ಬೀದರ – ನಗರದ ಪಾಪನಾಶ ದೇವಾಲಯದ ಅಭಿವೃದ್ಧಿ ಕಾಮಗಾರಿ ಕುರಿತಂತೆ ಸಚಿವ ಈಶ್ವರ ಖಂಡ್ರೆ ಹಾಗೂ ಭಗವಂತ ಖೂಬಾ ನಡುವೆ ಜಟಾಪಟಿ ಆರಂಭವಾಗಿದ್ದು ಅಭಿವೃದ್ಧಿ ಯ ಕ್ರೆಡಿಟ್ ತೆಗೆದುಕೊಳ್ಳಲು ಸ್ಪರ್ಧೆ ನಡೆದಿದೆ.
ಪತ್ರಿಕಾಗೋಷ್ಠಿಯಲ್ಲಿ ಈಶ್ವರ ಖಂಡ್ರೆ ಹಾಗೂ ಸಂಸದ ಸಾಗರ ಖಂಡ್ರೆ ವಿರುದ್ಧ ವಾಗ್ದಾಳಿ ನಡೆಸಿದ ಖೂಬಾ, ಪಾಪನಾಶ ದೇವಾಲಯ ಅಭಿವೃದ್ಧಿ ಗೆ ೨೩ ಕೋಟಿ ಹಣ ತಾನು ತಂದಿರುವುದು ಸತ್ಯ ಇದನ್ನು ಮರೆಮಾಚಿ ಖಂಡ್ರೆ ಹಾಗೂ ಅವರ ಮಗ ಫ್ಲೆಕ್ಸ್ ಹಾಕಿದ್ದಾರೆ ಎಂದು ಕಿಡಿ ಕಾರಿದರು.
ನನ್ನ ಅವಧಿಯಲ್ಲಿ ಪ್ರಧಾನಿಯವರು ಕೊಡುಗೆ ನೀಡಿದ್ದಾರ ೨೧ ಸೆ.೨೦೨೧ ರಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಯಿತು ೨೦೨೩ ರಲ್ಲಿ ಮಂಜೂರಾತಿ ದೊರಕಿತು. ೨೦೨೪ ರಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಪ್ರಧಾನಿ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ ಗುತ್ತಿಗೆದಾರರ ನೇಮಕವಾಗಿದ್ದರೂ ಖಂಡ್ರೆ ತಂದೆ ಮಗ ತಮಗೆ ಪ್ರಸಾದ ಸಿಕ್ಕಿಲ್ಲ ಅಂತ ಕಾಮಗಾರಿಗೆ ತಡೆಯೊಡ್ಡಿದ್ದಾರೆ ಎಂದು ಆರೋಪ ಮಾಡಿದರು.
ಅಧಿಕಾರ ಇದೆ ಅಂತ ಗುತ್ತಿಗೆದಾರನ ಬಳಿ ಹಣ ಪಡೆದು ಫ್ಲೆಕ್ಸ್ ಹಾಕಿ ಪ್ರಚಾರ ತೆಗೆದುಕೊಳ್ಳುವುದು ಸಹಿಸುವುದಿಲ್ಲ ಎಂದ ಖೂಬಾ, ಪಾಪನಾಶ ದೇವಾಲಯಕ್ಕೆ ನಿಮ್ಮ ಕೊಡುಗೆ ಇದ್ದರೆ ಲಿಂಗದ ಮೇಲೆ ಆಣೆ ಪ್ರಮಾಣ ಮಾಡಿ ಹೇಳಿ ಎಂದು ಸವಾಲೆಸೆದರು.
ಈಶ್ವರ ಖಂಡ್ರೆ ರಾಜಕಾರಣ ಕೊನೆಯ ಹಂತದಲ್ಲಿದೆ. ೨೦೨೮ ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಭಾಲ್ಕಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದು ಬರಲಿದೆ ಎಂದರು.
ಖಂಡ್ರೆ ಪತ್ರಿಕಾಗೋಷ್ಠಿ
ಇನ್ನೊಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ದೇವಾಲಯದ ಅಭಿವೃದ್ಧಿ ಗೆ ನಾನು ಸಚಿವ ರಹೀಂ ಖಾನ್ ೫ ಕೋಟಿ ಕೊಟ್ಟಿದ್ದೇವೆ. ಖೂಬಾರಂಥವರು ಯಾರೇ ತಡೆದರೂ ಬೀದರ ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತೇವೆ. ಭಗವಂತ ಖೂಬಾ ಅವರನ್ನು ಜನ ಸೋಲಿಸಿದ್ದಾರೆ ಎಂದರು.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಸಂಸದ ಸಾಗರ ಖಂಡ್ರೆ, ನಾನು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಅವರನ್ನು ಭೇಟಿಯಾಗಿದ್ದೆ ಅವರು ಹಣ ಬಿಡುಗಡೆ ಮಾಡಿದರು. ಒಳ್ಳೆಯ ಕೆಲಸ ಮಾಡಿ ಎಂದು ಬೆನ್ನು ತಟ್ಟಿದ್ದಾರೆ ಆದರೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವುದು ಆಶ್ಚರ್ಯ ತಂದಿದೆ. ಬ್ಯಾನರ್ ಹಾಕಿದ್ದು ಕಾರ್ಯಕರ್ತರು ಅದರಲ್ಲೇನು ತಪ್ಪಿದೆ ಎಂದು ಪ್ರಶ್ನೆ ಮಾಡಿದರು.
ವರದಿ : ನಂದಕುಮಾರ ಕರಂಜೆ, ಬೀದರ

