ಸಿಂದಗಿ: ನಗರಕ್ಕೆ ಸರಕಾರದಿಂದ ಮಂಜೂರಾದ ಮನೆಗಳನ್ನು ಪಾರದರ್ಶಕವಾಗಿ ಚೀಟಿ ಎತ್ತುವ ಮೂಲಕ ಫಲಾನುಭವಿಗಳ ಆಯ್ಕೆ ಮಾಡಿ ಈ ಪ್ರಕ್ರಿಯೆಯಲ್ಲಿ ಶಾಸಕರು, ಅಧಿಕಾರಿಗಳು, ಸದಸ್ಯರಷ್ಟೇ ಜವಾಬ್ದಾರರಲ್ಲ. ಅದರಲ್ಲಿ ಸಾರ್ವಜನಿಕ ಜವಾಬ್ದಾರಿಯೂ ಬಹಳ ಮುಖ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡ ಆಶ್ರಯ ಸಮಿತಿ ಸಭೆಯ ನೇತೃತ್ವವನ್ನು ವಹಿಸಿ ಅವರು ಮಾತನಾಡಿದರು.
ಸನ್ 2018-19ರಲ್ಲಿ ಸರಕಾರದಿಂದ 750 ಮನೆಗಳು ಮಂಜೂರಾಗಿದ್ದವು. ಅದರಲ್ಲಿ 389 ಸಾಮಾನ್ಯ, 186 ಪಜಾ/ಪಂಪ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 175 ಫಲಾನುಭವಿಗಳು ಅನರ್ಹಗೊಂಡಿದ್ದು, ಮುಂಬರುವ ದಿನಗಳಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ಜಾಹಿರಾತು ಕರೆದು ಅರ್ಜಿಗಳನ್ನು ಸ್ವೀಕರಿಸಿ ಅರ್ಜಿಗಳನ್ನು ಪರಿಶೀಲಿಸಿ, ಕಡುಬಡವ, ವಸತಿ ರಹಿತ ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಿ ಚೀಟಿ ಮುಖಾಂತರ ಆಯ್ಕೆಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಂತರಗಂಗಿ ರಸ್ತೆಯಲ್ಲಿರುವ 20ಎಕರೆ ಜಮೀನಿನಲ್ಲಿ 411 ನಿವೇಶನಗಳು ತಯಾರಿದ್ದು, ಅದರಲ್ಲಿ ಈಗಾಗಲೇ 186 ಪಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಆ ನಿವೇಶನದಲ್ಲಿ ವಾಸವಿದ್ದರೆ ಮಾತ್ರ ಎಲ್ಲ ಸೌಲಭ್ಯಗಳನ್ನು ನೀಡಿ. ಅಲ್ಲಿ ಅವರು ವಾಸವಾಗಿರದಿದ್ದರೆ ಮೂರು ನೋಟಿಸ್ ನೀಡಿ ಅವರ ನಿವೇಶನವನ್ನು ಅನರ್ಹಗೊಳಿಸಿ. ಉಳಿದ 225 ನಿವೇಶನಗಳ ಅರ್ಜಿ ಕರೆದು ಪಲಾನುಭವಿಗಳನ್ನು ಚೀಟಿ ಮೂಲಕ ಆಯ್ಕೆ ಮಾಡಬೇಕೆಂದು ತಿಳಿಸಿದರು.
ವಿದ್ಯಾನಗರದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 105 ಮನೆಗಳು ನಿರ್ಮಾಣ ಹಂತದಲ್ಲಿವೆ. ಇನ್ನುಳಿದ ಜಾಗೆಯಲ್ಲಿ 195 ಪಲಾನುಭವಿಗಳ ವಂತಿಗೆ ಹಣವನ್ನು ಭರಣಾ ಮಾಡಿಕೊಂಡು ನಿರ್ಮಾಣ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸರ್ವೇ ನಂ. 473 ಮತ್ತು 474 ಜಾಗೆಯನ್ನು ಹದ್ದು ಬಸ್ತ ಮಾಡಿಕೊಳ್ಳಬೇಕು. ಕ್ರಮಬದ್ದವಾಗಿ ನಿವೇಶನಗಳನ್ನು ರೂಪಿಸಿ ಹಂಚಿಕೆ ಮಾಡಬೇಕು. 2003ರಲ್ಲಿ ಹಂಚಿಕೆಯಾದ ಹಕ್ಕು ಪತ್ರಗಳಲ್ಲಿ ಸ್ಥಳೀಕರಿಲ್ಲ ಎಂಬ ಮಾತು ಕೇಳಿ ಬಂದಿದ್ದು, ಎಲ್ಲ ಅಧಿಕಾರಿಗಳು ಸ್ಥಾನಿಕವಾಗಿ ವಿಚಾರಣೆ ಮಾಡಬೇಕು. ಒಂದು ವೇಳೆ ಅಲ್ಲಿ ಗ್ರಾಮೀಣ ಮಟ್ಟದ ನಿವಾಸಿಗಳು ಇದ್ದರೆ ಅನರ್ಹಗೊಳಿಸಿ ಎಂದರು.
ಈ ವೇಳೆ ಆಶ್ರಯ ಸಮಿತಿ ಸದಸ್ಯ ಭೀಮು ರೋಡಗಿ ಮಾತನಾಡಿ, ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ ಅವಧಿಯಲ್ಲಿ 1625 ಆಶ್ರಯ ಮನೆಗಳು ಮಂಜೂರಾಗಿದ್ದು, ಇಲ್ಲಿಯರೆಗೆ ಕೇವಲ 517 ಜನ ಪಲಾನುಭವಿಗಳು ಮಾತ್ರ ಸದುಪಯೋಗ ಮಾಡಿಕೊಂಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷದಿಂದ ಇನ್ನುಳಿದ 1058 ಪಲಾನುಭವಿಗಳು ವಂಚಿತರಾಗಿದ್ದಾರೆ. ಡಿಸೆಂಬರ್ 2025ರೊಳಗಾಗಿ ಪಲಾನುಭವಿಗಳಿಗೆ ಸೌಲಭ್ಯ ದೊರಯದಿದ್ದರೆ ಪಲಾನುಭವಿಗಳ ಹಣ ನಿಗಮಕ್ಕೆ ಮರಳಿ ಹೋಗುತ್ತವೆ ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಪುರಸಭೆ ಮುಖ್ಯಾಧಿಕಾರಿ ಎಸ್. ರಾಜಶೇಖರ, ಸಿಬ್ಬಂದಿಳಾದ ದಯಾನಂದ ಇವಣಿ, ನಬಿರಸೂಲ್ ಉಸ್ತಾದ್, ಸಿದ್ದು ಅಂಗಡಿ, ಸಚಿನ ಮೋರಟಗಿ, ಖ್ಯಾತಪ್ಪ ಕುಂಬಾರ, ದತ್ತಾತ್ರೇಯ ಹಳ್ಳಿ, ಆಶ್ರಯ ಸಮಿತಿ ಸದಸ್ಯರಾದ ಮಲ್ಲು ಸದುಗೋಳ, ರಾಜು ಖೇಡ, ಶೈಲಾ ಪೂಜಾರಿ ಸೇರಿದಂತೆ ಇತರರು ಇದ್ದರು.
ಸರ್ಕಾರದಿಂದ ಮಂಜೂರಾದ 750 ಮನೆಗಳಲ್ಲಿ ಕೆಲವು ಬೋಗಸ್ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಪರಿಶೀಲಿಸಿ ಮನೆಗಳನ್ನು ತಡೆ ಹಿಡಿಯುವಂತೆ ಅರ್ಜಿ ಸಲ್ಲಿಸಿದ್ದೆ. ತಡೆಹಿಡಿದ ಮನೆಗಳನ್ನು ಪಾರದರ್ಶಕವಾಗಿ ಚೀಟಿ ಮೂಲಕ ಮರು ಆಯ್ಕೆಮಾಡಬೇಕೆನ್ನುವ ನಿರ್ಣಯ ಸ್ವಾಗತಾರ್ಹ.ದೂರು ಸಲ್ಲಿಸಿ ಸಿಂದಗಿ ನಗರದ ಜನತೆಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿರುವೆ. ಎಷ್ಟರ ಮಟ್ಟಿಗೆ ಪಾರದರ್ಶಕವಾಗಿ ಮಾಡುತ್ತಾರೆ ಎಂಬುದು ಕಾದು ನೋಡಬೇಕಿದೆ. ಪಟ್ಟಣದ ಜನತೆಗೆ ಅನ್ಯಾಯವಾದರೆ ನನ್ನ ಹೋರಾಟ ನಿರಂತರ.
ಶಿವಾನಂದ ಆಲಮೇಲ, ಸಾಮಾಜಿಕ ಹೋರಾಟಗಾರ