ಸಿಂದಗಿ: ಪಟ್ಟಣದಲ್ಲಿ ಶ್ರೀ ವೀರಭದ್ರದೇವರು ಹಾಗೂ ಭದ್ರಕಾಳಿ ಅಮ್ಮನವರ ಬೆಳ್ಳಿ ರಥವನ್ನು ನೂರಾರು ಮಹಿಳೆಯರು ಎಳೆಯುವುದರ ಮೂಲಕ ತಮ್ಮ ಭಕ್ತಿ ಪರಕಾಷ್ಠೆಯನ್ನು ಸಮರ್ಪಿಸಿದರು.
ಸಾರಂಗಮಠದ ಪೂಜ್ಯ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿ, ಇಲ್ಲಿನ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ಭಕ್ತರ ಇಚ್ಛೆಗಳ ಈಡೇರಿಕೆಗಾಗಿ ಕಳೆದ ಆರು ವರ್ಷಗಳಿಂದ ಮಹಿಳೆಯರೇ ಈ ರಥವನ್ನು ಎಳೆಯುವ ಸಂಪ್ರದಾಯಕ್ಕೆ ವಿಶೇಷ ಮನ್ನಣೆ ಕೊಟ್ಟಿರುವುದು ಇತಿಹಾಸ ಎಂದರು.
ರಥದ ಬೆಳ್ಳಿ ಪೀಠದಲ್ಲಿ ರಾರಾಜಿಸುತ್ತಿದ್ದ ವೀರಭದ್ರದೇವರು ಮತ್ತು ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿಗಳೊಂದಿಗೆ ಸಾಗಿದ ರಥ ಮತ್ತು ಬೆಳ್ಳಿ ಪಲ್ಲಕ್ಕಿ, ನಗರದ ಸಾರಂಗಮಠದಿಂದ ಆರಂಭಗೊಂಡು, ಸ್ವಾಮಿ ವಿವೇಕಾನಂದ ವೃತ್ತ, ತೋಂಟದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳ ರಸ್ತೆ ಮಾರ್ಗವಾಗಿ, ಕಾಯಿಪಲ್ಲೆ ಮಾರ್ಕೆಟ್ ಬಳಿ ಇರುವ ಗಚ್ಚಿನಮಠದ ಚೆನ್ನವೀರ ಸ್ವಾಮೀಜಿ ಪ್ರೌಡಶಾಲೆಯ ಅವರಣದಲ್ಲಿರುವ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ದೇವಸ್ಥಾನಕ್ಕೆ ತೆರಳಿತು.
ನಗರದುದ್ದಕ್ಕೂ ವೀರಗಾಸೆ ಕುಣಿತ ಜನಮನಗೆದ್ದಿತು. ಪುರವಂತಿಕೆ, ಜಯ ಘೋಷಗಳೊಂದಿಗೆ ಬೆಳ್ಳಿ ರಥ ಹಾಗೂ ಪಲ್ಲಕ್ಕಿ ವಿಜೃಂಭಣೆಯಿಂದ ಮೂಡಿ ಬಂದಿತು.
ನಂತರ ದೇವಸ್ಥಾನದ ಬೆಳ್ಳಿ ಪಲ್ಲಕ್ಕಿಯೊಂದಿಗೆ ಅಗ್ನಿ ಪ್ರವೇಶ ಮಾಡಲಾಯಿತು. ರಥೋತ್ಸವದಲ್ಲಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಕೊಣ್ಣೂರಿನ ಹೊರಗಿನಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಪಾಳ ಮಠದ ಡಾ. ಗುರುಮೂರ್ತಿ ಶಿವಾಚಾರ್ಯರು, ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಕೊಕಟನೂರ ಶ್ರೀಗಳು, ದೇವರ ಹಿಪ್ಪರಗಿ ಶ್ರೀಗಳು, ಕುಮಸಗಿ ಶ್ರೀಗಳು ಸೇರಿದಂತೆ ತಾಲೂಕಿನ ವಿವಿಧ ಮಠದ ಶ್ರೀಗಳ, ರವಿ ಗೋಲಾ, ಎಸ್.ಎಂ ಬಿರಾದಾರ, ಡಾ.ಶರಣಬಸವ ಜೋಗುರ, ವಿರೇಶ ಜೋಗುರ, ಶಿವಕುಮಾರ ಜೋಗುರ, ಮುತ್ತು ಮುಂಡೇವಾಡಗಿ, ಶ್ರೀಶೈಲ ನಂದಿಕೋಲ, ಅಶೋಕ ವಾರದ, ಸೋಮನಗೌಡ ಬಿರಾದಾರ, ನೆಹರೂ ಪೋರವಾಲ್, ಅಶೋಕ ಮಸಳಿ, ಸಂಸ್ಥೆಯ ಆಡಳಿತ ಮಂಡಳಿ, ಸಂಸ್ಥೆಯ ಅಂಗ ಸಂಸ್ಥೆಗಳ ಪ್ರಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ಮಹಿಳಾ ಭಕ್ತ ವರ್ಗ, ತಾಲೂಕಿನ ಶ್ರೀಮಠದ ಭಕ್ತರು ಜಿ.ಪಿ.ಪೋರವಾಲ್ ಮತ್ತು ಆರ್.ಡಿ. ಪಾಟೀಲ ಕಾಲೇಜಿನ ಎನ್.ಸಿ.ಸಿ, ಎನ್ಎಸ್ಎಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಇದ್ದರು.