ಮೂಡಲಗಿ: ಜನರು ಧೂಮಪಾನ, ಮದ್ಯಪಾನದ ದಾಸ್ಯಕ್ಕೆ ಒಳಗಾಗಿ ಕ್ಯಾನ್ಸರ್, ಹೃದಯಾಘಾತ, ಅಲ್ಸರ್ ಸೇರಿದಂತೆ ಇತರೆ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಬಳಲಿ ನಿತ್ಯ ಸಾಯುತ್ತಿರುವುದು ಸಾಮಾನ್ಯವಾಗಿದೆ. ವ್ಯಸನ ಮುಕ್ತ-ಸ್ವಚ್ಚ ಪರಿಸರಯುಕ್ತ ಸಮಾಜಕ್ಕಾಗಿ ಯುವ ಜನತೆಯನ್ನು ತೊಡಗಿಸುವ ಉದ್ದೇಶದಿಂದ ನಶಾಮುಕ್ತ ಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಿತ್ತೂರ ರಾಣಿ ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಡಾ. ಎಮ್. ಜಿ. ಕೆರುಟಗಿ ಹೇಳಿದರು.
ಅವರು ತಾಲೂಕಿನ ಅರಬಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಪೂಜ್ಯ ಡಾ. ಮಹಾಂತ ಶಿವಯೋಗಿ ಸ್ವಾಮೀಜಿಗಳ ಜನ್ಮ ದಿನದ ಅಂಗವಾಗಿ ಜರುಗಿದ ವ್ಯಸನ ಮುಕ್ತ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೆ ಮಾರಕವಾಗಿದೆ ಎಂದರು.
ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಮದ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳನ್ನು ತ್ಯಜಿಸುತ್ತೇನೆ ಹಾಗೂ ಇನ್ನೆಂದಿಗೂ ಮುಟ್ಟುವುದಿಲ್ಲ ಎಂದು ಪ್ರತಿಜ್ಞಾ ವಿಧಿ ಭೋಧಿಸಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದ ಅಧಿಕಾರಿ ಡಾ. ಎ.ಎಮ್. ನಧಾಫ, ಡಾ. ಪುಷ್ಪಾ ಟಿ.ಎನ್ ಮತ್ತು ಡಾ. ವಿಜಯಮಹಾಂತೇಶ ಮತ್ತಿತರರು ಇದ್ದರು.