Homeಸುದ್ದಿಗಳುರಾಮ ಕೃಷ್ಣ ಹರಿ ಅನ್ನುತ್ತಾ ನಡೆದ ಕೌಜಲಗಿ ಹಾಗೂ ಉಳವಿಯ ದಿಂಡಿ ಪಾದಯಾತ್ರಿಕರು

ರಾಮ ಕೃಷ್ಣ ಹರಿ ಅನ್ನುತ್ತಾ ನಡೆದ ಕೌಜಲಗಿ ಹಾಗೂ ಉಳವಿಯ ದಿಂಡಿ ಪಾದಯಾತ್ರಿಕರು

ಹಳ್ಳೂರ : ತಾಳ ತಂಬೂರಿ ಕೈಯಲ್ಲಿಡಿದು ರಾಮ ಕೃಷ್ಣ ಹರಿ ಶ್ರೀ ವಿಠ್ಠಲ ರುಕ್ಮಿಣಿ ದೇವರ ನಾಮಸ್ಮರಣೆ ವರ್ಣನೆ ಭಜನೆ ಮಾಡುತ್ತಾ ಮಳೆ ಬಿಸಿಲು ಲೆಕ್ಕಿಸದೆ ಚಂದ್ರಭಾಗಾ ನದಿ ದಡದಲ್ಲಿರುವ ಪಂಡರಪುರದ ಪಾಂಡುರಂಗನನ್ನು ಕಣ್ತುಂಬಿ ಸಿಕೊಳ್ಳಲು ಶ್ರೀ ಕ್ಷೇತ್ರ ಉಳವಿಯ ಶ್ರೀ ಚನ್ನಬಸವೇಶ್ವರ ದೇವಸ್ಥಾನದಿಂದ ಹಾಗೂ ಕೌಜಲಗಿ ದಿಂಡಿ ಭಕ್ತರು ನೂರಾರು ಕಿಲೋ ಮೀಟರ್ ಪಾದಯಾತ್ರೆ ಮೂಲಕ ಪಂಡರಪುರಕ್ಕೆ ತೆರಳುವ ಭಕ್ತರ ದಂಡು ಈಗಾಗಲೇ ಬೆಳಗಾವಿ ಜಿಲ್ಲೆ ಹಾಗೂ ವಿವಿಧ ಕಡೆಗಳಿಂದ ತಮ್ಮ ಪಯಣವನ್ನು ಆರಂಭಿಸಿದ್ದಾರೆ.

ಹೌದು. ಜು.6ರಂದು ಆಷಾಡ ಏಕಾದಶಿಯ ದಿನ ಪುಣ್ಯ ಕ್ಷೇತ್ರ ಪಂಡರಪುರದಲ್ಲಿ ಅಪಾರವಾದ ಸಂಖ್ಯೆಯಲ್ಲಿ ಭಕ್ತರ ಜಾತ್ರೆಯೇ ಬಂದು ಸೇರುತ್ತದೆ. ಅಲ್ಲಿ ಬಂದು ಸೇರುವವರಲ್ಲಿ, ಶೇ.75ಕ್ಕೂ ಹೆಚ್ಚಿನವರು ಪಾಂಡುರಂಗನ ನಾಮಸ್ಮರಣೆ, ಭಜನೆಯೊದಿಗೆ ಪಾದಯಾತ್ರೆ ಮಾಡುತ್ತಾ ಬಂದು ಸೇರುವ ವಾರಕರಿಗಳು. ನಮ್ಮ ಉಡುಪಿಯ ಶ್ರೀಕೃಷ್ಣನೇ ಪಂಢರಪುರದಲ್ಲಿ ಪಾಂಡುರಂಗ ವಿಠಲನಾಗಿ ಇಟ್ಟಿಗೆ ಮೇಲೆ ನಿಂತಿದ್ದಾನೆ. ಆಷಾಡ ಏಕಾದಶಿಯ ದಿನ ಪಾಂಡುರಂಗ , ರುಕ್ಮಿಣಿ ದೇವರಿಗೆ ವಿಶೇಷ ಪೂಜೆ-ಕೈಂಕರ್ಯಗಳು ನಡೆಯುತ್ತವೆ. ಅಂದು ವಿಠಲನ ಪಾದಸ್ಪರ್ಶ ಮಾಡಿದರೆ ಎಲ್ಲಾ ಕಷ್ಟ ಕಾರ್ಪಣ್ಯಗಳು ಬಯಲಾಗುತ್ತವೆ. ಪಾಪಕರ್ಮಗಳಿಗೂ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯೂ ಭಕ್ತರಲ್ಲಿದೆ.

ಭಕ್ತಿ ಪರವಶರಾಗುವ ಕ್ಷಣ
ಕರ್ನಾಟಕದ ವಿವಿಧ ಮೂಲೆಗಳಿಂದಲೂ ವಾರಕರಿಗಳು, ವಿಠಲ ಭಕ್ತರ ದಂಡು ಈಗಾಗಲೇ ಆರಂಭಿಸಿದ್ದಾರೆ. ಆರಂಭವಾಗಿರುವ ಪಾದಯಾತ್ರೆಯನ್ನು ಜೂ.16ರಿಂದಲೇ ವಾರಕರಿ ತೀರ್ಥಯಾತ್ರೆಯಲ್ಲಿ ಬೆಳಗಾವಿ ಜಿಲ್ಲೆ ಭಕ್ತರು ಮಾತ್ರವಲ್ಲದೇ ವಿಜಯಪುರ, ಬಾಗಲಕೋಟೆ, ಬೀದರ್, ಕಲಬುರಗಿ, ಧಾರವಾಡ, ಹಾವೇರಿ, ದಾವಣಗೆರೆ, ಗದಗ, ಕೊಪ್ಪಳ, ಬೀದರ್ ಜಿಲ್ಲೆಯ ಭಕ್ತರು ತಂಡೋಪತಂಡವಾಗಿ ಸಾಗುತ್ತಿದ್ದಾರೆ.

ಜುಲೈ 5ಕ್ಕೆ ಪಂಢರಪುರ ತಲುಪುತ್ತಾರೆ. 6ರಂದು ಆಷಾಢ ಏಕಾದಶಿಯ ಜಾತ್ರೆ ಮುಗಿಸಿ, ವಾಪಸಾಗುತ್ತಾರೆ. ಪಾದಯಾತ್ರೆಯ ಮಾರ್ಗದ ಗ್ರಾಮಗಳಲ್ಲಿ ಭಕ್ತರಿಗೆ ಆಹಾರ, ವಾಸ್ತವ್ಯದ ವ್ಯವಸ್ಥೆಯನ್ನು ಗ್ರಾಮಸ್ಥರು ಸೇವಾ ಭಾವನೆಯಿಂದ ಮಾಡುತ್ತಾರೆ. ತಂಡದಲ್ಲಿ ಒಂದಿಬ್ಬರು
ವಿಠಲನಿಗೆ ಇಷ್ಟವಾಗುವ ತುಳಸಿಯನ್ನು ತಲೆ ಮೇಲೆ ಹೊತ್ತು ನಡೆಯುವುದು ವಾಡಿಕೆ. ಪಾದಯಾತ್ರೆ ಆರಂಭವಾಗಿ ಮುಗಿಯುವ ತನಕ ಎಲ್ಲರೂ ಒಬ್ಬೊಬ್ಬರಾಗಿ ಇದನ್ನು ಒಂದಿಷ್ಟು ದೂರ ಹೊತ್ತು ಸಾಗುತ್ತಾರೆ. ಹಲವರು ದಾನಿಗಳು ಹಣ್ಣು, ನೀರು ತಂಪು ಪಾನೀಯ, ರೊಟ್ಟಿ ಪಲ್ಯ ಹೀಗೆ ಆಹಾರವನ್ನು ಪೊಟ್ಟಣ ಕಟ್ಟಿ ಕೊಡುವುದು ಕೂಡಾ ಸಾಮಾನ್ಯ. ಅಂದಹಾಗೆ ಕಳೆದ ವರ್ಷ ಮನೆಯವ ರೊಂದಿಗೆ ಪಾದಯಾತ್ರೆಯಲ್ಲಿ ಪಂಢರಾಪುರಕ್ಕೆ ತೆರಳಿ ದಾರಿ ತಪ್ಪಿಸಿಕೊಂಡಿದ್ದ ಶ್ವಾನವೊಂದು ಮೂರು ತಿಂಗಳ ಬಳಿಕ ಮನೆ ಹುಡುಕಿ ಮರಳಿ ಮಾಲೀಕನ ಬಳಿ ಬಂದಿದ್ದು ಎಲ್ಲೆಡೆ ಭಾರೀ ಸುದ್ದಿಯಾಗಿತ್ತು. ಅದು ಪವಾಡವೇ ಸರಿ.

ಹಿರಿಯರ ಸೇವೆಗೆ ಸಜ್ಜು
ಆಳಂದದಲ್ಲಿ ಪಾದಯಾತ್ರೆ ಮೂಲಕ ಬಂದು ಕಾಲು ನೋವಾಗಿದ್ದರೆ ಅಂತಹವರಿಗೆ ಶಾಲಾ-ಕಾಲೇಜು ಮಕ್ಕಳು ವ್ಯವಸ್ಥೆ ಮಾಡುವ ಪದ್ಧತಿ ಇದೆ. ದೂರ ದೂರದಿಂದ ನೂರಾರು ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಇಷ್ಟದೇವರ ಕಾಣಲು ಬರುವವರ ಆರೈಕೆ ಮಾಡುವುದನ್ನೇ ಸೇವೆಯೆಂದು ತಿಳಿದುಕೊಂಡು ಕೆಲ ಸೇವಾ ತಂಡಗಳು ಈ ಆರೈಕೆಯನ್ನು ಮಾಡುತ್ತವೆ. ಈ ಭಕ್ತರಿಗೆ ದಾರಿಯಲ್ಲಿ ಜನ ಊಟತಿಂಡಿ ಒದಗಿಸುವುದು ಎಲ್ಲವನ್ನೂ ನೋಡಿದಾಗ ಭಕ್ತಿರಸದ ಮಹಾಪ್ರವಾಹವೇ ಆ ಮೆರವಣಿ ಗೆಯ ರೂಪದಲ್ಲಿ ಹರಿದು ಹೋಗುತ್ತಿದೆಯೇನೋ ಎಂಬಂತೆ ಭಾಸವಾಗದಿರದು. ಮಕ್ಕಳು ಮಹಿಳೆಯರು, ಮುದುಕರು ಯಾರೂ ವಯಸ್ಸನ್ನು ಗಮನಿಸದೆ ಪಾದಯಾತ್ರೆ ಮೂಲಕ ಭಕ್ತಿಪರವಶರಾಗುತ್ತಾರೆ.

ವರದಿ : ಮುರಿಗೆಪ್ಪ ಮಾಲಗಾರ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group