ಸಿಂದಗಿ: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸುವುದಕ್ಕೆ, ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಎನ್ಎಸ್ಎಸ್ ಶಿಬಿರ ನಡೆಯುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಇದರ ಅನುಭವ ಪಡೆದುಕೊಳ್ಳಬೇಕೆಂದು ವಿಶ್ರಾಂತ ಉಪನ್ಯಾಸಕ ಬಿ. ಎಸ್. ಬಿರಾದಾರ್ ಹೇಳಿದರು.
ಪಟ್ಟಣದ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್ಜಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ೨೦೨೫-೨೬ ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಹೇರಿಕೆ ಆಗಬಾರದು, ಪಠ್ಯ ಶಿಕ್ಷ ಣ ಜತೆ ಸಮುದಾಯದ ಪರಿಚಯ, ಸೇವೆ ಮೂಲಕ ಸ್ವಚ್ಛತೆ ಅರಿವು, ನಮ್ಮಲ್ಲಿನ ಸಂಸ್ಕೃತಿ ಪ್ರದರ್ಶನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸಹ ಭೋಜನ, ಕ್ರೀಡೆ ಮೂಲಕ ಸಮಗ್ರತೆ ಪರಿಕಲ್ಪನೆ ಹೀಗೆ ಹಲವು ಚಿಂತನೆ ಸಾಕಾರಕ್ಕಾಗಿ ಶಿಬಿರ ನಡೆಯುತ್ತದೆ. ಅದನ್ನು ಅರ್ಥ ಮಾಡಿಕೊಂಡು ಎಲ್ಲ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಎ. ಆರ್. ಹೆಗ್ಗನದೊಡ್ಡಿ ಮಾತನಾಡಿ,ಕಲಿಕೆ ವಿದ್ಯಾರ್ಥಿ, ಶಿಕ್ಷಕರ ನಡುವಿನ ಕೊಂಡಿ ಆಗಿರದೆ ಸಮುದಾಯದ ನಡುವೆಯೂ ರಚನಾತ್ಮಕ ಸಂಬಂಧ ಏರ್ಪಡಬೇಕು ಎನ್ನುವ ಆಶಯದೊಂದಿಗೆ ಎನ್ಎಸ್ಎಸ್ ಶಿಬಿರ ನಡೆಸಲಾಗುತ್ತದೆ. ಗ್ರಾಮದ ಸ್ವಚ್ಛತೆ ಕೆಲಸದ ಜತೆ ಗ್ರಾಮೀಣರಲ್ಲಿ ಆರೋಗ್ಯ ಅರಿವು, ಮೌಢ್ಯತೆ ಹೋಗಲಾಡಿಸುವುದು, ಕಂದಾಚಾರಕ್ಕೆ ವಿರುದ್ಧವಾಗಿ ಯುವಕರ ಪ್ರೇರಣೆ ಹೀಗೆ ಹಲವು ಮಾರ್ಗದಲ್ಲಿ ಯುವ ಜನತೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.
ಈ ವೇಳೆ ಎನ್ಎಸ್ಎಸ್ ಘಟಕದ ಸಂಯೋಜಕ ಡಾ. ಎಸ್. ಎಸ್. ಚೌವಾಣ ಪ್ರತಿಜ್ಞಾವಿಧಿ ಬೋಧಿಸಿದರು.
ವೇದಿಕೆಯ ಮೇಲೆ ಉಪನ್ಯಾಸಕರಾದ ಎಸ್. ಎ. ಪಾಟೀಲ, ಎಮ್. ಎನ್. ಅಜ್ಜಪ್ಪ ಹಾಗೂ ಎನ್ಎಸ್ಎಸ್ ಘಟಕದ ಭಾಗ್ಯಶ್ರೀ ಶಾಬಾದಿ, ಮಲ್ಲಿಕಾರ್ಜುನ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಫ್. ಎ. ಹಾಲಪ್ಪನವರ, ಮುಕ್ತಾಯಕ್ಕ ಕತ್ತಿ, ಸತೀಶ ಬಸರಕೋಡ, ಸಿದ್ದಲಿಂಗ ಕಿಣಗಿ, ಎ. ಬಿ. ಪಾಟೀಲ, ಎ. ಆರ್. ಸಿಂದಗಿಕರ ಹಾಗೂ ಬೋಧಕೇತರ ಸಿಬ್ಬಂದಿ ಎನ್ಎಸ್ಎಸ್ ಘಟಕದ ಸ್ವಯಂಸೇವಕರು ಭಾಗವಹಿಸಿದ್ದರು.

