Homeಸುದ್ದಿಗಳುಕೆ.ಆರ್.ನಗರದಲ್ಲಿ ವೈಭವದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ

ಕೆ.ಆರ್.ನಗರದಲ್ಲಿ ವೈಭವದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ

ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ  ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಪುರಸಭೆ ಹಾಗೂ ತಾಲ್ಲೂಕು ಆರ್ಯ ಈಡಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ವೈಭವಯುತವಾಗಿ ಆಚರಿಸಲಾಯಿತು.

ಜಯಂತ್ಯುತ್ಸವವನ್ನು ಉದ್ಘಾಟಿಸಿದ ವಿಧಾನಸಭಾ ಸದಸ್ಯರಾದ ಹೆಚ್.ವಿಶ್ವನಾಥ್ ಅವರು ಮಾತನಾಡಿ, ರಾಜ್ಯದ ಅಭಿವೃದ್ದಿಯಲ್ಲಿ ಆರ್ಯ ಈಡಿಗ ಜನಾಂಗದವರ ಪಾತ್ರ ಅತ್ಯಮೂಲ್ಯವಾದುದು. ಶ್ರೀಮತಿ ಇಂದಿರಾಗಾಂಧಿಯವರು ಪ್ರಧಾನಮಂತ್ರಿಗಳಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಭೂಸುಧಾರಣಾ ಕಾಯ್ದೆ ಯನ್ನು  ಪರಿಣಾಮಕಾರಿಯಾಗಿ ಜಾರಿಗೆ ತಂದ ಕೀರ್ತಿ ಎಸ್.ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪನವರಿಗೆ ಸಲ್ಲುತ್ತದೆ. ಅದೇ ರೀತಿ ಡಾ.ರಾಜಕುಮಾರ್ ಹಾಗೂ ಡಾ.ಪುನೀತ್ ರಾಜಕುಮಾರ್ ಕರ್ನಾಟಕ ರಾಜ್ಯದ ಚಲನಚಿತ್ರರಂಗ, ಸಾಂಸೃತಿಕ ಕ್ಷೇತ್ರ ಹಾಗೂ ಕನ್ನಡ ನಾಡು-ನುಡಿಗೆ ನೀಡಿದ ಕೊಡುಗೆ ಅತ್ಯಮೂಲ್ಯ ಎಂದು ಬಣ್ಣಿಸಿದರು.

ಬ್ರಹ್ಮಶ್ರೀ ನಾರಾಯಣಗುರು ಕೇರಳ ರಾಜ್ಯದಲ್ಲಿ ಸಮಾನತೆ ಹಾಗೂ ಸಾಮಾಜಿಕ ಜಾಗೃತಿಗಾಗಿ ನೀಡಿರುವ ಕೊಡುಗೆ ಅತ್ಯಮೂಲ್ಯ. ಅವರನ್ನು ಕೇರಳದ ಬಸವಣ್ಣನವರು ಎಂದು ಬಣ್ಣಿಸಬಹುದು.

ಇದೀಗ ಆರ್ಯ ಈಡಿಗ ಜನಾಂಗದ ಕಮ್ಯುನಿಸ್ಟ್ ನಾಯಕ  ಪಿ.ನಾಯರ್ ಹಾಗೂ ಪಿನ್ನಣ್ಣ ರೈ ವಿಜಯನ್ ಅವರು ಕೇರಳದ ಮುಖ್ಯಮಂತ್ರಿಗಳಾಗಿ ಸೇವೆ ಮಾಡಲು ಬ್ರಹ್ಮಶ್ರೀ ನಾರಾಯಣಗುರು ಅವರ ಪ್ರಭಾವವೇ ಕಾರಣ ಎಂದು ಹೆಚ್.ವಿಶ್ವನಾಥ್ ನುಡಿದರು.

ಮಾಜಿ ಸಚಿವ ಹಾಗೂಶಾಸಕ ಸಾ.ರಾ.ಮಹೇಶ್ ಅವರು ಮಾತನಾಡಿ ಮನುಕುಲದ ಅಭಿವೃದ್ದಿಗೆ ನುಡಿದ ಎಲ್ಲ ಮಹನೀಯರೂ ದೇವರ ಸಮಾನ. ಅವರ ಬೋಧನೆ ಹಾಗೂ ತತ್ವಗಳನ್ನು ಎಲ್ಲರೂ ಪಾಲಿಸಿದರೆ ಸಮಾಜದ ಅಭಿವೃದ್ದಿಯಾಗುತ್ತದೆ ಎಂದು ನುಡಿದರು.ಆರ್ಯ ಈಡಿಗ ಜನಾಂಗದವರು ಸಮುದಾಯ ಭವನ ನಿರ್ಮಿಸಲು ಪುರಸಭೆ ವತಿಯಿಂದ ನಿವೇಶನ ನೀಡಲು ಕ್ರಮಕೈಗೊಳ್ಳಲಾಗುವುದು. ಪಟ್ಟಣದಲ್ಲಿ ಈಗಿರುವ ಡಾ.ರಾಜ್ ಪ್ರತಿಮೆಯನ್ನು ನವೀಕರಿಸಲಾಗುವುದು. ಡಾ.ಪುನೀತ್ ರಾಜಕುಮಾರ್  ಪ್ರತಿಮೆಸ್ಥಾಪಿಸಲಾಗುವುದು. ಕೆ.ಆರ್.ನಗರ ಪಟ್ಟಣದ ಪ್ರಮುಖ ರಸ್ತೆಯೊಂದಕ್ಕೆ ಡಾ.ಪುನೀತ್ ರಾಜಕುಮಾರ್ ಹೆಸರು ನಾಮಕರಣ ಮಾಡಲಾಗುವುದು ಎಂದು ಶಾಸಕರು ಪ್ರಕಟಿಸಿದರು.

ಇದೇ ಸಂದರ್ಭದಲ್ಲಿ ಆರ್ಯ ಈಡಿಗ ಜನಾಂಗದ ಚುನಾಯಿತ ಸದಸ್ಯರಾದ ವಿ.ಪೂರ್ಣಿಮಾ, ವಸಂತಮ್ಮ, ಗೌರಮ್ಮ, ರೋಹಿಣಿ ವಿಜಯ್, ವಸಂತಮ್ಮ, ಯೋಧ ವೆಂಕಟೇಶ್ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪುರಸಭಾಧ್ಯಕ್ಷರಾದ ಕೋಳಿ ಪ್ರಕಾಶ್, ಮಾಜಿ ಪುರಸಭಾ ಸದಸ್ಯರಾದ ಕೆ.ಶಿವಕುಮಾರ್,ತಾಲ್ಲೂಕು ಆರ್ಯ ಈಡಿಗರ  ಸಂಘದ ಅಧ್ಯಕ್ಷರಾದ ಟಿ.ಶಿವಣ್ಣ, ತಾಲ್ಲೂಕು ಮಧ್ಯಮಾರಾಟಗಾರರ ಸಂಘದ ಅಧ್ಯಕ್ಷರಾದ ಹೆಚ್.ಕೆ.ಓಬೇಗೌಡ, ಲೇಖಕರಾದ ಗುರುಶಾಂತಪ್ಪ, ಜನಾಂಗದ ಯುವ ಮುಖಂಡರಾದ ಆದಿತ್ಯ,ಚಿರಂಜೀವಿ, ಕೆ.ವಿನಯ್, ಪುರಸಭಾ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಮೊದಲು ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

RELATED ARTICLES

Most Popular

error: Content is protected !!
Join WhatsApp Group