ಕೋವಿಡ್ ಹೆಚ್ಚಾದರೆ ಸವಾಲು
ಸಿಂದಗಿ: ಪಿಡಿಓಗಳು ಕೇಂದ್ರ ಸ್ಥಾನಗಳಲ್ಲಿ ಇರುವುದಿಲ್ಲ ಅಲ್ಲದೆ ಪೋನ್ ಬಂದಾಗಿರುತ್ತವೆ ಎನ್ನುವದು ಕ್ಷೇತ್ರದಾದ್ಯಂತ ಕೇಳಿ ಬರುತ್ತಿದ್ದು ಎಲ್ಲರು ಕೇಂದ್ರ ಸ್ಥಾನದಲ್ಲಿ ಇದ್ದು ಓಮಿಕ್ರಾನ್ ಸೋಂಕು ಹರಡದಂತೆ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಮುಂಜಾಗೃತಾ ಕ್ರಮ ವಹಿಸಬೇಕು ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸಿ ಎಂದು ತಾಪಂ ಇಓಗೆ ಶಾಸಕ ರಮೇಶ ಭೂಸನೂರ ಖಡಕ್ಕಾಗಿ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯತ ಸಭಾ ಭವನದಲ್ಲಿ ಕೊವಿಡ್ 3ನೆ ಅಲೆ ನಿಯಂತ್ರಣದ ಕುರಿತು ನಡೆಸಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಂದಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ ಮಾಡುವುದಾಗಿ ವಿಜನ್ ಪೌಂಡೇಶನ್ ಒಪ್ಪಿಕೊಂಡಿತ್ತು ಆದರೆ ಪ್ರತಿಶತ 75 ರಷ್ಟು ಅನುದಾನ ನೀಡುವುದಾಗಿ ತಿಳಿಸಿದ್ದು ಇನ್ನುಳಿದ 25 ರಷ್ಟು ಹಣವನ್ನು ಶಾಸಕರ ಅನುದಾನದಲ್ಲಿ ಭರಿಸುವುದಾಗಿ ಹೇಳಿದ ಅವರು ವಿಧಾನ ಪರಿಷತ್ ಅನುದಾನದಲ್ಲಿ ಒಂದು ಅಂಬುಲೆನ್ಸ್ ನೀಡುವುದಾಗಿ ತಿಳಿಸಿದ್ದು ಕಾರಣ ಓಮಿಕ್ರಾನ್ ಬರದಂತೆ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಹೇಳಿದರು.
ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಎಕ್ಸರೆ ಮಸೀನ್ ದೂಳು ಹಿಡಿದಿದೆ, ಪ್ರಸ್ತೂತಿ ವೈದ್ಯರೆ ಇಲ್ಲ, ಒಬ್ಬ ವೈದ್ಯರನ್ನು 16-17 ಕಡೆ ನಿಯೋಜನೆ ಮಾಡುವುದನ್ನು ರದ್ದು ಪಡಿಸಿ, ಸಿಸಿ ಕ್ಯಾಮರಾ ಅಳವಡಿಸಿ ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ರಾಜಕುಮಾರ ಯರಗಲ್ ಮಾತನಾಡಿ, ತಾಲೂಕಾ ಆರೋಗ್ಯ ಆಸ್ಪತ್ರೆಯಲ್ಲಿ 6.5 ಕೆವ್ಹಿ ಜನರೇಟರ, 46 ಕೋವಿಡ್ ಕೇಂದ್ರಗಳನ್ನು ತೆರೆಯಲಾಗಿದೆ. ತುರ್ತು ಔಷಧಿಯಾಗಿ ಸಿಂದಗಿಗೆ ರೂ. 5 ಲಕ್ಷ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ರೂ.1 ಲಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೂ 30 ಸಾವಿರ ಅಲ್ಲದೆ ಕಲಕೇರಿ, ಆಲಮೆಲ, ಮೋರಟಗಿ ಆಕ್ಸಿಜನ್ ಪೂರೈಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸಿಬ್ಬಂದಿ ಕೊರತೆಯಿದ್ದರೆ ಸಿಬ್ಬಂದಿ ಕಲ್ಪಿಸುವದಾಗಿ ಹೇಳಿದರು.
ತಹಶೀಲ್ದಾರ ಸಂಜೀವಕುಮಾರ ದಾಸರ ಮಾತನಾಡಿ, ಮಲಗಾಣ ಹಾಗೂ ಬಳಗಾನೂರ ಗ್ರಾಮಗಳಲ್ಲಿ ಲಸಿಕೆ ಕೊಡುವಲ್ಲಿ ಮತ್ತು ಸೊಂಕು ಹರಡದಂತೆ ಕ್ರಮ ವಹಿಸಿಲ್ಲ ಎನ್ನುವುದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪವಾಗಿದ್ದು ಅಧಿಕಾರಿಗಳು ಯಾವುದೇ ನೆಪವೊಡ್ಡದೇ ಕಾರ್ಯಪ್ರವೃತ್ತರಾಗಿ ಅಲ್ಲದೆ 2 ನೇ ಡೋಜ್ ಹಾಕಿಸಿಕೊಂಡ 9 ತಿಂಗಳ ಒಳಗಾಗಿ ಬೂಸ್ಟರ ಲಸಿಕೆ ತೆಗೆದುಕೊಳ್ಳಬೇಕು. ಕಾಲೇಜು ವಿದ್ಯಾರ್ಥಿಗಳು ಹಾಗು 15 ರಿಂದ 17 ವಯಸ್ಸಿನ ಪ್ರೌಡಶಾಲಾ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ತೆಗೆದುಕೊಳ್ಳುವಂತೆ ಸೂಚಿಸಿ ಮತ್ತು ಜಾತ್ರೆಗಳು ಹಾಗೂ ಸಂತೆ ಕಟ್ಟೆಗಳಿಂದ ಓಮಿಕ್ರಾನ್ ಹರಡುವ ಸಾಧ್ಯತೆಗಳು ಹೆಚ್ಚಿವೆ ಇದು ತಾಲೂಕಾಡಳಿತಕ್ಕೆ ಸವಾಲಾಗಿ ಎದುರಿಸುವಂತಾಗಿದೆ ಎಂದರು.
ಆರೋಗ್ಯ ಇಲಾಖೆಯ ಡಾ. ಸರೋಜನಿ ದಾನಗೊಂಡ ಅವರು ಮಾತನಾಡಿ, ಜ.1 ರಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ 2525 ಜನರನ್ನು ಚಿಕಿತ್ಸೆ ಮಾಡಲಾಗಿದ್ದು ಅದರಲ್ಲಿ 39 ಜನರಲ್ಲಿ ಸೋಂಕು ದೃಢಪಟ್ಟಿದ್ದು 36 ಜನರು ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ 3 ಜನರು ಬಿ.ಎಲ್ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಮತ್ತು ಮೋರಟಗಿ ಸಂತೆ ನಡೆಯುತ್ತಿರುವುದರಿಂದ ತುರ್ತು ರೋಗಿಗಳನ್ನು ತರಲು ಹರಸಾಹಸ ಪಡುವಂತಾಗುತ್ತಿದ್ದು ಬೇರೆಡೆ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿಕೊಂಡರು.
ಬಿಇಓ ಎಚ್.ಎಂ.ಹರನಾಳ ಮಾತನಾಡಿ, 9 ಮತ್ತು 10ನೇ ತರಗತಿಯ 16023 ವಿದ್ಯಾರ್ಥಿಗಳಲ್ಲಿ 7437 ವಿದ್ಯಾರ್ಥಿಗಳು ಲಸಿಕೆ ಪಡೆದುಕೊಂಡಿದ್ದು ಇನ್ನುಳಿದ 8620 ಶಾಲೆಗೆ ಗೈರು ಉಳಿದ ವಿದ್ಯಾರ್ಥಿಗಳು ಲಸಿಕೆ ಹಾಕಿಕೊಂಡಿಲ್ಲ ಮುಂಬರುವ ದಿನಗಳಲ್ಲಿ ಎಲ್ಲ ಶಾಲಾ ಮುಖ್ಯಗುರುಗಳ ಸಭೆ ಕರೆದು ತಿಳಿಸಲಾಗುವುದು ಎಂದರು.
ತಾಪಂ ಅಧಿಕಾರಿ ಕೆ.ಹೊಂಗಯ್ಯ ಮಾತನಾಡಿ, ಪಿಡಿಓಗಳು ಗ್ರಾಪಂಗಳಲ್ಲಿ ಯಾವ ರೀತಿಯಾಗಿ ಮುಂಜಾಗೃತ ಕ್ರಮ ವಹಿಸಬೇಕು ಎಂದು ಮಂಗಳವಾರ, ಬುಧವಾರ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಡಾ ಮಹಾಂತೇಶ ಹಿರೇಮಠ ಮಾತನಾಡಿ, ಇಡೀ ತಾಲೂಕಿನಲ್ಲಿ ಒಂದು ಆಯುಷ್ ಕೇಂದ್ರವಿದ್ದು ಕೇಂದ್ರ ಸರಕಾರದಿಂದ ಕೆಲವೊಂದು ಜೌಷಧಿಗಳು ಬಂದಿದ್ದು ಕೋವಿಡ್ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ ಅದಕ್ಕಾಗಿ ಹೆಚ್ಚಿನ ಔಷಧಿಗಾಗಿ ಪ್ರಸ್ತಾಪಿಸಲಾಗಿದೆ ಎಂದು ವಿವರಿಸಿದರು.
ಪಿಡಿಓ ಸಂಘದ ಅಧ್ಯಕ್ಷ ಸಂಜೀವ ದೊಡಮನಿ, ಪುರಸಬೆ ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ ಸೇರಿದಂತೆ ತಾಲೂಕಿನ ಅಧಿಕಾರಿಗಳು ಕೋವಿಡ್ ನಿಯಂತ್ರಣದ ಕುರಿತು ವಿವರಣೆ ನೀಡಿದರು.
ಆಲಮೇಲ ತಹಶೀಲ್ದಾರ ಗೊವಿಂದರಾಜು ವೇದಿಕೆ ಮೇಲಿದ್ದರು.