ಕನ್ನಡದಲ್ಲಿ ಲೇಖಕರು ನಿಜವಾದ ಹೀರೋಗಳು ; ಪ್ರಕಾಶಕ ವೀರಕಪುತ್ರ ಶ್ರೀನಿವಾಸ್ ಅಭಿಮತ 

0
99
ವೀರಲೋಕ ಸಾಹಿತ್ಯ ಯುಗಾದಿಯಲ್ಲಿ 10 ಕೃತಿಗಳ ಬಿಡುಗಡೆ………
ಬೆಂಗಳೂರು :- ಕನ್ನಡ ಸಾಹಿತ್ಯ ಲೋಕದಲ್ಲಿ ನಡೆಯುತ್ತಿರುವ ಚಟುವಟಿಕೆಗಳು , ಪ್ರಯೋಗಗಳು, ಸಂತೆ ಸಮಾವೇಶಗಳನ್ನು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ, ಜಸ್ಟ್ ಮೂರು ವರ್ಷಗಳ ಹಿಂದೆ ಕನ್ನಡ ಪುಸ್ತಕಗಳಿಗೆ  ಓದುಗರಿಲ್ಲ ಎಂಬ ಮಾತನ್ನು ಎಲ್ಲರೂ ಒಪ್ಪಿ ಕೂತಿದ್ದೆವು, ಪುಸ್ತಕ ಬಿಡುಗಡೆಗೆ ಜನರು ಬರುವುದಿಲ್ಲವೆಂದು ನಿರ್ಧರಿಸಿ, ಆನ್ಲೈನ್ ಕಾರ್ಯಕ್ರಮಗಳಿಗೆ ಮೊರೆ ಹೋಗಿದ್ದೆವು, ಆದರೆ ಇವತ್ತು ಸ್ಪರ್ಧೆಗೆ ಬಿದ್ದಂತೆ ಸಾಹಿತ್ಯ ಚಟುವಟಿಕೆಗಳನ್ನು ರೂಪಿಸಿದ್ದೇವೆ, ವಿರಲೋಕ ಪುಸ್ತಕ ಸಂತೆಗೆ ಎರಡು ಲಕ್ಷ ಜನ ಸೇರಿದ್ದು, 3 ಕೋಟಿ ಯಷ್ಟು ಪುಸ್ತಕ ವ್ಯಾಪಾರವಾಗಿದ್ದು ಒಂದು ಹೊಸ ದಾಖಲೆಯಾಗಿ ಉಳಿಯಿತು, ಕನ್ನಡದ ಲೇಖಕರು ಬರೆದ ಕನ್ನಡದ ಕೋಟಿ- ಕೋಟಿ ಪುಸ್ತಕಗಳು ಓದುಗರು ಖರೀದಿ ಮಾಡಿ ಓದಿ ಕನ್ನಡದ ಲೇಖಕರು ನಿಜವಾದ ಹೀರೋಗಳು ಎಂದು ಸಾಬೀತು ಪಡಿಸಿದ್ದಾರೆ ಎಂದು ವೀರಲೋಕ ಪ್ರಕಾಶನದ ಪ್ರಕಾಶಕ ವೀರಕಪುತ್ರ ಶ್ರೀನಿವಾಸ ಅಭಿಪ್ರಾಯಪಟ್ಟರು.ವೀರಲೋಕ ಪ್ರಕಾಶನವು ಸಾಹಿತ್ಯ ಯುಗಾದಿ 2025 ರ ಅಂಗವಾಗಿ ಮಾರ್ಚ್ 23ರ ಭಾನುವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ 10 ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಗಿರೀಶ್ ಕಾಸರವಳ್ಳಿ ಅವರಿಂದ 10 ಕೃತಿಗಳು ಲೋಕಾರ್ಪಣೆ –

ವೀರಲೋಕ ಪ್ರಕಾಶನವು ಹೊರ ತಂದ ಹತ್ತು ಕೃತಿಗಳನ್ನು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡುತ್ತಾ, ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನದ ವಿಸ್ತರಣೆಯು ಸಾಹಿತ್ಯ ಮತ್ತು ಓದುವಿಕೆಯಿಂದ ಸಾಧ್ಯವಾಗುತ್ತದೆ ಹೊರತು ಸಾಮಾಜಿಕ ಮಾಧ್ಯಮ ಅಥವಾ ಗೂಗಲ್ ನಿಂದಲ್ಲ, ಓದು ಎಲ್ಲರ ಜೀವನದ ಜ್ಞಾನ ವೃದ್ಧಿಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು ಎಂದು ಕರೆ ನೀಡಿದರು.

ಮಾರ್ಚ್ 23ರ ಭಾನುವಾರ ಮಾಯಾನಗರಿಯ ಪುಟ್ಟಣ್ಣ  ಚೆಟ್ಟಿ   ಪುರ ಭವನ (ಟೌನ್ ಹಾಲ್) ನಲ್ಲಿ ವೀರಲೋಕ 2025 ಸಾಹಿತ್ಯ ಯುಗಾದಿ ಕಾರ್ಯಕ್ರಮದಲ್ಲಿ ಬಿಡುಗಡೆಯಾದ 10 ಕೃತಿಗಳು (1) ಎಸ್ ದಿವಾಕರ್ ಅವರ ವಾಸ್ತವ ಪ್ರತಿ ವಾಸ್ತವ (2) ಡಾಕ್ಟರ್ ಎಂ ವೆಂಕಟಸ್ವಾಮಿ ಅವರ ಟೈಟಾನಿಕ್ (3) ಜಯಶ್ರೀ ಕಾಸರವಳ್ಳಿ ಅವರ ಈ ಒಂದು ಹೀಗೊಂದು  ಏರೋ ಸ್ಪೇಸ್ ಪುರಾಣ (4) ನಟರಾಜ್ ಅರಳ ಸುರಳಿ ಅವರ ಆಕಾಶಬುಟ್ಟಿ (5) ರಾಜಶೇಖರ ಎಂ ಅವರ ಶತಮಾನಂಭವತಿ (6) ಅರ್ಜುನ ದೇವಾಲದ ಕೆರೆ ಅವರ ಮಿಕ್ಸ್ ಅಂಡ್  ಮ್ಯಾಚ್ (ಸಣ್ಣ ಕಥೆಗಳು) (7) ಚೇತನ್  ನಾಡಿಗೇರ್ ಅವರ ಚಂದನ ವನದೋಳ್ (8) ನಡಹಳ್ಳಿ ವಸಂತ ಅವರ ಮಹಿಳೆಯರಿಗೆ ಮಾತ್ರವಲ್ಲ (9) ಪ್ರಸಾದ್ ನಾಯಕ ಅವರ ಮುಸ್ಸಂಜೆ ಮಾತು (10) ಪ್ರಸಾದ್ ಶೆಣೈ ಆರ್ ಕೆ ಅವರ ನೇರಳೆ ಐಸ್ ಕ್ರೀಮ್ , ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.

ತಾಳಮದ್ದಲೆ ಮೂಲಕ ಪುಸ್ತಕ ಪರಿಚಯ 

ಹತ್ತು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ವಿಶೇಷವಾಗಿ ಕೃತಿಗಳ ಕುರಿತು ಅಜಿತ್ ಕಾರಂತ ಮತ್ತು ರಾಧಾಕೃಷ್ಣ  ಕಲ್ಚಾರ  ಮತ್ತು ತಂಡದವರು ತಾಳಮದ್ದಲೆ ಮೂಲಕ ಪುಸ್ತಕ ಪರಿಚಯ ಮಾಡಿದರು

ವೀರಲೋಕ ಸಾಹಿತ್ಯದ ಪ್ರಕಾಶಕ ವೀರಕಪುತ್ರ ಶ್ರೀನಿವಾಸ ಅವರು ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದರೆ, ದಿವ್ಯ ಆಲೂರು ಅವರು ಕಾರ್ಯಕ್ರಮದ ನಿರೂಪಣೆಯನ್ನು ಬಹಳ ಸೊಗಸಾಗಿ ಮಾಡಿದರು.

ಬೇವು ಬೆಲ್ಲ !

ಕಾರ್ಯಕ್ರಮಕ್ಕೆ ಬಂದಿದ್ದ ಓದುಗರಿಗೆ ಯುಗಾದಿಯ ಸಂಕೇತವಾದ ಬೇವು ಬೆಲ್ಲ ಕೊಟ್ಟು ವಾರದ ಮುಂಚೆಯೇ ಯುಗಾದಿಯ ಶುಭಾಶಯ ಕೋರಿದ್ದು ವಿಶೇಷವಾಗಿತ್ತು .
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಮತ್ತು ಕಾದಂಬರಿಗಾರ್ತಿ ಸಹನಾ ವಿಜಯಕುಮಾರ್ ಹಾಗೂ ಹಿರಿಯ ಸಾಹಿತಿ ಡಾ. ಬಸವರಾಜ ಸಬರದ ಮತ್ತು ವೀರಲೋಕ ಸಾಹಿತ್ಯದ  ಅನಂತ ಕುಣಿಗಲ್ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ : ತೀರ್ಥಹಳ್ಳಿ ಅನಂತ ಕಲ್ಲಾಪುರ