ಹುನಗುಂದ: ಸಮೀಪದ ವಡಗೇರಿ ಗ್ರಾಮದ ಐಶ್ವರ್ಯಾ ಮಾರೆನ್ನವರ ಅವರು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.
ಎಂಎಸ್ಸಿ ಪ್ರಾಣಿಶಾಸ್ತ್ರ ಅಧ್ಯಯನ (Zoology ) ಸ್ನಾತಕೋತ್ತರ ಪದವಿಯಲ್ಲಿ ಐಶ್ವರ್ಯ ಈ ಸಾಧನೆ ಮಾಡಿದ್ದಾರೆ.
ಸರಕಾರಿ ಕೋಟಾದಡಿ ವಿದ್ಯಾಸಂಗಮ, ಭೂತರಾಮನಹಟ್ಟಿ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಮೇನ್ ಕ್ಯಾಂಪಸ್ ಗೆ ಆಯ್ಕೆಯಾಗಿದ್ದ ಐಶ್ವರ್ಯ 2023-24 ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಶೇ 80.42 ಅಂಕ ಪಡೆದು ವಿಶ್ವವಿದ್ಯಾಲಯದ ರ್ಯಾಂಕ್ ವಿಜೇತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಾಣಿಗಳ ದೇಹರಚನೆ, ವರ್ತನೆ, ಬೆಳವಣಿಗೆ, ವರ್ಗೀಕರಣ ಮತ್ತು ಅವುಗಳ ಮನೋವಿಜ್ಞಾನ ಕುರಿತು ಸಾಕಷ್ಟು ಆಸಕ್ತಿ ಹೊಂದಿದ್ದ ಐಶ್ವರ್ಯ ತನ್ನ ಇಷ್ಟದ ಕೋರ್ಸ್ ಆಯ್ಕೆ ಮಾಡಿಕೊಂಡು ಗಮನಾರ್ಹ ಸಾಧನೆ ಮಾಡಿದ್ದಾಳೆ. ಪ್ರಾಥಮಿಕ ಶಾಲಾ ಶಿಕ್ಷಕ ದಂಪತಿಗಳಾದ ಎನ್ ಎಚ್ ಮಾರೆನ್ನವರ ಮತ್ತು ಶಾಂತಾಬಾಯಿ ಯವರ ಸುಪುತ್ರಿ ಐಶ್ವರ್ಯಳ ಈ ಸಾಧನೆಗೆ ಇಳಕಲ್ಲ ಹಾಗೂ ಹುನಗುಂದ ತಾಲೂಕಿನ ಶಿಕ್ಷಕ ವರ್ಗ ಅಭಿನಂದನೆ ಸಲ್ಲಿಸಿದೆ.