ತಾಲೂಕಿನ ವಿವಿಧ ಕ್ಷೇತ್ರಗಳ ಅಧ್ಯಯನಕ್ಕೆ ಪ್ರೇರಣೆ ಇದರಿಂದ ದಕ್ಕಲಿದೆ. ಉದಯೋನ್ಮುಖ ಸಾಹಿತ್ಯ, ಕಲಾ ಪ್ರತಿಭೆಗಳಿಗೆ ವಿಶೇಷ ಸ್ಫೂರ್ತಿಯನ್ನು ಸಮ್ಮೇಳನ ನೀಡಲಿದೆ.ನಮ್ಮ ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಸಮ್ಮೇಳನಕ್ಕೆ ಬೆನ್ನೆಲುಬಾಗಿ ನಿಂತಿರುವುದು ಸಮ್ಮೇಳನದ ಯಶಸ್ಸಿಗೆ ಮುನ್ನುಡಿ ಬರೆದಿದೆ ಎಂದು ಮಕ್ಕಳ ಸಾಹಿತಿ ಪ್ರೊ.ಸಂಗಮೇಶ ಗುಜಗೊಂಡ ಶುಭ ಹಾರೈಸಿದ್ದಾರೆ.
ಪುರಸಭಾ ಸದಸ್ಯ ಈರಣ್ಣ ಕೊಣ್ಣೂರ ಅವರು, ಮೂಡಲಗಿಯು ಹೊಸ ತಾಲೂಕಾ ಸ್ಥಳ ಆದ ಮೇಲೆ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ತುಂಬಾ ಖುಷಿ ತಂದಿದೆ ಎಂದಿದ್ದಾರೆ.
ಪತ್ರಕರ್ತ ಉಮೇಶ ಬೆಳಕೂಡ ಅವರು, ತಾಲೂಕಾದ ಅತಿ ಕಡಿಮೆ ಸಮಯದಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನ ನಡೆಸುತ್ತಿರುವುದು ಮೂಡಲಗಿಯ ಕನ್ನಡಿಗರ ಭಾಗ್ಯ. ನಮ್ಮ ಗುರುಗಳಾದ ಚಂದ್ರಶೇಖರ ಅಕ್ಕಿಯವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ಅತ್ಯಂತ ಖುಷಿ. ಸಮ್ಮೇಳನ ಯಶಸ್ವಿಗೊಳಿಸಲು ಶಾಸಕರ ಜೊತೆಗೇ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳು, ಮಾಧ್ಯಮ ವರ್ಗದವರು ಟೊಂಕ ಕಟ್ಟಿ ನಿಂತಿರುವುದು ನಿಜಕ್ಕೂ ಆನಂದ ತರುವ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.