ಬೈಲಹೊಂಗಲ- ಬೆಂಗಳೂರಿನ ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ ‘ಮಹಾನ್ ದಾರ್ಶನಿಕ ಬಸವಣ್ಣ’ ಗ್ರಂಥವನ್ನು ಮನೆ ಮನೆಗೆ ವಿತರಿಸಲು ನಿರ್ಧರಿಸಲಾಗಿದೆ ಎಂದು ಬಸವ ಸಮಿತಿಯ ಅಧ್ಯಕ್ಷರಾದ ಡಾ.ಅರವಿಂದ ಜತ್ತಿ ತಿಳಿಸಿದ್ದಾರೆ.
ಮಹಾನ್ ದಾರ್ಶನಿಕ ಬಸವಣ್ಣನವರ ಜೀವನ- ಸಾಧನೆ- ವಿಚಾರಗಳು ಈ ಗ್ರಂಥದಲ್ಲಿರುವ ಮುಖ್ಯ ಅಂಶಗಳು. ಲೇಖಕರು ಪ್ರೊ.ಸಿದ್ದಣ್ಣ ಲಂಗೋಟಿ (ಚಾಂದಕವಟೆ) ಅವರು.
ಪೂಜ್ಯ ಶ್ರೀ ಶಿವರುದ್ರ ಮಹಾಸ್ವಾಮಿಗಳು, ಡಾ. ಅರವಿಂದ ಜತ್ತಿ, ಡಾ. ವೀರಣ್ಣ ರಾಜೂರ, ಡಾ. ಎನ್.ಜಿ. ಮಹದೇವಪ್ಪ,
ಡಾ. ಸಿ.ಎಂ. ಕುಂದಗೋಳ, ಡಾ. ಸದಾನಂದ ಪಾಟೀಲ,
ಪ್ರೊ. ಜಿ.ಎ. ತಿಗಡಿ, ಡಾ. ಮಲ್ಲಿಕಾರ್ಜುನ ಪಾಟೀಲ ಮತ್ತು
ಎಂ.ಜಿ. ಮುಳಕೂರು ಇವರೆಲ್ಲರೂ ಕೃತಿ ರಚನೆಗೆ ಮಾರ್ಗದರ್ಶನ ಮಾಡಿರುವರು.
ಈ ಕೃತಿಯಲ್ಲಿ ಬಸವಪೂರ್ವದ ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಾಹಿತ್ಯಿಕ, ಸಾಂಸ್ಕೃತಿಕ ಪರಿಸ್ಥಿತಿ,
ಬಾಗೇವಾಡಿಯಲ್ಲಿ ಬಸವಣ್ಣನವರ ಜನನ, ಇಂಗಳೇಶ್ವರ- ಬಾಗೇವಾಡಿ ಪರಿಸರ, ಬಾಗೇವಾಡಿ ಅಗ್ರಹಾರ, ಉಪನಯನ- ಜನಿವಾರ ತಿರಸ್ಕಾರ- ಅಗ್ರಹಾರದಿಂದ ಬಹಿಷ್ಕಾರ,
ಕಪ್ಪಡಿ ಸಂಗಮದ ಗುರುಕುಲದಲ್ಲಿ, ಮಂಗಳವಾಡಿಯಲ್ಲಿ- ಕಾಯಕ ಜೀವನ, ಕಲ್ಯಾಣ ರಾಜ್ಯದಲ್ಲಿ ಬಸವಣ್ಣನವರ ಸಾಧನೆಗಳು, ಬಸವ ಮಹಾಮನೆ- ಪ್ರಸಾದ ದಾಸೋಹದ ವಿವರಗಳಿವೆ.
ಅನುಭವ ಮಂಟಪ ಸ್ಥಾಪನೆ- ಸಾಧನೆಗಳು
ಧಾರ್ಮಿಕ ಕ್ರಾಂತಿ, ಸಾಮಾಜಿಕ ಕ್ರಾಂತಿ, ಆರ್ಥಿಕ ಕ್ರಾಂತಿ, ರಾಜಕೀಯ ಕ್ರಾಂತಿ, ಸಾಹಿತ್ಯಕ- ಶೈಕ್ಷಣಿಕ-ಸಾಂಸ್ಕೃತಿಕ ಕ್ರಾಂತಿ, ಬಸವಣ್ಣನವರ ಜೀವನದ ಘಟನೆಗಳು, ಕಲ್ಯಾಣ ಕ್ರಾಂತಿ- ಮರಣವೇ ಮಹಾನವಮಿಯ ಅರ್ಥಪೂರ್ಣ ವಿಶ್ಲೇಷಣೆಗಳಿವೆ.
ಬಸವಣ್ಣನವರ ಘನ- ವ್ಯಕ್ತಿತ್ವ ದರ್ಶನ
ಬಸವಯುಗದ ಶರಣರ- ಶರಣೆಯರ ವಚನಗಳಲ್ಲಿ, ಬಸವೋತ್ತರ ಯುಗದ ವಚನಕಾರರ ವಚನಗಳಲ್ಲಿ, ಕವಿಗಳ ಕಾವ್ಯ- ಪುರಾಣಗಳಲ್ಲಿ, ಜನಪದ ಸಾಹಿತ್ಯದಲ್ಲಿ, ಶಾಸನ ಸಾಹಿತ್ಯದಲ್ಲಿ, ಸರ್ವಜ್ಞನ ವಚನಗಳಲ್ಲಿ, ಆಧುನಿಕ ಕವಿಗಳ ಕವಿತೆ- ಕಾವ್ಯಗಳಲ್ಲಿ, ದೇಶ- ವಿದೇಶಿ ವಿದ್ವಾಂಸರ ಬರಹಗಳಲ್ಲಿ, ಬಸವಣ್ಣ ತನ್ನನ್ನು ತಾನು ಕಂಡಂತೆ ಈ ಕೃತಿಯಲ್ಲಿ ಮಾಹಿತಿ ಇರುವದೆಂದು ಅರವಿಂದ ಜತ್ತಿ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಹಾಗೂ ಪ್ರತಿಗಳಿಗಾಗಿ: ಮೋಹನ ಬಸನಗೌಡ ಪಾಟೀಲ,ಬಸವ ಸಮಿತಿಯ ಕಾರ್ಯಕಾರಿಣಿ ಸಮಿತಿಯ ಹಿರಿಯ ಸದಸ್ಯರು, ‘ಬಸವ ನಿವಾಸ’, ರಾಣಿ ಚನ್ನಮ್ಮ ನಗರ ಮೊದಲನೇಯ ಕ್ರಾಸ್, ಬೈಲಹೊಂಗಲ-591102, ಬೆಳಗಾವಿ ಜಿಲ್ಲೆ, ಮೊಬೈಲ ನಂ. 9448920888 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

