Homeಲೇಖನಕಲ್ಪತರು ದಿನದ ಶುಭಾಶಯಗಳು

ಕಲ್ಪತರು ದಿನದ ಶುಭಾಶಯಗಳು

ಶ್ರೀ ರಾಮಕೃಷ್ಣ ಪರಮಹಂಸರು ಭಕ್ತರಿಗೆಲ್ಲ ದಿವ್ಯ ದರುಶನ ಕೊಟ್ಟು, ಇಷ್ಟಾರ್ಥಗಳನ್ನ ಆಶೀರ್ವದಿಸಿದ ಸುದಿನ.

ಜನವರಿ 1 ಕಲ್ಪತರು ದಿನ !

ಸಾಮಾನ್ಯವಾಗಿ ಏನಿದು ಕಲ್ಪತರು ದಿನ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೋಜು, ಮಸ್ತಿ, ಕುಡಿಯೋದು, ಕುಣಿಯೋದರಲ್ಲೇ ಸಮಯ ಕಳೆಯುವ ಕೆಲವರಿಗೆ ಈ ದಿನದ ಮಹತ್ವ ಹೇಗೆ ಗೊತ್ತಾಗುತ್ತದೆ..?

ನಮ್ಮದೇ ಸಂಸ್ಕೃತಿಯ ಕಲ್ಪತರು ದಿನಾಚರಣೆ ಮಾಡುವುದು ಬೇಡವೇ..?

ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಕೊನೆಯ ದಿನಗಳನ್ನು ಕಲ್ಕತ್ತದ ಕಾಶಿಪುರದ ಉದ್ಯಾನಗೃಹದಲ್ಲಿ ಕಳೆದರು. ನರೇಂದ್ರನೂ, ಅವನ ಸ್ನೇಹಿತರೂ ಸೇರಿ ಭಜನೆ ಪ್ರಾರ್ಥನೆ-ಧ್ಯಾನ ಮಾಡುತ್ತಾರೆ. ಶಿಷ್ಯರೆಲ್ಲ ಹೀಗೆ ಸಾಧನೆ ಮಾಡಿ ಭಗವಂತನ ಕೃಪೆಯನ್ನು ಬೇಡಿದಾಗ, ಆ ದೇವಾಲಯದ ದೇವಮೂರ್ತಿ ಶ್ರೀರಾಮಕೃಷ್ಣರು ಅನುಗ್ರಹ ಮಾಡುವ ರೀತಿ ಅಪೂರ್ವ.

ಅಂದು 1886ನೇ ವರ್ಷದ ಜನವರಿ ಒಂದನೇ ತಾರೀಖು.

ಇಂಗ್ಲಿಷ್ ವರ್ಷದ ಮೊದಲನೇ ದಿನ. ರಜಾದಿನ. ಅಂದು ಹಲವಾರು ಜನ ಭಕ್ತರು ಶ್ರೀರಾಮಕೃಷ್ಣರ ದರ್ಶನಕ್ಕೆ ಕಾಶಿಪುರಕ್ಕೆ ಬಂದಿದ್ದರು. ಶ್ರೇಷ್ಠ ಭಕ್ತ ಗಿರೀಶಚಂದ್ರನೂ ಬಂದಿದ್ದ. ಆಗ ಶ್ರೀರಾಮಕೃಷ್ಣರು ನೇರವಾಗಿ ಅವನ ಕಡೆಗೆ ಬಂದು ಕೇಳಿದರು. “ಗಿರೀಶ್, ನೀನು ನನ್ನ ವಿಷಯವಾಗಿ ಎಲ್ಲರ ಮುಂದೆ ಏನೇನೊ (ಅವರು ಅವತಾರ ಪುರುಷರು ಎಂದು) ಸಾರುತ್ತಿದ್ದಿಯಲ್ಲ. ನೀನು ಅಂಥಾದ್ದೇನನ್ನು ಕಂಡೆ ನನ್ನಲ್ಲಿ?” ಈ ಪ್ರಶ್ನೆಗೆ ಗದ್ಗದ ಧ್ವನಿಯಲ್ಲಿ ಉತ್ತರಿಸಿದ ಗಿರೀಶ್ ” ಯಾರ ಮಹಿಮೆಯನ್ನು ವರ್ಣಿಸುವಲ್ಲಿ ವ್ಯಾಸ-ವಾಲ್ಮೀಕಿಗಳೂ ಅಸಮರ್ಥರಾಗಿದ್ದಾರೋ ಅಂತಹ ಮಹಾಮಹಿಮನ ವಿಚಾರವಾಗಿ ನನ್ನಂಥವನು ಏನುತಾನೆ ಹೇಳಬಲ್ಲ!” ಎಂದ.

ಇದನ್ನು ಕೇಳಿದೊಡನೇ ಶ್ರೀರಾಮಕೃಷ್ಣರಲ್ಲಿ ಭಾವವುಕ್ಕಿಬಂದು ಗಾಢ ಸಮಾಧಿಸ್ಥರಾಗಿಬಿಟ್ಟರು. ಗಿರೀಶ್ ಇದನ್ನು ಕಂಡು ಆನಂದಭರಿತನಾಗಿ “ಜೈ ಶ್ರೀರಾಮಕೃಷ್ಣ! ಜೈ ಶ್ರೀರಾಮಕೃಷ್ಣ! ” ಎಂದು ಘೋಷಿಸುತ್ತ ಅವರ ಪಾದಧೂಳಿಯನ್ನು ತೆಗೆದುಕೊಂಡು ಹಣೆಗಿಟ್ಟುಕೊಂಡ.

ಆಗ ಶ್ರೀರಾಮಕೃಷ್ಣರು ಮಂದಸ್ಮಿತ ವದನರಾಗಿ “ನಾನಿನ್ನೇನು ತಾನೆ ಹೇಳಲಿ! ನಿಮಗೆಲ್ಲರಿಗೂ ಆಧ್ಯಾತ್ಮಿಕ ಜಾಗೃತಿಯುಂಟಾಗಲಿ!” ಎಂದುದ್ಗರಿಸಿದರು. ತಮ್ಮ ಬಳಿಗೆ ಬಂದ ಪ್ರತಿಯೊಬ್ಬನ ಎದೆಯನ್ನೂ ಮುಟ್ಟಿ ‘ನಿನಗೆ ಆತ್ಮಜಾಗೃತವಾಗಲಿ’ ಎಂದು ಹರಸಿದರು.

(ಇಂದಿಗೂ ಜನವರಿ ಒಂದರಂದು ಕಾಶೀಪುರದ ಆ ದಿವ್ಯ ಉದ್ಯಾನದಲ್ಲಿ ಲಕ್ಷಗಟ್ಟಲೆ ಜನ ಸೇರಿ ಅತ್ಯುತ್ಸಾಹದಿಂದ ಕಲ್ಪತರು ದಿನಾಚರಣೆ‘ಯನ್ನು ಆಚರಿಸುತ್ತಾರೆ.

ನಾವು ಶ್ರೀರಾಮಕೃಷ್ಣರ ಮುಂದೆ ಕುಳಿತು ಏನಾದರೂ ಶ್ರೇಷ್ಠ ಸಂಕಲ್ಪ ಮಾಡೋಣ.

ಶ್ರೀ ರಾಮಕೃಷ್ಣಾರ್ಪಣ ಮಸ್ತು

(ವಾಟ್ಸಪ್ ನಿಂದ ಬಂದಿದ್ದು)

RELATED ARTICLES

Most Popular

error: Content is protected !!
Join WhatsApp Group