ಎಲ್ಲಾ ಚುನಾವಣೆಗಳಲ್ಲಿ ಸರ್ಕಾರ ಮತದಾನ ಕಡ್ಡಾಯ ಮಾಡಿಲ್ಲ. ಆದರೆ ಅದು ನಮ್ಮೆಲ್ಲರ ಕರ್ತವ್ಯ. ಕರ್ತವ್ಯ ಅಂದರೆ ಕರ್ತವ್ಯ ಅಷ್ಟೆ ಎಲ್ಲರೂ ಮಾಡಲೇಬೇಕು. ಚುನಾವಣೆಯಲ್ಲಿ ಮತದಾನ ಮಾಡಿದರೆ ಮಾತ್ರ ನಾವು ನಮ್ಮ ಹಕ್ಕುಗಳ ಬಗ್ಗೆ ಮಾತನಾಡುವ ಯೋಗ್ಯತೆ ಪಡೆಯುತ್ತೇವೆ. ಮತದಾನ ಮಾಡಲಿಲ್ಲವಾದರೆ ಕ್ಷೇತ್ರದಲ್ಲಿನ ಯಾವುದೇ ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡುವ ಹಕ್ಕು ನಮಗಿಲ್ಲ.
ಒಂದು ವೇಳೆ ನಾವು ಮತ ಹಾಕಿದ ಅಭ್ಯರ್ಥಿ ಸೋತು ಹೋಗಿದ್ದರೂ ನಮ್ಮ ಬೇಡಿಕೆಗಳನ್ನು ಆಯ್ಕೆಯಾದ ಅಭ್ಯರ್ಥಿಯ ಎದುರು ಇಡುವ ಅವಕಾಶವಿದೆ. ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯದ ಬಗ್ಗೆ ಪ್ರಾಮಾಣಿಕ ಹೋರಾಟ ನಮ್ಮದಾಗಿದ್ದರೆ ಯಾವುದೇ ಅಭ್ಯರ್ಥಿ ತಲೆಬಾಗುತ್ತಾರೆ. ಬೇಡಿಕೆ ಇಟ್ಟು ಹೋರಾಟ ಮಾಡುವುದು ಕೂಡ ನಮ್ಮದೇ ಕರ್ತವ್ಯ.
ಮತದಾನ ಎನ್ನುವುದು ಪವಿತ್ರ ಕಾರ್ಯ ಎನ್ನುತ್ತಾರೆ. ಹೌದು, ಅದರ ಪಾವಿತ್ರ್ಯ ಕಾಪಾಡುವುದು ಕೂಡ ನಮ್ಮ ಕೈಯಲ್ಲೇ ಇದೆ. ಯಾರಾದರೂ ಒಬ್ಬ ಯೋಗ್ಯ ಅಭ್ಯರ್ಥಿಗೆ ಮತವನ್ನು ನೀಡಲೇಬೇಕು. ಕೆಲವು ಮತ ಪೆಟ್ಟಿಗೆಯಲ್ಲಿ ವಿಚಿತ್ರ ಬೇಡಿಕೆಗಳನ್ನು ಇಟ್ಟು ಮತದಾನವನ್ನು ಅಣಕ ಮಾಡುತ್ತಾರೆ. ಇನ್ನೂ ಕೆಲವರು ಯಾರಿಗೆ ಮತ ಹಾಕಬೇಕೆಂಬುದು ತಿಳಿಯದೆ ನೋಟಾಗೆ ಮತ ಹಾಕಿ ಕೈ ತೊಳೆದುಕೊಳ್ಳುತ್ತಾರೆ.
ನೆನಪಿರಲಿ ನೋಟಾಗೆ ಹಾಕಿದ ಮತ ನಿಜವಾಗಲೂ ಮತವೇ ಅಲ್ಲ. ಅದೊಂದು ಕಾಲಹರಣ ಅಷ್ಟೇ. NOTA ಎಂಬ ವಿಭಾಗವನ್ನು ಮಾಡಿರುವ ಚುನಾವಣಾ ಆಯೋಗವು ಅತಿ ಹೆಚ್ಚು ಮತಗಳು ನೋಟಾಕ್ಕೆ ಬಿದ್ದರೆ ಏನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟ ನಿಲುವು ಹೊಂದಿಲ್ಲ. ಒಂದು ವೇಳೆ ನೋಟಾಕ್ಕೆ ಹೆಚ್ಚು ಮತಗಳು ಬಿದ್ದರೆ ಆ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಯಾವ ಅಭ್ಯರ್ಥಿಯೂ ಶಾಸಕ ಅಥವಾ ಸಂಸದನಾಗಲು ಅರ್ಹನಲ್ಲ ಎಂಬ ಅರ್ಥ ಬರುತ್ತದೆ ಹಾಗಾದಾಗ ಮತದಾರನ ನೋಟಾದ ಆದೇಶದಂತೆ ಅಲ್ಲಿ ಸ್ಪರ್ಧಿಸಿರುವ ಎಲ್ಲಾ ಪಕ್ಷಗಳ ಎಲ್ಲಾ ಅಭ್ಯರ್ಥಿಗಳನ್ನು ಈ ಚುನಾವಣೆಯ ಮಟ್ಟಿಗೆ ಅನರ್ಹ ಮಾಡಿ ಬೇರೆಯದೇ ಅಭ್ಯರ್ಥಿಗಳು ಸ್ಪರ್ಧಿಸಲು ಪಕ್ಷಗಳಿಗೆ ಆದೇಶ ನೀಡಬೇಕು. ಇದು ಅತ್ಯಂತ ಅವಶ್ಯವಾಗಿ ಆಗಬೇಕಾಗಿದೆ. ಅದು ಆಗುವ ತನಕ ನೋಟಾ ಮತವನ್ನಂತೂ ಹಾಕಲೇಬೇಡಿ.
ಇನ್ನು ನಾವು ಕೂಡ ಯಾವುದೇ ನೆಪ ಹೇಳದೆ ಮತದಾನ ಮಾಡಲೇಬೇಕು. ಚುನಾವಣೆಯ ದಿನ ಪಕ್ಷಗಳ ಕಾರ್ಯಕರ್ತರು ಮನೆ ಮನೆಗೆ ಗಾಡಿ ವ್ಯವಸ್ಥೆ ಮಾಡಿರುತ್ತಾರೆ.
ಗಾಡಿ ಮನೆಗೆ ಬರಲಿಲ್ಲ ಎಂಬ ನೆಪ ಹೇಳದೆ, ಬಹಳ ಬಿಸಿಲು ಎಂಬ ನೆಪವನ್ನೂ ಹೇಳದೆ, ಯಾರಿಗೆ ಮತ ಹಾಕಿದರೂ ಅಷ್ಟೇ ನಾವು ರಾಗಿ ಬೀಸುವುದು ತಪ್ಪುವುದಿಲ್ಲ ಎಂಬ ನೆಪವನ್ನೂ ಹೇಳದೆ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಚಲಾಯಿಸಲೇಬೇಕು ಅಷ್ಟೇ !
ಉಮೇಶ ಬೆಳಕೂಡ, ಮೂಡಲಗಿ