ಕರ್ನಾಟಕ ಸಾಹಿತ್ಯ ಅಕಾಡೆಮಿಯ ದೇಸಿ ದರ್ಶನ ಮಾಲೆಯಡಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ರವರ ಯೋಜನಾ ಸಂಪಾದಕತ್ವದಲ್ಲಿ ಪ್ರಕಟವಾಗಿ ಸಂಸ್ಕೃತಿ ಚಿಂತಕ, ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಲೇಖಕರಾಗಿ ಬರೆದಿರುವ ‘ದಾಸ ಪಂಥ’ ಕೃತಿಯ ಅವಲೋಕನ ಕಾರ್ಯಕ್ರಮವನ್ನು ಬೆಂಗಳೂರಿನ ಹನುಮಂತನಗರದ ಶ್ರೀ ಬಾಲಾಜಿ ಪದವಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾದಂಬರಿಕಾ ಡಾ.ಕೆ. ರಮಾನಂದ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ದಾಸ ಸಾಹಿತ್ಯ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಅದು ಎಲ್ಲ ವರ್ಗಗಳ ಅರಮನೆ, ಗುರುಮನೆ ಮತ್ತು ಜನ ಸಾಮಾನ್ಯರನ್ನೂ ಮುಟ್ಟಿ, ಎಲ್ಲ ಕಾಲದಲ್ಲಿಯೂ ಸ್ವೀಕೃತವಾಗಿರುವುದು ಅದರ ವಿಶೇಷವಾಗಿದೆ.
ಅವರವರ ಧರ್ಮದ ಅಸ್ತಿತ್ವವನ್ನು, ಅವರವರ ನಂಬುಗೆಗಳನ್ನು, ಶ್ರದ್ಧೆಯನ್ನು ಉಳಿಸಿ ಜನರ ಮನಸ್ಸನ್ನು ಧರ್ಮದಲ್ಲಿ ನಡೆಯುವಂತೆ ಮಾಡಿದ ಬಹುಪಾಲು ಶ್ರೇಯಸ್ಸು ದಾಸ ಸಾಹಿತ್ಯಕ್ಕೆ ಸಲ್ಲುತ್ತದೆ. ವಿಶೇಷವಾಗಿ ಅರ್ಥವಿಲ್ಲದ ಆಚಾರ ವಿಚಾರಗಳನ್ನು, ಅಂಧಾನುಕರಣೆಯನ್ನು ಖಂಡಿಸುತ್ತ ಮುಕ್ತಿಗೆ ಸಾಧನೆಯಾಗಿ ಆಧ್ಯಾತ್ಮದ ದಾರಿಯನ್ನು ಒದಗಿಸಿ ಕೊಡುವಲ್ಲಿ ಮುಂದಾದದ್ದು ದಾಸ ಸಾಹಿತ್ಯದ ಅದ್ಭುತ ಸಾಧನೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಕೃತ ಪ್ರಾಧ್ಯಾಪಕ ಡಾ. ವಾದಿರಾಜ ಅಗ್ನಿಹೋತ್ರಿ ‘ ದಾಸ ಪಂಥ ’ ಕೃತಿಯ ಅವಲೋಕನ ಮಾಡಿ ಮಾತನಾಡುತ್ತ, ಇತ್ತೀಚಿನ ದಿನಗಳಲ್ಲಿ ಭಕ್ತಿ ಸಾಹಿತ್ಯದಲ್ಲಿ ಚಿಂತನೆ ಕಡಿಮೆಯಾಗುತ್ತ ಬಂದಿವೆ. ಇದು ವ್ಯಸನದ ಬೆಳವಣಿಗೆ. ಧಾರ್ಮಿಕ ಚಿಂತನೆ ಮತ್ತು ಆಚರಣೆಗಳು ಸಡಿಲವಾಗುತ್ತಿರುವ ಇಂದಿನ ಪರಿಸರದಲ್ಲಿ ಸಂಪ್ರದಾಯ, ಭಕ್ತಿ ಮತ್ತು ಧಾರ್ಮಿಕ ಶ್ರದ್ಧೆಯನ್ನು ಸದೃಢಗೊಳಿಸಲು ದಾಸಸಾಹಿತ್ಯ ಪ್ರಧಾನ ಶಕ್ತಿ.
ಈ ದಿಸೆಯಲ್ಲಿ ದೇಸೀ ಪರಂಪರೆಯ ಇತಿಹಾಸವನ್ನು ಮರು ಓದುವ ಅಗತ್ಯ ಇದೆ. ದಾಸರ ಹಾಡುಗಳನ್ನೆಲ್ಲಾ ಸಂಶೋಧಿಸಿ ಹೊರತೆಗೆದು ದಾಸಸಾಹಿತ್ಯದ ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಮೌಲ್ಯಗಳ ಪುನರ್ ಪ್ರತಿಷ್ಠಾಪನೆಯಾಗಬೇಕಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ‘ದೇಸಿ ದರ್ಶನ ಮಾಲೆ’ ಯಡಿ ರಚಿತವಾಗಿರುವ ಈ ಪುಸ್ತಕದ ಸಿದ್ಧತೆಯಲ್ಲಿ ಇಂದಿನ ಪೀಳಿಗೆಯ ಅಧ್ಯಯನಶೀಲ ಸಾಹಿತಿ , ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿಯವರು ತುಂಬ ಶ್ರಮ ವಹಿಸಿರುವುದು ತಿಳಿಯುತ್ತದೆ. ಸಂಶೋಧಕರಿಗೆ ನೆರವಾಗ ಬಲ್ಲ ನೂರಾರು ವಿವರಗಳು ಇಲ್ಲಿವೆ. ಈ ಕೃತಿಯು ಮುಂದಿನ ಇಂತಹ ಹಲವು ಸಂಶೋಧನೆ ಮತ್ತು ದಾಖಲಾತಿಗಳಿಗೆ ದಾರಿ ಮಾಡುವ ಭರವಸೆಯನ್ನಿಡಬಹುದು. ದೇಸೀ ಪರಂಪರೆಯ ಇತಿಹಾಸವನ್ನು ಕ್ರಮವರಿತು ನಿರೂಪಿಸಿದೆ. ಸಮಗ್ರ ಭಕ್ತಿ ಪಂಥದ, ಶ್ರೇಷ್ಠ ಕೃತಿಯಾಗಿ, ಸಂಗ್ರಾಹ್ಯ ಯೋಗ್ಯ ಕೃತಿಯಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಸಹಯೋಗದಲ್ಲಿ ನಿರಂತರವಾಗಿ ಕನ್ನಡ ಸಾಹಿತ್ಯ ಹಾಗೂ ಹರಿದಾಸ ಸಾಹಿತ್ಯದ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಸಂಶೋಧಕ – ಸಂಘಟಕ ಡಾ. ಆರ್. ವಾದಿರಾಜುರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ,ಪ್ರಾಂಶುಪಾಲ ಪ್ರೊ.ಉಮೇಶ್ ದಕ್ಷಿಣಾಮೂರ್ತಿ, ಇತಿಹಾಸ ಸಹ ಪ್ರಾಧ್ಯಾಪಕ ಪ್ರೋ. ಸಿದ್ದೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.