ಬೀದರ: ಮೂರನೆ ಆಯೋಗ ರಾಷ್ಟ್ರೀಯ ಶಿಕ್ಷಣ ನೀತಿ ಗುಣಮಟ್ಟದ ಜ್ಞಾನ ಮತ್ತು ತಿಳಿವಳಿಕೆ ಹೆಚ್ಚು ಪಡೆಯುವ ಪ್ರಯತ್ನವಾಗಿದೆ ಎಂದು ಡಾ.ಸಿ.ಎಸ್.ಆಶ್ವಥ್ ನಾರಾಯಣ ಹೇಳಿದರು.
ಶಿಕ್ಷಣವನ್ನು ಉತ್ತಮಗೊಳಿಸುವ, ಸಮಾಜದಲ್ಲಿ ಸುಧಾರಣೆ ತರುವ ಮತ್ತು ಯುವಕರಿಗೆ ಉತ್ತಮ ಭವಿಷ್ಯ ಕೊಡಲು ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿ ಮಾಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ.ಆಶ್ವಥ್ ನಾರಾಯಣ ಸಿ.ಎಸ್. ಅವರು ಹೇಳಿದರು.
ಗುರುನಾನಕ್ ಇಂಜಿನಿಯರಿಂಗ್ ಕಾಲೇಜ್, ಬೀದರನಲ್ಲಿ ಅ. 10ರಂದು ನಡೆದ ರಾಷ್ಟೀಯ ಶಿಕ್ಷಣ ನೀತಿ-2020ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
34 ವರ್ಷದ ನಂತರ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿ ಈ ಮೂಲಕ ಜಾರಿಯಾಗುತ್ತಿದೆ.ಎಲ್ಲರೊಂದಿಗೆ ಸಮಾಲೋಚಿಸಿ ಜಾರಿ ಮಾಡಿದ ಶಿಕ್ಷಣ ನೀತಿ ಇದಾಗಿದೆ. 15 ವರ್ಷದೊಳಗೆ ಸಾಧಿಸುವ ಗುರಿ ಇದಾಗಿದೆ. ಇದು ಹಂತಹಂತವಾಗಿ ಜಾರಿಯಾಗುವ ಪ್ರಕ್ರಿಯೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯು ಎಲ್ಲರೂ ಸೇರಿ, ಇಡೀ ಸಮುದಾಯ ಬಲವಾಗಿ ನಂಬುವಂತಹ ಪ್ರಯತ್ನವಾಗಿದೆ. ಅಡೆತಡೆ ಇಲ್ಲದೇ ಶಿಕ್ಷಣ ಸಂಸ್ಥೆಗಳು ನಡೆದುಕೊಂಡು ಹೋಗಲು ಸಹಕಾರ ಕೊಡುವ ಪ್ರಯತ್ನವಾಗಿದೆ ಎಂದರು. ಒಬ್ಬ ವಿದ್ಯಾರ್ಥಿಯು ತನ್ನ ಆಸಕ್ತಿ ಮತ್ತು ಸಾಮರ್ಥ್ಯದ ಕ್ಷೇತ್ರದಲ್ಲಿ ಹೇಗೆ ಮುಂದುವರೆಯಬೇಕು ಎಂದು ಸಹಕಾರ ನೀಡುವ ಪ್ರಯತ್ನ, ಗುಣಮಟ್ಟ ಹೆಚ್ಚಿಸಲು ಬೇಕಾಗುವ ಎಲ್ಲ ಸ್ವಾತಂತ್ರ್ಯ ನೀಡುವ ಪ್ರಯತ್ನ ಇದಾಗಿದೆ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
ನಮ್ಮದೇಶಕ್ಕೆ ನಮ್ಮ ಜನಸಂಖ್ಯೆಯೇ ಆಸ್ತಿಯಾಗಿದೆ. ಇಲ್ಲಿನ ನೂರಾರು ಕೋಟಿ ಜನರು ಎಲ್ಲರೂ ಗುಣಮಟ್ಟದ ಜೀವನ ನಡೆಸಲು, ಬದುಕು ಸಾರ್ಥಕತೆಯನ್ನು ಪಡೆಯಲು ಜ್ಞಾನವೇ ಮುಖ್ಯವಾಗಿದೆ. ಹೀಗಾಗಿ ವ್ಯಕ್ತಿಗಳಲ್ಲಿ ಹೊಸ ಜ್ಞಾನ ಮತ್ತು ತಿಳಿವಳಿಕೆಯನ್ನು ಮೂಡಿಸುವ ಪ್ರಯತ್ಮದ ಭಾಗವಾಗಿ, ಸಮಾಜದಲ್ಲಿ ಸದೃಢತೆಯನ್ನು ತರುವ ದಾರಿಯಲ್ಲಿ ಯೋಚಿಸಿ ಹೊಸ ಶಿಕ್ಷಣ ನೀತಿ ಜಾರಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.
ಇಡೀ ವಿಶ್ವದ ಜೊತೆಗೆ ನಾವೀಗ ಸ್ಪರ್ದೇ ಮಾಡಬೇಕಿದೆ. ಎಲ್ಲರಿಗೂ ಮೀರಿದ ಶಿಕ್ಷಣದ ಕಲಿಕೆಯ ಗುಣಮಟ್ಟದ ತಿಳಿವಳಿಕೆಯನ್ನು ಪಡೆದುಕೊಳ್ಳಲು, ಶಿಕ್ಷಣ ಸಂಸ್ಥೆಗಳು ನಿಯಂತ್ರಣದಿಂದ ಹೊರಬರಲು, ಪ್ರತಿಭೆಯನ್ನು ಅನಾವರಣಗೊಳಿಸಲು ಈ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಅಪಾದನೆಗಳನ್ನು ನಂಬಬೇಡಿ:
ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಬರೀ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗಿದೆ, ಅಲ್ಪಸಂಖ್ಯಾತರಿಗೆ ವಿರೋಧವಾಗಿದೆ ಎನ್ನುವ ಅಪಾದನೆಯನ್ನು ಯಾರು ಕೂಡ ನಂಬಬಾರದು ಎಂದು ಇದೆ ವೇಳೆ ಸಚಿವರು ಸ್ಪಷ್ಟಪಡಿಸಿದರು.
ಅಪಪ್ರಚಾರಕ್ಕೆ ಕಿವಿಗೊಡಬೇಡಿ:
ಹೊಸ ಶಿಕ್ಷಣ ನೀತಿ ಜಾರಿಯು ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಭಾರತೀಯತೆಯನ್ನು ಮುಖ್ಯವಾಗಿಟ್ಟುಕೊಂಡು
ಭಾರತವೇ ಜ್ಞಾನದ ಕೇಂದ್ರವನ್ನಾಗಿಸಲು, ಭಾರತ ಇಡೀ ವಿಶ್ವಕ್ಕೆ ಗುರುವಾಗಬೇಕು ಎಂದು ಆಲೋಚಿಸಿ ಮಾಡುತ್ತಿರುವ ಪ್ರಯತ್ನವಾಗಿದೆ. ಹೀಗಾಗಿ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ