ಸವದತ್ತಿ – “ವೃತ್ತಿ ಜೀವನದಲ್ಲಿ ನಿವೃತ್ತಿ ಸಹಜ.ಸೇವೆಯ ಅವಧಿಯಲ್ಲಿ ಮಾದರಿಯಾದ ಕೆಲಸಗಳನ್ನು ಮಾಡಿದರೆ ಜನರು ನೆನೆಸುತ್ತಾರೆ. ಅದರಲ್ಲೂ ಶಿಕ್ಷಕ ವೃತ್ತಿ ಪವಿತ್ರವಾದುದು. ಈ ಸಂದರ್ಭದಲ್ಲಿ ಮಕ್ಕಳಿಗೆ ನೀಡಿದ ಜ್ಞಾನ ಅವಿಸ್ಮರಣೀಯ.
ಈ ದಿಸೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರ ಗೌರವ ಸನ್ಮಾನದ ಬೀಳ್ಕೊಡುಗೆ ನಿಜಕ್ಕೂ ಅವರಿಗೆ ಸಲ್ಲಿಸಬೇಕಾದ ಜವಾಬ್ದಾರಿ.ನಾವು ಈ ಭೂಮಿಯ ಮೇಲೆ ಎಷ್ಟು ವರ್ಷ ಬದುಕುತ್ತೇವೆ ಎಂಬುದು ಮುಖ್ಯವಲ್ಲ ಹೇಗೆ ಬದುಕಿದೆವು ಎಂಬುದು ಮಹತ್ವದ್ದು. ಶಿಕ್ಷಕ ವೃತ್ತಿಯುದ್ದಕ್ಕೂ ಮಕ್ಕಳಿಗೆ ವಿದ್ಯೆಯನ್ನು ನೀಡುತ್ತ ನಿವೃತ್ತಿ ಹೊಂದಿದ ಮೇಲೂ ಕೂಡ ಜ್ಞಾನವನ್ನು ನೀಡುವುದನ್ನು ಮುಂದುವರೆಸುತ್ತ ಉತ್ತಮ ಬದುಕು ಹೊಂದಿರಿ. ನಿಮ್ಮೆಲ್ಲರ ಜೀವನ ಸುಖ ಶಾಂತಿ ನೆಮ್ಮದಿಯಿಂದ ತುಂಬಿರಲಿ” ಎಂದು ವಿಧಾನಸಭಾ ಉಪಸಭಾಧ್ಯಕ್ಷ ಮತ್ತು ಶಾಸಕರಾದ ಆನಂದ ಮಾಮನಿಯವರು ಶುಭ ಕೋರಿದರು.
ಅವರು ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಜರುಗಿದ ಸವದತ್ತಿ ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಚಿಕ್ಕುಂಬಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ ಎಸ್.ವ್ಹಿ.ಬೆಳವಡಿ ಹಾಗೂ ಇನ್ನಿತರ 19 ಜನ ಶಿಕ್ಷಕ ಶಿಕ್ಷಕಿಯರ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
“ಸವದತ್ತಿಯಲ್ಲಿ ನಿರ್ಮಾಣವಾಗುತ್ತಿರುವ ಗುರುಭವನದ ಮುಂದಿನ ಕೆಲಸವನ್ನು ನಿವೃತ್ತಿಯಾದರೂ ಕೂಡ ತಮ್ಮ ಬಿಡುವನ್ನು ಈ ಕೆಲಸಕ್ಕೆ ಬೆಳವಡಿಯವರು ವಹಿಸಿಕೊಳ್ಳಬೇಕು. ಅವರೊಂದಿಗೆ ಪ್ರಸಕ್ತ ಸಂಘದ ಪದಾಧಿಕಾರಿಗಳು ಕೈ ಜೋಡಿಸಿದರೆ ಸರ್ಕಾರದಿಂದ ಸಿಗಬೇಕಾದ ಹಣಕಾಸಿನ ನೆರವನ್ನು ನಾನು ಖುದ್ದಾಗಿ ಒದಗಿಸಿಕೊಡುವೆನು.ಮುಂದಿನ ಸೆಪ್ಟೆಂಬರ್ ವೇಳೆಗೆ ಆ ಕಾಮಗಾರಿ ಎಲ್ಲರೂ ಸೇರಿ ಮುಗಿಸಲು ಪ್ರಯತ್ನಿಸಿರಿ”ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ರಮೇಶ ಗೋಣಿಯವರು ಮಾತನಾಡಿ “ಬೀಳ್ಕೊಡುವ ಸಮಾರಂಭ ಆತ್ಮೀಯವಾದ ಕಾರ್ಯ. ಇಲ್ಲಿ ಬೆಳವಡಿಯವರು ನಿಮಿತ್ತ ಮಾತ್ರ ಅವರೊಟ್ಟಿಗೆ 19 ಜನ ನಿವೃತ್ತರನ್ನೂ ಸನ್ಮಾನಿಸಿ ಗೌರವಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ನಮಗೆಲ್ಲ ಬೆಳವಡಿಯವರ ಕಾರ್ಯ ಮಾದರಿ. ಅವರ ಸರಳತೆ, ಸಂಘಟನಾ ಚತುರತೆ ಮುಂದಿನ ದಿನಗಳಲ್ಲಿಯೂ ಕೂಡ ಮಾರ್ಗದರ್ಶನದಲ್ಲಿ ನಮಗೆಲ್ಲ ದೊರೆಯಲಿ ದೇವರು ಅವರಿಗೆ ಆಯುರಾರೋಗ್ಯ ಕರುಣಿಸಲಿ”ಎಂದು ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಜಯಕುಮಾರ ಹೆಬಳಿ, “ ಇಲಾಖೆಗೆ ಸರಕಾರಿ ವಿವಿಧ ಯೋಜನೆಗಳನ್ನು ನೀಡಿದೆ.ಅದರಲ್ಲಿ ಮಹತ್ವವಾಗಿ ಮಹಿಳೆಯರಿಗೆ ಪ್ರಸೂತಿ ರಜೆ. ಆರೋಗ್ಯ ಸಿರಿಯಂತಹ ಯೋಜನೆಗಳನ್ನು ನೀಡುವ ಮೂಲಕ ಅನುಕೂಲ ಕಲ್ಪಿಸಿದೆ.ಇನ್ನು ಪ್ರಧಾನ ಗುರುಗಳಿಗೆ 30 ದಿನಗಳ ಗಳಿಕೆ ರಜೆ ಮತ್ತು ಪ್ರಭಾರಿ ಪ್ರಧಾನ ಗುರುಗಳಿಗೆ ನಿರ್ವಹಣಾ ಭತ್ಯೆ ಸೇರಿದಂತೆ ಇನ್ನೂ ಹಲವು ಮಹತ್ವದ ಆದೇಶಗಳು ಮುಂದಿನ ದಿನಗಳಲ್ಲಿ ಜಾರಿಯಾಗಲಿವೆ. ಎಸ್.ವ್ಹಿ.ಬೆಳವಡಿಯವರು ಸವದತ್ತಿ ತಾಲೂಕಿನ ಅಧ್ಯಕ್ಷರಾದರೂ ಜಿಲ್ಲೆಯ ಎಲ್ಲರಿಗೂ ಆತ್ಮೀಯರಾದವರು. ಅವರ ಸಂಘಟನಾ ಶಕ್ತಿ ನಮಗೆ ಮಾದರಿ. ಹಿರಿಯರಾದ ಅವರ ಮಾರ್ಗದರ್ಶನ ಮುಂದೆಯೂ ನಮಗೆ ದೊರೆಯಲಿ.
ಈಗಾಗಲೇ ಶಿಕ್ಷಕರಿಗೆ ಹತ್ತು ಹಲವು ಸೌಲಭ್ಯಗಳು ದೊರೆಯಲು ಶಿಕ್ಷಕ ಸ್ನೇಹಿ ಆ್ಯಪ್ನ್ನು ಬೆಳಗಾವಿ ನಗರ ಬೆಳಗಾವಿ ಗ್ರಾಮೀಣ ಸವದತ್ತಿ ರಾಮದುರ್ಗ ತಾಲೂಕುಗಳಲ್ಲಿ ಮಾಡಲಾಗಿದ್ದು ಜಿ.ಪಿ.ಎಫ್ ಮಾಹಿತಿ. ವೇತನ ಮಾಹಿತಿ.ಇನ್ಕಂ ಟ್ಯಾಕ್ಸ ಮಾಹಿತಿ ಸೇರಿದಂತೆ ಹತ್ತು ಹಲವು ಮಾಹಿತಿಗಳನ್ನು ಶಿಕ್ಷಕರು ಹೊಂದಲು ಈ ತಂತ್ರಜ್ಞಾನ ಮಾಹಿತಿ ತುಂಬ ಉಪಕಾರಿಯಾಗಿದ್ದು ಮುಂದಿನ ದಿನಗಳಲ್ಲಿ ಇದರಲ್ಲಿ ಇನ್ನೂ ಹತ್ತಾರು ಮಹತ್ವದ ಮಾಹಿತಿಗಳನ್ನು ಕಾಲಕಾಲಕ್ಕೆ ಸೇರಿಸುತ್ತ ಸಾಗಲಾಗುವುದು. ಇದರ ಸದುಪಯೋಗ ಶಿಕ್ಷಕರು ಹೊಂದುವಂತಾಗಲಿ”ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಮಾತನಾಡಿ, “ ಬೆಳವಡಿಯವರು ಇಲಾಖೆಯ ಎಲ್ಲ ಅಧಿಕಾರಿಗಳೊಂದಿಗೆ ಸೌಜನ್ಯಯುಳ್ಳವರಾಗಿ ಸ್ನೇಹಪರವಾಗಿ ಇಲಾಖೆಯ ಆಗುಹೋಗುಗಳಿಗೆ ತಕ್ಷಣ ಸ್ಪಂದಿಸುವ ಜೊತೆಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತ ಬಂದಿರುವರು. ಅವರಿಗೆ ದೇವರು ಆಯುರಾರೋಗ್ಯ ಕರುಣಿಸಲಿ”ಎಂದು ಶುಭ ಕೋರಿದರು. ಇದೇ ಸಂದರ್ಭದಲ್ಲಿ ಸವದತ್ತಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ ವತಿಯಿಂದ ಜಿಲ್ಲಾ ಸಂಘದ ವತಿಯಿಂದ ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗತವಾಗಿ ಸನ್ಮಾನಗಳು ಜರುಗಿದವು.
ಈ ಕಾರ್ಯಕ್ರಮದಲ್ಲಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರಾದ ಜಗದೀಶ ಶಿಂತ್ರಿ.ಜಿಲ್ಲಾ ಪ್ರಾಥಮಿಕ ಶಾಲಾ ಅಧ್ಯಕ್ಷರಾದ ಜಯಕುಮಾರ ಹೆಬಳಿ.ಪ್ರಧಾನ ಕಾರ್ಯದರ್ಶಿಗಳಾದ ರಮೇಶ ಗೋಣಿ. ಬೆಳಗಾವಿ ನಗರ ಅಧ್ಯಕ್ಷರಾದ ಬಾಬು ಸೊಲಗನ್ನವರ, ಬೆಳಗಾವಿ ಗ್ರಾಮೀಣ ಅಧ್ಯಕ್ಷರಾದ ಡಿ.ಎಸ್.ದಯನ್ನವರ. ಸವದತ್ತಿ ಪರಸಗಡ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮನೋಹರ ಚೀಲದ ನೌಕರರ ಸಂಘದ ಅಧ್ಯಕ್ಷರಾದ ಆನಂದಕುಮಾರ ಮೂಗಬಸವ. ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಿದ್ಧನಗೌಡರ.ಕೋಶಾಧ್ಯಕ್ಷರಾದ ವೈ.ಬಿ.ಪೂಜೇರ. ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ಕೋಲಕಾರ.ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸಿ.ವೈ.ತುಬಾಕಿ. ಸಂಘದ ಪದಾಧಿಕಾರಿಗಳಾದ ಎಫ್.ಜಿ.ನವಲಗುಂದ.ನಿರಂಜನ ಮೆಳವಂಕಿ.ಎಂ.ಎಸ್.ಹೊಂಗಲ.ಡಿ.ಎ.ಮೇಟಿ. ನರೇಂದ್ರ.ವ್ಹಿ.ಜಿ.ಚಂದರಗಿ.ಎಸ್.ಜಿ.ಮಿಕಲಿ.ನದಾಫ ಎಸ್.ಎಲ್.ಮಲ್ಲಪ್ಪ ಯರಜರ್ವಿ.ಐ.ಪಿ.ಕಿತ್ತೂರೆ.ಎಚ್.ಆರ್.ಪೆಟ್ಲೂರ.ಶ್ರೀಮತಿ ನಾಗರತ್ನಾ ಕುಸಗಲ್. ಶ್ರೀಮತಿ ಪ್ರೇಮಾ ಹಲಕಿ. ಶ್ರೀಮತಿ ಎಸ್.ಎಂ.ಮೇಗೇರಿ.ಅನಸೂಯ ಮದನಬಾವಿ.ಸೋಮನಿಂಗ ಪಾಶ್ಚಾಪುರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಗುರುಮಾತೆ ವ್ಹಿ.ಎಸ್.ಮಹೇಂದ್ರಕರ ಪ್ರಾರ್ಥನಾ ಗೀತೆ ಹಾಡಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕ ಘಟಕದ ಉಪಾಧ್ಯಕ್ಷರಾದ ಎಂ.ಎಸ್.ಕೋಳಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕರಾದ ಎ.ಎ.ಅಣ್ಣೀಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಂ.ಪಿ.ಪಾಟೀಲ ನಿರೂಪಿಸಿದರು. ತಿಪ್ಪಾನಾಯ್ಕ ಎಲ್. ವಂದಿಸಿದರು.