ಮೂಡಲಗಿ – ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಅದರಲ್ಲಿ ಇರುವ ಮಾನವ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಪ್ರವಾಸಿ ತಾಣವನ್ನಾಗಿ ಪರಿವರ್ತನೆ ಮಾಡಿ ಹಳ್ಳಿಯನ್ನೇ ದೇಶಕ್ಕೆ ಪರಿಚಯಿಸುವ ಕಾರ್ಯ ಮಾಡುವ ಶಕ್ತಿ ನಿಮ್ಮಂತಹ ಯುವಕರಲ್ಲಿದೆ ಎಂದು ಪ್ರೊ. ಚಂದನ್ ವಿ. ಸಹಾಯಕ ಪ್ರಾಧ್ಯಾಪಕರು ಸರಕಾರಿ ಕಾಲೇಜು ಬೆಂಗಳೂರು ಇವರು ತಿಳಿಸಿದರು.
ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡ ‘ಅಗ್ರಿ ಟೂರಿಸಂ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಹಳ್ಳಿಗಳು ಅನೇಕ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದು ಅದಕ್ಕೆ ಮಾನವ ನಿರ್ಮಿತ ವಸ್ತುಗಳ ಬಳಕೆಯೊಂದಿಗೆ ಪ್ರವಾಸಿಗರನ್ನು ದೇಶಿ ಸಂಸ್ಕೃತಿಯ ಹಳ್ಳಿಯ ಸೊಗಡನ್ನು ವಿಶ್ವಕ್ಕೆ ಪರಿಚಯಿಸಿ ಆದಾಯ ಗಳಿಸುವ ಅವಕಾಶ ಎಲ್ಲಾ ಹಳ್ಳಿಗಳಿಗೆ ಇದ್ದು ವೃತ್ತಿ ನೈಪುಣ್ಯತೆಯನ್ನು ಬಳಕೆ ಮಾಡಿಕೊಂಡು ಸ್ವ ಉದ್ಯೋಗದ ಜೊತೆಗೆ ಆದಾಯ ಗಳಿಸಬೇಕೆಂದು ಕರೆ ನೀಡಿದರು.
ಪ್ರಾಂಶುಪಾಲರಾದ ಶಾನೂರಕುಮಾರ ಗಾಣಿಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕೃಷಿಯು ನಮ್ಮ ದೇಶದ ಬೆನ್ನೆಲುಬಾಗಿದ್ದು ಮರಳಿ ಕೃಷಿಯನ್ನು ಹೇಗೆ ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸುವ ಶಕ್ತಿ ಪ್ರತಿಯೊಬ್ಬ ಹಳ್ಳಿಗನ ಕೈಯಲ್ಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಹಿರಿಯ ಅಧ್ಯಾಪಕರಾದ ಶಿವಾನಂದ ಚಂಡಕೆ ಅವರು ಕಾರ್ಯಕ್ರಮ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಹನುಮಂತ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್. ಸಹಾಯಕ ಪ್ರಾಧ್ಯಾಪಕರುಗಳಾದ ಗಾಯತ್ರಿ ಸಾಳೋಖೆ, ರಂಗನಾಥ ಜೆ. ಡಾ.ರವಿ ಗಡದನ್ನವರ, ಮಲ್ಲಿಕಾರ್ಜುನ ಸಜ್ಜನವರ, ಚೇತನರಾಜ್ ಬಿ, ಸಂಜೀವ ಮದರಖಂಡಿ, ಸೈಯದಸಾಬ್ ನದಾಫ್,ನಿಂಗಪ್ಪ ಸಂಗ್ರೇಜಕೊಪ್ಪ ಮುಂತಾದವರು ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಸಂಯೋಜಿಸಿದ್ದರು. ವಿದ್ಯಾರ್ಥಿಗಳಾದ ಶ್ರೀದೇವಿ ಮಾಲೋಜಿ ಮತ್ತು ಆಶಾ ಉತ್ತೂರೆ ಸ್ವಾಗತಿಸಿದರು. ಸುಪ್ರೀತಾ ಪಾಲಭಾಂವಿ ಮತ್ತು ನಿರ್ಮಲಾ ಮಠಪತಿ ನಿರೂಪಿಸಿದರು. ಭಾಗ್ಯಶ್ರಿ ಸಂಕಣ್ಣವರ ಅತಿಥಿಗಳನ್ನು ಪರಿಚಯಿಸಿದರು. ಶೋಭಾ ಉಪ್ಪಾರ ವಂದಿಸಿದರು.