ಬೆಂಗಳೂರು – ಖ್ಯಾತ ಬಂಡಾಯ ಕವಿ, ಚಂಪಾ ಎಂದು ಪ್ರಸಿದ್ಧರಾಗಿದ್ದ ಚಂದ್ರಶೇಖರ ಪಾಟೀಲ ನಿಧನರಾಗಿದ್ದಾರೆ.
ಅವರಿಗೆ ೮೩ ವರ್ಷ ವಯಸ್ಸಾಗಿತ್ತು. ತಮ್ಮ ಉತ್ತರ ಕರ್ನಾಟಕದ ಭಾಷೆ ಹಾಗೂ ದಿಟ್ಟ ನಿಲುವುಗಳಿಂದ ಚಂಪಾ ಸುಪ್ರಸಿದ್ಧರಾಗಿದ್ದರು. ತಮಗೆ ಅನ್ನಿಸಿದ್ದನ್ನು ನೇರವಾಗಿ, ಯಾವ ಮುಜುಗರ, ಹೆದರಿಕೆಯಿಲ್ಲದೆ ಹೇಳುತ್ತಿದ್ದ ಚಂದ್ರಶೇಖರ ಪಾಟೀಲ ಬಂಡಾಯದ ಬಾವುಟವನ್ನೇ ಹಾರಿಸುತ್ತಿದ್ದರು. ಅನ್ಯಾಯ ಕಂಡಲ್ಲಿ ಸಿಡಿಯುತ್ತಿದ್ದರು.
ಖ್ಯಾತ ಕವಿಗಳಾದ ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರ ಒಡನಾಡಿಯಾಗಿದ್ದ ಚಂಪಾ ಅವರೊಡನೆ ಸೇರಿಕೊಂಡು ‘ ಸಂಕ್ರಮಣ ‘ ಎಂಬ ಮಾಸಪತ್ರಿಕೆ ಆರಂಭಿಸಿದ್ದರು.ಸಾಹಿತ್ಯದ ಘಮದೊಂದಿಗೆ ಬರುತ್ತಿದ್ದ ಸಂಕ್ರಮಣ ಪತ್ರಿಕೆಯಲ್ಲಿ ಆಗಾಗ ಬಂಡಾಯದ ಕಹಳೆ ಮೊಳಗಿದ್ದುಂಟು. ಸಂಕ್ರಮಣ ಪತ್ರಿಕೆಯ ಮೂಲಕ ಚಂಪಾ ಅವರು ಅನೇಕ ಉದಯೋನ್ಮುಖರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದರು.
ಬಂಡಾಯ ಚಳವಳಿ, ಗೋಕಾಕ ಚಳವಳಿಗಳಲ್ಲಿ ಅವರು ಸಕ್ರಿಯರಾಗಿ ತೊಡಗಿಸಿಕೊಂಡು ಮನೆ ಮಾತಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಇಂಗ್ಲೀಷ ಪ್ರಾಧ್ಯಾಪಕರಾಗಿದ್ದ ಅವರು ನಿವೃತ್ತಿಯ ನಂತರ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
ಚಂಪಾ ಅವರ ನಿಧನದಿಂದ ಸಾಹಿತ್ಯ ಲೋಕ ಅದರಲ್ಲೂ ಬಂಡಾಯ ಲೋಕ ದನಿಯೊಂದನ್ನು ಕಳೆದುಕೊಂಡಂತಾಗಿದೆ.
ಟೈಮ್ಸ್ ಆಫ್ ಕರ್ನಾಟಕ ಬಳಗದಿಂದ ಚಂಪಾ ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇವೆ.