ರಾಷ್ಟ್ರ ಕವಿ ಕುವೆಂಪುರವರ ಒಂದು ಮಾತು “ಮಾನವ ಹುಟ್ಟುತ್ತ ವಿಶ್ವ ಮಾನವ ಬೆಳೆಯುತ್ತ ಅಲ್ಪ ಮಾನವ”.ಈ ಮಾತು ಅಕ್ಷರಶಃ ನಿಜ.ಮಗುವಿದ್ದಾಗ ಮಾನವನಿಗೆ ಯಾವುದೇ ಬಂಧನಗಳಿರುವುದಿಲ್ಲ. ಆದರೆ ಬೆಳೆಯುತ್ತ ಹೋದಂತೆ ಬಂಧನದಲ್ಲಿ ಸಿಲುಕುತ್ತಾನೆ. ಕಾರಣ ಅವನ ಅನಿಯಮಿತ ಆಸೆಗಳು.ಮಾನವ ತನ್ನ ಆಸೆಗಳನ್ನು ಪೂರೈಸುವ ಸಲುವಾಗಿ ಏನನ್ನಾದರೂ ಮಾಡಲು ಅವಕಾಶ ಹುಡುಕಿಕೊಳ್ಳುತ್ತಿದ್ದಾನೆ.
ಮಾನವ ತನ್ನ ಸ್ವಾರ್ಥ ಸಾಧನೆಗೆ ಯಾರನ್ನಾದರೂ ಬಲಿಕೊಟ್ಟು ಬೆಳೆಯಲು ತಯಾರಾಗಿದ್ದಾನೆ.ಅಧಿಕಾರದ ಲಾಲಸೆ, ಭೋಗ ಜೀವನ ಅವನನ್ನು ಈ ಮಟ್ಟಿಗೆ ಕೆಳಕ್ಕಿಳಿಸುತ್ತದೆ.ತಾನು ಉಂಡು, ಉಟ್ಟು,ಬೆಳೆದ,ಬೆಳೆಸಿದ ಮನುಷ್ಯರನ್ನು ಮರೆತು ಮೃಗತ್ವವನ್ನು ಮೆರೆಯುತ್ತಿದ್ದಾನೆ. ತಾನು ತನ್ನವರು ಎನ್ನುವ ಮನೋಭಾವನೆ ಕಡಿಮೆಯಾಗುತ್ತದೆ. ಸ್ವಾರ್ಥ ಪರ ಚಿಂತನೆಗಳು ಹೆಚ್ಚಾಗುತ್ತಿವೆ. ಸಂಬಂಧಗಳಿಗೆ ಬೆಲೆ ಇಲ್ಲದಂತಾಗುತ್ತಿದೆ.ಪ್ರತಿದಿನ ವೃತ್ತ ಪತ್ರಿಕೆಗಳು, ದೃಶ್ಯ ಮಾಧ್ಯಮಗಳಲ್ಲಿ ಬರುವ ಹಸಿ ಬಿಸಿ ಚಿತ್ರಗಳನ್ನು ನೋಡಿ ಯುವ ಜನತೆ ದಾರಿ ತಪ್ಪುತ್ತಿದೆ. ಕಾರಣ ನಮ್ಮ ಮಕ್ಕಳಿಗೆ ನಾವು ಕಲಿಸುತ್ತಿರುವ ಪಾಠ ಬದಲಾಗಬೇಕಿದೆ. ಮಕ್ಕಳಿಗೆ ಮನುಷ್ಯತ್ವದ ,ನೀತಿ ಬೋಧನೆ ಮಾಡಬೇಕಿದೆ.
ಮೇಲೆ ಹೇಳಿದಂತೆ ಮಾಧ್ಯಮಗಳಲ್ಲಿ ಬರುವ ಪಾತ್ರಗಳು ಕೇವಲ ಕಾಲ್ಪನಿಕ ಕಥೆಗಳು. ಅವು ಯಾವತ್ತಿಗೂ ಕೂಡ ನಮ್ಮನ್ನು ಮಾನವರನ್ನಾಗಿ ಮಾಡುವುದಿಲ್ಲ ಎಂಬುದನ್ನು ಸಾರಿ ಹೇಳಬೇಕಿದೆ. ಪ್ರತಿ ಹತ್ತು ನಿಮಿಷಗಳಲ್ಲಿ ಒಂದು ಅತ್ಯಾಚಾರ ವರದಿಯಾಗುತ್ತದೆ. ಏಕೆ? ಇವರಿಗೆ ಮಾನವತ್ವ ಅಥವಾ ಮನುಷ್ಯತ್ವ ಇಲ್ಲವೇ? ನಾವು ಅತ್ಯಾಚಾರ ಮಾಡುವ ಮೊದಲು ಅಲ್ಲಿ ಅವಳ ಸ್ಥಾನದಲ್ಲಿ ನಮ್ಮ ಸಹೋದರಿಯರು, ತಾಯಂದಿರು, ಬಂಧುಗಳನ್ನು ಕಲ್ಪಿಸಿಕೊಂಡು ನಂತರ ಅತ್ಯಾಚಾರ ಮಾಡಲು ಹೋಗೋಣ. ಆಗ ಈ ತರಹದ ಸಾಧ್ಯತೆಗಳು ಅಸಾಧ್ಯ. ನಾವು ಮಾನವೀಯತೆಯನ್ನು ಸಾರುವ ಚಿತ್ರಗಳನ್ನು ನಿರ್ಮಿಸಬೇಕಿದೆ.
ಇಲ್ಲಿ ನಮ್ಮೊಳಗಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಪಾಲಕರು ಶ್ರಮಿಸಬೇಕು.ಮಾನವೀಯತೆಯ ಆಧಾರದ ಮೇಲೆ ಮಕ್ಕಳನ್ನು ಬೆಳೆಸಬೇಕು. ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿ ಆಚರಣೆ ಮಾಡಿ ಮತ್ತೆ ಎಂದಿನಂತೆ ನಮ್ಮ ಕೆಲಸ ಮಾಡುತ್ತಾ ಹೋದರೆ, ನಮ್ಮ ಆಚರಣೆಗೆ ಅರ್ಥ ಇರುವುದಿಲ್ಲ. ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ಬೀರಿದ ದೇಶ ನಮ್ಮದು. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ ಎನ್ನುವ ಸಂಸ್ಕ್ರತ ಉಕ್ತಿಯನ್ನು ಜಗತ್ತಿಗೆ ಪರಿಚಯಿಸಿದ ದೇಶ ನಮ್ಮದು.ಹಾಗಾದರೆ ಇಂದು ನಮ್ಮ ದೇಶ ಎತ್ತ ಸಾಗುತ್ತಿದೆ ಎಂಬುದನ್ನು ತಿಳಿದರೆ ನಿಜಕ್ಕೂ ಭಯವಾಗುತ್ತಿದೆ. ಮಾನವೀಯತೆಯನ್ನು ಮೀರಿ ಮೃಗತ್ವದೆಡೆಗೆ ಸಾಗುತಿದೆ. ಕಾರಣ ನಾವು ಮೊದಲು ನಮ್ಮನ್ನು ಮನುಷ್ಯರನ್ನಾಗಿ ಮಾಡಿಕೊಳ್ಳಬೇಕಿದೆ. ಅಂದಾಗ ಮಾತ್ರ ನಾವು ಮೃಗತ್ವದಿಂದ ಮಾನವೀಯತೆಯ ಮೌಲ್ಯವನ್ನು ಸಾರಲು ಸಾಧ್ಯವಾಗುತ್ತದೆ.
ನಾವು ಮಾನವರೇ? ಅಥವಾ ಮಾನವರೇ ನಾವು? ಎಂಬುದನ್ನು ಅರಿತುಕೊಳ್ಳಬೇಕು. ನಾವು ಮಾನವರೇ ಆದರೆ ನಾವು ಮಾಡುತ್ತಿರುವ ಎಲ್ಲ ಕೆಲಸಗಳು ಮನುಷ್ಯತ್ವವನ್ನು ಹೊಂದಿರಬೇಕು. ಅಥವಾ ನಾವೇ ಮಾನವರು ಎಂದಾದರೆ ಮಾನವೀಯತೆಯ ಮೌಲ್ಯವನ್ನು ಸಾರಬೇಕು.ಇದೆಲ್ಲವೂ ಅಲ್ಲವೆಂದು ಮೇಲೆ ನಾವು ಮನುಷ್ಯರಾಗಿ ಇರಲು ಸಾಧ್ಯವಿಲ್ಲ. ಮನುಷ್ಯರಾದ ಮೇಲೆ ಈ ಜನ್ಮಕ್ಕೆ ಸಾರ್ಥಕವಾಗುವ ರೀತಿಯಲ್ಲಿ ಬದುಕಿ ಬಾಳಬೇಕು. ಅಂದಾಗ ಮಾತ್ರ ಮಾನವರಾಗಿ ಬದುಕಿದ್ದಕ್ಕೂ ಸಾರ್ಥಕವಾಗುತ್ತದೆ.
ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು